ಕರ್ನಾಟಕಕ್ಕೂ ತಟ್ಟಿದ ಮುಂಬೈ ಬಂದ್ ಬಿಸಿ: ಬಸ್ ಸೇವೆ ಸ್ಥಗಿತ
ಮುಂಬೈ, ಜನವರಿ 03: ಭೀಮ ಕೊರೆಗಾಂವ್ ಕದನದ 200ನೇ ವರ್ಷಾಚರಣೆಯ ವೇಳೆ ಮಹಾರಾಷ್ಟ್ರದ ಪುಣೆಯಲ್ಲಿ ಆರಂಭವಾದ ಹಿಂಸಾಚಾರ ವಿಕೋಪಕ್ಕೆ ತಲುಪಿದೆ. ಮರಾಠರು ಮತ್ತು ದಲಿತರ ನಡುವಿನ ಈ ಕಲಹದಿಂದಾಗಿ ಇಂದು(ಜನವರಿ 03) ಮಹಾರಾಷ್ಟ್ರದಾದ್ಯಂತ ಬಂದ್ ಆಚರಿಸಲಾಗುತ್ತಿದೆ.
ದಲಿತರ ಮೇಲೆ ಮರಾಠರು ದೌರ್ಜನ್ಯ ನಡೆಸುತ್ತಿದ್ದಾರೆಂದು ಆರೋಪಿಸಿ ಬಿಬಿಎಂ (ಭರಿಪ ಬಹುಜನ ಮಹಾಸಂಘ) ಮುಖ್ಯಸ್ಥ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು ಮಹಾರಾಷ್ಟ್ರ ಬಂದ್ ಗೆ ಕರೆ ನೀಡಿದ್ದರು. ಇದಕ್ಕೆ ಬಹುಪಾಲು ದಲಿತ ಸಂಘಟನೆಗಳು ಬೆಂಬಲ ಸೂಚಿಸಿವೆ. ಬಂದ್ ನಿಮಿತ್ತ ಪುಣೆ, ಮುಂಬೈ ಸೇರಿದಂತೆ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.
ಭೀಮ ಕೋರೆಗಾಂವ್ ಹಿಂಸಾಚಾರ: ದಲಿತ ಸಂಘಟನೆಗಳಿಂದ ಬುಧವಾರ ಮಹಾರಾಷ್ಟ್ರ ಬಂದ್
ಜನವರಿ 1, 1818 ರಂದು ನಡೆದ ಕೊರೆಗಾಂವ್ ಕದನದಲ್ಲಿ ಪೇಶ್ವೆಗಳ ವಿರುದ್ಧ ಹೋರಾಡುವುದಕ್ಕೆ ಬ್ರಿಟೀಶ್ ಈಸ್ಟ್ ಇಂಡಿಯಾ ಕಂಪೆನಿಯೊಂದಿಗೆ ಕೈಜೋಡಿಸಿದ್ದ ಮೆಹರ್ ಸಮುದಾಯ ಈ ಹೋರಾಟದಲ್ಲಿ ಗೆಲುವು ಸಾಧಿಸಿತ್ತು. ಈ ಹೋರಾಟ ಬೀಮ ಕೊರೆಗಾಂವ್ ಎಂಬ ಪ್ರದೇಶದಲ್ಲಿ ನಡೆದಿದ್ದರಿಂದ ಇದನ್ನು ಭೀಮ ಕೊರೆಗಾಂವ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ.
ಈ ದಿನದ 200 ವರ್ಷಾಚರಣೆಯನ್ನು ಜ.1 ರಂದು ಪುಣೆಯಲ್ಲಿ ಆಚರಿಸಲಾಗುತ್ತಿತ್ತು. ಈಸ್ಟ್ ಇಂಡಿಯಾ ಕಂಪೆನಿಯ ಗೆಲುವನ್ನು ಸಂಭ್ರಮಿಸುತ್ತಿರುವ ದಲಿತರ ನಡೆಯನ್ನು ಖಂಡಿಸಿ ಕೆಲವ ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ ಈ ಹಿಂಸಾಚಾರ ಆರಂಭವಾಗಿದೆ.
ಭೀಮಾ ಕೊರೆಗಾಂವ್ ದಲಿತರ ಪ್ರತಿರೋಧದ ಸಂಕೇತ: ರಾಹುಲ್ ಗಾಂಧಿ
ಮುಂಬೈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ನೀಡಲಿದೆ.
ಮಧ್ಯಾಹ್ನ 12.45: ಅಂಧೇರಿಯ ಪಶ್ಚಿಮ ಎಕ್ಸ್ಪ್ರೆಸ್ ರೈಲ್ವೇ ಬಳಿ ರಸ್ತಾ ರುಕೋ ಚಳವಳಿ
ಮಧ್ಯಾಹ್ನ 12.30: ಬೃಹನ್ಮುಂಬೈ ವಿದ್ಯತ್ ಪೂರೈಕೆ ಮತ್ತು ಸಾರಿಗೆ ಬಸ್ ಮತ್ತು ಕೆಲವು ಕಾರುಗಳು ಜಖಂ
ಬೆಳಿಗ್ಗೆ 11.45: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡನೀಯ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸೂಕ್ತ ಕ್ರಮ ಕೈಗೊಳ್ಳಬೇಕು: ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹ ಹೇಳಿಕೆ
ಬೆಳಿಗ್ಗೆ 11.30: ನಲ್ಲಸಂದ್ರ ರೈಲ್ವೇ ನಿಲ್ದಾಣಕ್ಕೆ ಪ್ರತಿಭಟನಾಕಾರರ ಮುತ್ತಿಗೆ. ಹಲವೆಡೆ ರೈಲು ಸೇವೆ ತಾತ್ಕಾಲಿಕ ಸ್ಥಗಿತ
ಬೆಳಿಗ್ಗೆ 11.10: 'ರಸ್ತಾ ರುಖೋ' ಘೋಷಣೆಯೊಂದಿಗೆ ಹಲವು ಬಸ್ ಗಳ ಮೇಲೆ ಕಲ್ಲು ತೂರಾಟ. ಕಲಾನಗರ್, ಕುಂಭರ್ವಾಡ, ಕಾಮರಾಜ್ ನಗರ, ಸಂತೋಷನಗರ, ಹನುಮಾನ್ ನಗರಗಳಲ್ಲಿ ಒಟ್ಟು 13 ಕ್ಕೂ ಹೆಚ್ಚು ಬಸ್ಸುಗಳು ಜಕಂ
ಬೆಳಿಗ್ಗೆ 10.46: ಸಂಸತ್ತಿನಲ್ಲೂ ಪ್ರತಿನಿಧ್ವನಿಸಿದ ಭೀಮಾ ಕೊರೆಗಾಂವ್ ಹಿಂಸಾಚಾರ. ಲೋಕಸಭಾ ಕಲಾಪ ