ಮಹಾರಾಷ್ಟ್ರ: ಮುಖ್ಯಮಂತ್ರಿ ಸ್ಥಾನಕ್ಕೆ ಫಡ್ನವೀಸ್ ರಾಜೀನಾಮೆ
ಮುಂಬೈ, ನವೆಂಬರ್ 8: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟಿನ ನಡುವೆಯೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಜತೆಯಲ್ಲಿ ಸಚಿವ ಸಂಪುಟ ಕೂಡ ರಾಜ್ಯಪಾಲರಿಗೆ ಶುಕ್ರವಾರ ರಾಜೀನಾಮೆ ಸಲ್ಲಿಸಿದೆ.
ಶುಕ್ರವಾರ ಸಂಜೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಿದ ದೇವೇಂದ್ರ ಫಡ್ನವೀಸ್ ಮತ್ತು ಅವರ ಸಂಪುಟದ ಸಚಿವರು ರಾಜೀನಾಮೆ ಪತ್ರ ಸಲ್ಲಿಸಿದರು. ರಾಜ್ಯ ವಿಧಾನಸಭೆ ವಿಸರ್ಜನೆಗೂ ಮುನ್ನ ಫಡ್ನವೀಸ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
Recommended Video
ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಮೂರು ವಾರ ಕಳೆದರೂ ಸರ್ಕಾರ ರಚನೆಯ ತಿಕ್ಕಾಟ ಪರಿಹಾರ ಕಂಡಿಲ್ಲ. ಸರ್ಕಾರ ರಚನೆಯಾಗುವವರೆಗೂ ಫಡ್ನವೀಸ್ ಅವರು ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಭಾವಿಸಲಾಗಿತ್ತು. ಈಗ ಫಡ್ನವೀಸ್ ರಾಜೀನಾಮೆ ನೀಡಿರುವುದರಿಂದ ಮಹಾರಾಷ್ಟ್ರದಲ್ಲಿ ಅಧಿಕೃತವಾಗಿ ಆಡಳಿತ ಸ್ಥಗಿತಗೊಂಡಂತಾಗಿದೆ.
ಮುಖ್ಯಮಂತ್ರಿ ಮತ್ತು ಸಂಪುಟದ ರಾಜೀನಾಮೆಯೊಂದಿಗೆ ಮಹಾರಾಷ್ಟ್ರದಲ್ಲಿ ವಿಧಾನಸಭೆ ವಿಸರ್ಜನೆಯಾದಂತಾಗಿದೆ. ಪ್ರಸ್ತುತ ಇದ್ದ ವಿಧಾನಸಭೆಯ ಆಡಳಿತಾವಧಿಯು ಶುಕ್ರವಾರ ಮಧ್ಯರಾತ್ರಿಗೆ ಅಂತ್ಯವಾಗುತ್ತದೆ. ಅದಕ್ಕೂ ಮೊದಲು ಸರ್ಕಾರ ರಚನೆಗೆ ಯಾವುದೇ ಪಕ್ಷ ರಾಜ್ಯಪಾಲರ ಮುಂದೆ ಬಂದು ಹಕ್ಕು ಮಂಡಿಸದೆ ಇದ್ದರೆ ರಾಜ್ಯದಲ್ಲಿ ರಾಷ್ಟ್ರಪತಿಗಳ ಆಡಳಿತ ಹೇರಿಕೆಯಾಗಲಿದೆ.

