ಲಾಕ್ಡೌನ್ನಲ್ಲಿ ಬಾವಿ ತೋಡಿದ ದಂಪತಿ: ಅದೃಷ್ಟಕ್ಕೆ ನೀರು ಬಂತು
ವಾಶಿಮ್, ಏಪ್ರಿಲ್ 21: ''ಲಾಕ್ಡೌನ್ ಆಗಿದೆ, ಹೊರಗಡೆ ಎಲ್ಲಿಯೂ ಹೋಗುವ ಹಾಗೆ ಇರಲಿಲ್ಲ. ಹಾಗಾಗಿ ನನ್ನ ಹೆಂಡತಿ ಏನಾದರೂ ಮಾಡಬೇಕು ಎಂದು ಹೇಳಿದಳು. ಹಾಗಾಗಿ ನಾವು ಬಾವಿ ತೋಡಿದೆವು.'' ಎಂದು ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಲಾಕ್ಡೌನ್ ಸಮಯದಲ್ಲಿ ತಾವು ಮಾಡಿದ ಕೆಲಸದ ಬಗ್ಗೆ ಹೇಳಿಕೊಳ್ಳುತ್ತಾರೆ.
ಮಹಾರಾಷ್ಟ್ರದ ವಾಶಿಮ್ ನಗರದ ಕಾರ್ಖೆಡಾ ಎಂಬ ಹಳ್ಳಿಯಲ್ಲಿ ಗಜಾನನ ಎಂಬ ವ್ಯಕ್ತಿ ಹಾಗೂ ಆಕೆಯ ಪತ್ನಿ ತಮ್ಮ ಮನೆಯ ಮುಂದೆ ಬಾವಿ ತೋಡಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಹೊರಗೆ ಎಲ್ಲೂ ಹೋಗಲು ಆಗದೆ ಇರುವ ಕಾರಣ ಮನೆಯಲ್ಲಿ ಏನಾದರೂ ಮಾಡಬೇಕು ಎಂದು 25 ಅಡಿ ಭೂಮಿ ತೋಡಿದ್ದಾರೆ.
21 ದಿನಗಳ ಕಾಲ ಸತತವಾಗಿ ಭೂಮಿಯನ್ನು ತೋಡಿ, 25 ಅಡಿ ಆಳಕ್ಕೆ ಹೋದ ಹಾಗೆಯೇ ಭೂಮಿಯಲ್ಲಿ ನೀರು ಬಂದಿದೆ. ಸುಮ್ಮನೆ ಬಿಡುವಿದೆ ಎಂದು ಬಾವಿ ತೋಡಿದ್ದು, ಅದರಲ್ಲಿ ನೀರು ಬಂದಿದ್ದು, ದಂಪತಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

''ಪೂಜೆ ಮಾಡಿ ಬಾವಿ ತೋಡಲು ಶುರು ಮಾಡಿದ್ವಿ. ಅಕ್ಕ ಪಕ್ಕದ ಮನೆಯವರು ನಮ್ಮನ್ನು ಅಪಹಾಸ್ಯ ಮಾಡಿದರು. ಆದರೆ, ನಾವು ಬಾವಿ ತೋಡಿದೆವು. 21 ದಿನದಲ್ಲಿ ನೀರು ಬಂತು'' ಎಂದು ಗಜಾನನ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ 4,203 ಕೊರೊನಾ ಪ್ರಕರಣಗಳು ದೃಢವಾಗಿವೆ. ಇದರಲ್ಲಿ 223 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.












Click it and Unblock the Notifications