ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಗೆ ಆಘಾತ: ಬಿಜೆಪಿಯತ್ತ ಪ್ರಭಾವಿ ಮುಖಂಡ
ಮುಂಬೈ, ಜೂನ್ 4: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಬಸವಳಿದಿರುವ ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ಗೆ ಮಹಾರಾಷ್ಟ್ರದಲ್ಲಿ ಮತ್ತೊಂದು ಆಘಾತ ಎದುರಾಗಿದೆ. ಮಹಾರಾಷ್ಟ್ರದ ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಧಾಕೃಷ್ಣ ವಿಖೆ ಪಾಟೀಲ್, ಮಂಗಳವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅವರು ವಿಧಾನಸಭೆ ಸ್ಪೀಕರ್ ಹರಿಭಾವ್ ಬಾಗಡೆ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ರಾಧಾಕೃಷ್ಣ ಅವರು ಬಿಜೆಪಿ ಸೇರುವ ಮೂಲಕ ಮಗನನ್ನು ಅನುಸರಿಸುವ ಸಾಧ್ಯತೆ ದಟ್ಟವಾಗಿದೆ.
ಮಹಾರಾಷ್ಟ್ರ : ವಿಪಕ್ಷ ನಾಯಕ ಸ್ಥಾನಕ್ಕೆ ರಾಧಾಕೃಷ್ಣ ರಾಜೀನಾಮೆ
ರಾಧಾಕೃಷ್ಣ ಅವರ ಮಗ ಸುಜಯ್ ಅವರು ಲೋಕಸಭೆ ಚುನಾವಣೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ಮಹಾರಾಷ್ಟ್ರ ಘಟಕದ ಇನ್ನೂ ಅನೇಕ ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
ತಾವು ಬಿಜೆಪಿ ಸೇರ್ಪಡೆಯಾಗಿರುವುದಕ್ಕೆ ತಂದೆ ರಾಧಾಕೃಷ್ಣ ಅವರು ತಮ್ಮೊಂದಿಗೆ ಮಾತೂ ಕೂಡ ಆಡುತ್ತಿಲ್ಲ ಎಂದು ಸುಜಯ್ ಅವರು ಲೋಕಸಭೆ ಚುನಾವಣೆಗೂ ಮುನ್ನ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು. ವಿವಿಧೆಡೆ ಪ್ರಚಾರ ನಡೆಸುವ ಸಂದರ್ಭದಲ್ಲಿ ಸುಜಯ್ ಅವರು, ತಂದೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸುವ ಮೂಲಕ ಕಾಂಗ್ರೆಸ್ನಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದ್ದರು.
ಅಹಮದ್ನಗರದಲ್ಲಿ ಕಾಂಗ್ರೆಸ್ ಶಕ್ತಿಯುತವಾಗಿದ್ದು 1952ರಿಂದ ಇದುವರೆಗೂ ಸೋಲು ಕಂಡಿಲ್ಲ. ರಾಧಾಕೃಷ್ಣ ಅವರು ಇಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದ ಎನ್ಸಿಪಿ, ಅಹಮದ್ನಗರ ಕ್ಷೇತ್ರ ತನಗೇ ಬೇಕೆಂದು ಪಟ್ಟುಹಿಡಿದಿತ್ತು. ಹೀಗಾಗಿ ಕಾಂಗ್ರೆಸ್ ತೊರೆದಿದ್ದ ಸುಜಯ್ ಬಿಜೆಪಿ ಸೇರಿಕೊಂಡಿದ್ದರು. ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಎನ್ಸಿಪಿಯ ಸಂಗ್ರಾಮ್ ಜಗಪತ್ ಅವರನ್ನು 2,81,474 ಮತಗಳಿಂದ ಸೋಲಿಸಿ ಸುಜಯ್ ಸಂಸತ್ ಪ್ರವೇಶಿಸಿದ್ದರು.
ಮಗನ ಹಾದಿಯಲ್ಲೇ ಸಾಗಿ, ಬಿಜೆಪಿ ಸೇರಿದ ಕಾಂಗ್ರೆಸ್ ಮುಖಂಡ ಪಾಟೀಲ್
ಕೆಲವು ದಿನಗಳ ಹಿಂದೆ ರಾಧಾಕೃಷ್ಣ ಅವರು ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರನ್ನು ಭೇಟಿ ಮಾಡಿದ್ದರು. ಮಗ ಗೆಲುವಿಗಾಗಿ ಶ್ರಮಿಸಿದ್ದಕ್ಕೆ ಧನ್ಯವಾದ ಹೇಳಲು ಬಂದಿದ್ದಾಗಿ ತಿಳಿಸಿದ್ದರು.
'ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನ್ನ ಮಗನ ಪರ ಬಹಿರಂಗವಾಗಿಯೇ ಪ್ರಚಾರ ನಡೆಸಿದ್ದೆ. ಹೀಗಾಗಿ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿತ್ತು. ನನ್ನ ಮಗನಿಗೆ ಟಿಕೆಟ್ ನಿರಾಕರಿಸಿದ್ದು ಅನ್ಯಾಯ. ಇದು ಕಾಂಗ್ರೆಸ್ನ ನೀತಿಗಳನ್ನು ತೋರಿಸುತ್ತದೆ' ಎಂದು ಅವರು ಆರೋಪಿಸಿದ್ದರು.