ಅಭಿವೃದ್ಧಿಯ ಮೆಲಕು
ರಾಜ್ಯಪಾಲರ ಭೇಟಿಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ದೇವೇಂದ್ರ ಫಡ್ನವೀಸ್ ತಮ್ಮ ರಾಜೀನಾಮೆಯನ್ನು ಖಚಿತಪಡಿಸಿದರು. ತಮಗೆ ಐದು ವರ್ಷ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸಲು ಅವಕಾಶ ನೀಡಿದ ಪಕ್ಷ, ಬಿಜೆಪಿಯ ಹಿರಿಯ ಮುಖಂಡರು ಮತ್ತು ಜನರಿಗೆ ಧನ್ಯವಾದ ಸಲ್ಲಿಸಿದರು. ಜತೆಗೆ ಬಿಜೆಪಿ ಮಿತ್ರಪಕ್ಷ ಶಿವಸೇನಾಕ್ಕೂ ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ಫಡ್ನವೀಸ್ ವಿವಿಧ ನೀರಾವರಿ ಯೋಜನೆಗಳು ಮತ್ತು ಹೊಸ ಅಭಿವೃದ್ಧಿ ಯೋಜನೆಗಳು ನಡೆದಿವೆ ಎಂಬುದನ್ನು ನೆನಪಿಸಿಕೊಂಡರು.

ಶಿವಸೇನಾದಿಂದ ದ್ರೋಹ
ಚುನಾವಣೆಯಲ್ಲಿ ಬಿಜೆಪಿಯು ನಿರೀಕ್ಷಿಸಿದ್ದಕ್ಕಿಂತಲೂ ಕಡಿಮೆ ಸೀಟುಗಳನ್ನು ಪಡೆದುಕೊಂಡಿದೆ. ಆದರೆ ಜನರು ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ. ಉದ್ಧವ್ ಠಾಕ್ರೆ ಅವರು ಮೊದಲು ನೀಡಿದ್ದ ವಚನವನ್ನು ಮೀರಿ 2,5 ವರ್ಷ ಮುಖ್ಯಮಂತ್ರಿ ಗಾದಿಗೆ ಬೇಡಿಕೆ ಸಲ್ಲಿಸುವ ಮೂಲಕ ಜನರಿಗೆ ಆಘಾತ ನೀಡಿದ್ದಾರೆ. ತಮ್ಮ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಗಾದಿಯ ಹಂಚಿಕೆ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಶಿವಸೇನಾ ಅಂತಹ ಬೇಡಿಕೆ ಇರಿಸುವ ಮೂಲಕ ಜನರ ತೀರ್ಪಿಗೆ ದ್ರೋಹ ಎಸಗಿದೆ. ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ನಿತಿನ್ ಗಡ್ಕರಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

ಶಿವಸೇನಾ ಪ್ರತಿಕ್ರಿಯೆ ನೀಡುತ್ತಿಲ್ಲ
2.5 ವರ್ಷ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಶಿವಸೇನಾ ಜತೆ ಚರ್ಚೆಗಳು ನಡೆದಿದ್ದವು. ಆದರೆ ಈ ಮಾತುಕತೆಗಳು ಮುರಿದುಬಿದ್ದಿದ್ದು, ಈ ವಿಚಾರದ ಬಗ್ಗೆ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ. ಶಿವಸೇನಾ, ಬಿಜೆಪಿ ಜತೆ ಮಾತುಕತೆ ನಡೆಸುವುದನ್ನು ನಿಲ್ಲಿಸಿ ಎನ್ಸಿಪಿ ಮತ್ತು ಕಾಂಗ್ರೆಸ್ ಜತೆ ಚರ್ಚಿಸುತ್ತಿದೆ. ನನ್ನ ಕರೆಗಳಿಗೆ ಉದ್ಧವ್ ಠಾಕ್ರೆ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಿದರು.

ಶಾಸಕರ ಖರೀದಿ ಸಾಬೀತುಪಡಿಸಿ
ನಾವು ಸರ್ಕಾರ ರಚನೆಗೆ ಪ್ರಯತ್ನ ಮುಂದುವರಿಸಲಿದ್ದೇವೆ. ಆದರೆ ಕೆಲವು ಜನರು ಉದ್ದೇಶಪೂರ್ವಕವಾಗಿ ನಮ್ಮ ವಿರುದ್ಧ ಕುದುರೆ ವ್ಯಾಪಾರದ ಆರೋಪ ಮಾಡುತ್ತಿದ್ದಾರೆ. ಈ ಆರೋಪಕ್ಕೆ ಪುರಾವೆ ನೀಡಿ ಇಲ್ಲವೇ ಕ್ಷಮೆ ಯಾಚಿಸಿ ಎಂದು ಅವರಿಗೆ ಸವಾಲು ಹಾಕುತ್ತೇನೆ. ಬಿಜೆಪಿ ಪಕ್ಷಾಂತರ ಮಾಡಿಸುವ ಅಥವಾ ಶಾಸಕರನ್ನು ಖರೀದಿಸುವ ಯಾವುದೇ ರಾಜಕೀಯ ಮಾಡುವುದಿಲ್ಲ. ನಮಗೆ ಅದರ ಅಗತ್ಯವಿಲ್ಲ ಎಂದು ಹೇಳಿದರು.

