ಭೀಮಾ ಕೋರೆಗಾಂವ್ ಆರೋಪಿಗೆ ಕನ್ನಡಕ ನಿರಾಕರಿಸಿದ ಜೈಲು: ತನಿಖೆಗೆ ಆದೇಶ
ಮುಂಬೈ, ಡಿಸೆಂಬರ್ 10: ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಗೌತಮ್ ನವ್ಲಖಾ ಅವರಿಗೆ ಮನೆಯವರು ಕಳುಹಿಸಿದ ಕನ್ನಡಕವನ್ನು ಸ್ವೀಕರಿಸಲು ತಲೋಜಾ ಜೈಲಿನ ಅಧಿಕಾರಿಗಳು ನಿರಾಕರಿಸಿರುವುದು ಭಾರಿ ವಿವಾದ ಸೃಷ್ಟಿಸಿದೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಆದೇಶಿಸಿದ್ದಾರೆ.
ಎಲ್ಗರ್ ಪರಿಷದ್-ಮಾವೋವಾದಿ ಸಂಪರ್ಕ ಪ್ರಕರಣದ ಆರೋಪಿಯಾಗಿರುವ ಗೌತಮ್ ನವ್ಲಖಾ ಅವರಿಗೆ ಕುಟುಂಬದವರು ಕನ್ನಡಕವನ್ನು ಪಾರ್ಸೆಲ್ ಮೂಲಕ ಕಳುಹಿಸಿದ್ದರು. ಆದರೆ ಜೈಲಿನ ಅಧಿಕಾರಿಗಳನ್ನು ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
'ಕುಟುಂಬದವರು ಕಳುಹಿಸಿದ ಪಾರ್ಸೆಲ್ ಸ್ವೀಕರಿಸಲು ಒಪ್ಪದ ಜೈಲಿನ ಅಧಿಕಾರಿಗಳು ಭೀಮಾ-ಕೋರೆಗಾಂವ್ ಪ್ರಕರಣದ ಆರೋಪಿ ಗೌತಮ್ ನವ್ಲಖಾ ಅವರಿಗೆ ಕನ್ನಡಕ ನೀಡಲು ನಿರಾಕರಿಸಿದ್ದಾರೆ. ಈ ವಿಚಾರದ ಕುರಿತು ನಾನು ತನಿಖೆಗೆ ಆದೇಶಿಸಿದ್ದೇನೆ. ಈ ಪರಿಸ್ಥಿತಿಯನ್ನು ಮಾನವೀಯತೆಯಿಂದ ನಿಭಾಯಿಸಬೇಕಿತ್ತು ಎಂದು ನಾನು ನಂಬುತ್ತೇನೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಬೇಕಿದೆ' ಎಂದು ಅನಿಲ್ ದೇಶ್ಮುಖ್ ಟ್ವೀಟ್ ಮಾಡಿದ್ದಾರೆ.

ತಲೋಜಾ ಜೈಲಿನಲ್ಲಿರುವ ನವ್ಲಖಾ ಅವರ ಕನ್ನಡಕವನ್ನು ನ. 27ರಂದು ಕದಿಯಲಾಗಿತ್ತು ಕನ್ನಡಕವಿಲ್ಲದೆ ನವ್ಲಖಾ ಅವರು ಹೆಚ್ಚೂ ಕಡಿಮೆ ಅಂಧರಾಗಿದ್ದರು. ಈ ತಿಂಗಳ ಆರಂಭದಲ್ಲಿ ಅಂಚೆ ಮೂಲಕ ಅವರಿಗೆ ಹೊಸ ಕನ್ನಡಕವನ್ನು ಕಳುಹಿಸಿದ್ದರೂ ಜೈಲಿನ ಅಧಿಕಾರಿಗಳು ಅದನ್ನು ಸ್ವೀಕರಿಸಲು ಒಪ್ಪದೆ ವಾಪಸ್ ಕಳುಹಿಸಿದ್ದಾರೆ ಎಂದು ಕುಟುಂಬದವರು ಸೋಮವಾರ ಆರೋಪಿಸಿದ್ದರು.
ಜೈಲಿನ ಒಳಗೆ ಕನ್ನಡ ಹೇಗೆ ಕಳ್ಳತನವಾಗಲು ಸಾಧ್ಯ? ಕುಟುಂಬದವರು ಕೊರಿಯರ್ ಮೂಲಕ ಕಳುಹಿಸಿದ ಹೊಸ ಕನ್ನಡಕವನ್ನು ಸ್ವೀಕರಿಸಲು ಜೈಲಿನ ಅಧಿಕಾರಿಗಳು ಏಕೆ ನಿರಾಕರಿಸಿದರು? ಎಂದು ಬಾಂಬೆ ಹೈಕೋರ್ಟ್ನ ವಿಭಾಗೀಯ ಪೀಠ ಪ್ರಶ್ನಿಸಿದೆ.












Click it and Unblock the Notifications