ಮಹಾರಾಷ್ಟ್ರದಲ್ಲಿ ವರುಣನ ಆರ್ಭಟಕ್ಕೆ 102 ಮಂದಿ ಬಲಿ
ಮುಂಬೈ, ಜುಲೈ 17: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಪ್ರವಾಹ ಸಂಬಂಧಿತ ಪ್ರಕರಣಗಳಲ್ಲಿ ಈವರೆಗೆ 102 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಹಾರಾಷ್ಟ್ರದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕೃತ ವರದಿ ಹೇಳಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 3 ಸಾವುಗಳು ವರದಿಯಾಗಿರುವುದು ಸೇರಿದಂತೆ ಒಟ್ಟು 102 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ನಾಗ್ಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 15 ಸಾವುಗಳು ದಾಖಲಾಗಿವೆ. ನಾಸಿಕ್ನಲ್ಲಿ 13 ನಾಗರಿಕರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಪ್ರವಾಹ, ಸಿಡಿಲು ಬಡಿತ, ಭೂಕುಸಿತ, ಮರ ಬಿದ್ದಿರುವುದು ಮತ್ತು ಭೂ ಕುಸಿತದಂತಹ ಘಟನೆಗಳಿಂದ ಈ ಸಾವುಗಳು ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ ಧಾರಾಕಾರ ಮಳೆಯಯಿಂದ ಒಟ್ಟು 68 ಜನರು ಗಾಯಗೊಂಡಿದ್ದಾರೆ. ಇದುವರೆಗೆ 189 ಪ್ರಾಣಿಗಳು ಸಾವನ್ನಪ್ಪಿವೆ.
ಸರ್ಕಾರ ಕ್ರಮಗಳೇನು?; ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರ ಹಲವು ಜಿಲ್ಲೆಗಳಲ್ಲಿ ಒಟ್ಟು 13 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ಮೂರು ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್ಡಿಆರ್ಎಫ್) ತಂಡಗಳನ್ನು ನಿಯೋಜಿಸಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಸುಮಾರು 12 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಒಟ್ಟು 73 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ.
ಪ್ರಸ್ತುತ 14 ಎನ್ಡಿಆರ್ಎಫ್ ತಂಡಗಳು ಮತ್ತು ಎಸ್ಡಿಆರ್ಎಫ್ನ 5 ತಂಡಗಳು ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸುತ್ತಿವೆ. ಎನ್ಡಿಆರ್ಎಫ್ನ 13 ತಂಡಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ನಿಯೋಜಿಸಿದ್ದರೆ, 3 ತಂಡಗಳನ್ನು ಪೂರ್ವಭಾವಿಯಾಗಿ ನಿಯೋಜಿಸಲಾಗಿದೆ.
ಅತಿವೃಷ್ಟಿಯಿಂದ ರಾಜ್ಯದ 20 ಗ್ರಾಮಗಳು ಹಾನಿಗೀಡಾಗಿವೆ. 3,873 ಜನರನ್ನು ಸ್ಥಳಾಂತರಿಸಿ, ಪರಿಹಾರ ಶಿಬಿರಗಳಿಗೆ ಕಳುಹಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕೃತ ವರದಿ ತಿಳಿಸಿದೆ.
ಮಹಾರಾಷ್ಟ್ರದ ಪುಣೆ, ಸತಾರಾ, ಸೋಲಾಪುರ್, ನಾಸಿಕ್, ಜಲಗಾಂವ್, ಅಹಮದ್ನಗರ, ಬೀಡ್, ಲಾತೂರ್, ವಾಶಿಮ್, ಯವತ್ಮಾಲ್, ಧುಲೆ, ಜಲ್ನಾ, ಅಕೋಲಾ, ಭಂಡಾರಾ, ಬುಲ್ಧಾನ, ನಾಗ್ಪುರ, ನಂದೂರ್ಬಾರ್, ಉಪ, ಪಾಲ್ಘರ್, ಥಾಣೆ, ನಾಂದೇಡ್, ಅಮರಾವತಿ, ವಾರ್ಧಾ, ರತ್ನಗಿರಿ, ಸಿಂಧುದುರ್ಗ, ಗಡ್ಚಿರೋಲಿ, ಸಾಂಗ್ಲಿ, ಚಂದ್ರಾಪುರ, ಮುಂಬೈ ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ 28 ಜಿಲ್ಲೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
ಕಳೆದ 24 ಗಂಟೆಗಳಲ್ಲಿ ಗಡ್ಚಿರೋಲಿ ಮತ್ತು ಚಂದ್ರಾಪುರ ಜಿಲ್ಲೆಗಳ 20 ಹಳ್ಳಿಗಳಲ್ಲಿ ಸರಾಸರಿ 20.5 ಮಿ. ಮೀ. ಮಳೆಯಾಗಿದೆ, ಮುಂಬೈ-ಗೋವಾ ಹೆದ್ದಾರಿಯಲ್ಲಿರುವ ಪರಶುರಾಮ್ ಘಾಟ್ ಬಂದ್ ಮಾಡಲಾಗಿದೆ.
ಇದಕ್ಕೂ ಮುನ್ನ ಜುಲೈ 14 ರಂದು ಭಾರತೀಯ ಹವಾಮಾನ ಇಲಾಖೆ (IMD) ಮಹಾರಾಷ್ಟ್ರದ ಪಾಲ್ಘರ್ನಲ್ಲಿ ರೆಡ್ ಅಲರ್ಟ್ ಘೊಷಿಸಿತ್ತು. ಜಿಲ್ಲೆಯ ಪ್ರಮುಖ ನದಿಗಳಾದ ವೈತರ್ಣಾ, ತಾನ್ಸಾ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜುಲೈ 17 ರಂದು ಮಧ್ಯ ಮಹಾರಾಷ್ಟ್ರದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆ (64.5 ರಿಂದ 115.5 ಮಿ. ಮೀ.) ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.