ಸೇನಾ ಹೇಳಿಕೆ ಸಹನೀಯವಲ್ಲ
ನಾವು ಬಾಳಸಾಹೇಬ್ ಠಾಕ್ರೆ ಅವರನ್ನು ಅಪಾರವಾಗಿ ಗೌರವಿಸುತ್ತಿದ್ದೆವು. ವಾಸ್ತವವಾಗಿ ನಾವು ಉದ್ಧವ್ ಠಾಕ್ರೆ ಅವರ ವಿರುದ್ಧ ಕೂಡ ಏನನ್ನೂ ಹೇಳಿಲ್ಲ. ಆದರೆ ಕಳೆದ ಐದು ವರ್ಷಗಳಲ್ಲಿ, ಮುಖ್ಯವಾಗಿ ಕಳೆದ ಹತ್ತು ದಿನಗಳಲ್ಲಿ ಮೋದಿಜಿ ಸೇರಿದಂತೆ ನಮ್ಮ ಹಿರಿಯ ನಾಯಕತ್ವದ ವಿರುದ್ಧ ಅವರು ನೀಡಿರುವ ಹೇಳಿಕೆಗಳು ಸಹನೀಯವಲ್ಲ ಎಂದು ಶಿವಸೇನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಫಡ್ನವೀಸ್ ಹಂಗಾಮಿ ಸಿಎಂ
ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ಅಥವಾ ಬೇರೆ ಪರ್ಯಾಯ ಮಾರ್ಗ ಕಂಡುಕೊಳ್ಳುವವರೆಗೂ ದೇವೇಂದ್ರ ಫಡ್ನವೀಸ್ ಹಂಗಾಮಿ ಮುಖ್ಯಮಂತ್ರಿಯಾಗಿ ಇರಲಿದ್ದಾರೆ.

ಮುಂದುವರಿದ ತಿಕ್ಕಾಟ
ಮಹಾರಾಷ್ಟ್ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ವ್ಯಕ್ತವಾಗಿಲ್ಲ. ಚುನಾವಣಾ ಪೂರ್ವ ಮೈತ್ರಿಮಾಡಿಕೊಂಡಿದ್ದ ಬಿಜೆಪಿ ಮತ್ತು ಶಿವಸೇನಾ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಸಂಘರ್ಷ ನಡೆಯುತ್ತಿದೆ. 50:50ರಲ್ಲಿ ಅಧಿಕಾರ ಹಂಚಿಕೆಗೆ ಶಿವಸೇನಾ ಪಟ್ಟು ಹಿಡಿದಿದೆ. ಮುಖ್ಯಮಂತ್ರಿ ಸ್ಥಾನ ಹಂಚಿಕೆಯಾಗಬೇಕು ಎಂಬ ಅದರ ವಾದಕ್ಕೆ ಬಿಜೆಪಿ ಮಣಿದಿಲ್ಲ. 2018ರ ಅಕ್ಟೋಬರ್ನಲ್ಲಿ ಶಿವಸೇನಾ ಜತೆ ಸೇರಿ ಸರ್ಕಾರ ರಚಿಸಿ ಐದು ವರ್ಷ ಆಡಳಿತ ನಡೆಸಿದ್ದ ಫಡ್ನವೀಸ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ಶಿವಸೇನಾದ ಹಠಕ್ಕೆ ತಾನು ಮಣಿಯುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿ ರವಾನಿಸಿದಂತಾಗಿದೆ.












Click it and Unblock the Notifications