ಸಾವರ್ಕರ್ಗೆ ಭಾರತ ರತ್ನ: ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ
ಮುಂಬೈ, ಅಕ್ಟೋಬರ್ 15: ಹಿಂದುತ್ವ ಪ್ರತಿಪಾದಕ ವೀರ್ ಸಾವರ್ಕರ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡುವುದಾಗಿ ಬಿಜೆಪಿ ತನ್ನ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ.
ವಿನಾಯಕ ದಾಮೋದರ ಸಾವರ್ಕರ್ ಅಲ್ಲದೆ ಸಮಾಜ ಸುಧಾರಕರಾದ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರಿಗೂ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ನೀಡುವುದಾಗಿ ಘೋಷಿಸಿದೆ.
ಶಿವಸೇನಾ ಜತೆಗೂಡಿ ಚುನಾವಣೆ ಎದುರಿಸುತ್ತಿರುವ ಬಿಜೆಪಿ 'ಸಂಕಲ್ಪ ಪತ್ರ' ಹೆಸರಿನಲ್ಲಿ 44 ಪುಟಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಸಾವರ್ಕರ್ ಸೇರಿದಂತೆ ಮೂವರಿಗೆ ಭಾರತ ರತ್ನ ನೀಡುವ ವಿಚಾರದಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದೆ.

ಸ್ವಾತಂತ್ರ್ಯ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಸಾವರ್ಕರ್ ಅವರ ಕುರಿತು ಅನೇಕ ಆರೋಪಗಳೂ ಇವೆ. ಜೈಲು ಶಿಕ್ಷೆಯಿಂದ ಬಚಾವಾಗುವ ಸಲುವಾಗಿ ಬ್ರಿಟಿಷರಿಗೆ ಪರವಾಗಿ ಕೆಲಸ ಮಾಡಿದ್ದರು. ಅಲ್ಲದೆ, ಮಹಾತ್ಮ ಗಾಂಧಿ ಹತ್ಯೆಯ ಪ್ರಕರಣದಲ್ಲಿ ಕೂಡ ಅವರ ಪಾತ್ರವಿತ್ತು ಎಂಬ ಆರೋಪಗಳಿವೆ. ಅವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಅವರ ಕುರಿತು ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂಬ ಇನ್ನೊಂದು ವಾದವಿದೆ.
ಸೆಪ್ಟೆಂಬರ್ನಲ್ಲಿ ಪ್ರಚಾರ ಭಾಷಣದ ವೇಳೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, 'ಭಾರತ ವಿಭಜನೆಯ ಸಮಯದಲ್ಲಿ ಸಾವರ್ಕರ್ ಪ್ರಧಾನಿಯಾಗಿದ್ದರೆ ಪಾಕಿಸ್ತಾನ ಸೃಷ್ಟಿಯೇ ಆಗುತ್ತಿರಲಿಲ್ಲ' ಎಂದಿದ್ದರು.
'ಸ್ವಾತಂತ್ರ್ಯಕ್ಕಾಗಿ ಗಾಂಧಿ ಮತ್ತು ನೆಹರೂ ಮಾಡಿರುವ ಕೆಲಸವನ್ನು ನಿರಾಕರಿಸುವುದಿಲ್ಲ. ರಾಜಕೀಯ ಹಿನ್ನೆಲೆಯಲ್ಲಿ ಬದುಕಿದ ಎರಡು ಕುಟುಂಬಗಳಾಚೆ ದೇಶ ಅನೇಕರನ್ನು ನೋಡಿದೆ. ಸಾರ್ವಕರ್ 14 ವರ್ಷಗಳಷ್ಟು ಸುದೀರ್ಘ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ನೆಹರೂ 14 ನಿಮಿಷ ಜೈಲಿನಲ್ಲಿ ಉಳಿದುಕೊಂಡಿದ್ದರೂ ನಾನು ಅವರನ್ನು 'ವೀರ' ಎಂದು ಕರೆಯುತ್ತಿದ್ದೆ' ಎಂದು ವಾಗ್ದಾಳಿ ನಡೆಸಿದ್ದ ಠಾಕ್ರೆ, ಸಾವರ್ಕರ್ಗೆ ಭಾರತ ರತ್ನ ಸಿಗಬೇಕು ಎಂದು ಪ್ರತಿಪಾದಿಸಿದ್ದರು.












Click it and Unblock the Notifications