13 ವೇಯ್ಟರ್ ಕೆಲಸಕ್ಕೆ 7,000 ಅರ್ಜಿ! ಇದು ವಿದ್ಯಾವಂತರ ಪಾಡು
ಮುಂಬೈ, ಜನವರಿ 22: ಕೆಲಸ ಖಾಲಿ ಇರುವುದು ಕೇವಲ 13 ಜನರಿಗೆ. ಆದರೆ ಅದಕ್ಕೆ ಬಂದಿರುವುದು ಬರೋಬ್ಬರಿ 7 ಸಾವಿರ ಅರ್ಜಿ. ಉದ್ಯೋಗ ಜಾಹೀರಾತಿನ ಪ್ರಕಾರ ಈ ಕೆಲಸಕ್ಕೆ ನಾಲ್ಕನೆಯ ತರಗತಿ ಪಾಸಾಗಿದ್ದರೂ ಸಾಕು. ಆದರೆ, ಅರ್ಜಿ ಹಾಕಿರುವವರಲ್ಲಿ ಹೆಚ್ಚಿನವರು ಪದವೀಧರರು!
ಹಾಗೆಂದು ಇದು ಯಾವುದೋ ಪ್ರಮುಖ ಹುದ್ದೆಯ ಕೆಲಸವಲ್ಲ. ಮಹಾರಾಷ್ಟ್ರದ ಸಚಿವಾಲಯದ ಕ್ಯಾಂಟೀನ್ನಲ್ಲಿನ ವೇಯ್ಟರ್ ಕೆಲಸಕ್ಕೆ ಬಂದಿರುವ ಅರ್ಜಿಗಳಿವು. ರಾಜ್ಯದಲ್ಲಿನ ನಿರುದ್ಯೋಗದ ಹೀನಾಯ ಸ್ಥಿತಿಗೆ ಹಿಡಿದ ಕನ್ನಡಿಯಿದು.
ಸಚಿವಾಲಯದ ಕ್ಯಾಂಟೀನ್ನಲ್ಲಿನ 13 ಸಪ್ಲೈಯರ್ಗಳ ಕೆಲಸಕ್ಕಾಗಿ ನಾಲ್ಕನೆಯ ತರಗತಿ ಓದಿದ್ದರೂ ಸಾಕು ಎಂದು ಉದ್ಯೋಗ ಜಾಹೀರಾತಿನಲ್ಲಿ ಪ್ರಕಟಣೆ ನೀಡಲಾಗಿತ್ತು. ಆದರೆ, ಕೆಲಸವಿಲ್ಲದೆ ಕಂಗಾಲಾಗಿರುವ ಕಾಲೇಜು ಪದವೀಧರರೂ ಅರ್ಜಿ ಗುಜರಾಯಿಸಿದ್ದಾರೆ.

ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರಲ್ಲಿ ವಿಫಲರಾದ ಮಹಾರಾಷ್ಟ್ರ ಸರ್ಕಾರದ ಲಕ್ಷಣವಿದು ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖಂಡ ನವಾಬ್ ಮಲಿಕ್ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಯಾವುದೇ ಹೊಸ ಕೈಗಾರಿಕೆಗಳು ಬರುತ್ತಿಲ್ಲ. ನಿರ್ಮಾಣ ಕಾಮಗಾರಿಗಳೂ ನಿಂತುಹೋಗಿವೆ. ಈಗ ಯಾವುದೇ ಹೊಸ ಯೋಜನೆಗಳಿಲ್ಲ. ಎಲ್ಲೆಡೆ ನಿರುದ್ಯೋಗದ ಬಿಕ್ಕಟ್ಟು ಉಂಟಾಗಿದೆ. ಜನರು ಸಂಕಟಪಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಆರೋಪವನ್ನು ರಾಜ್ಯ ಬಿಜೆಪಿ ಸರ್ಕಾರ ಅಲ್ಲಗಳೆದಿದೆ. ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸಲು ಯಾರನ್ನೂ ನಾವು ತಡೆಯಲು ಸಾಧ್ಯವಿಲ್ಲ. ನಾವು ಅನೇಕ ಉದ್ಯೋಗಗಳನ್ನು ಸೃಷ್ಟಿಸಿದ್ದೇವೆ ಎಂದು ಹಣಕಾಸು ಸಚಿವ ಸುಧೀರ್ ಮುಂಗಂಟಿವರ್ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications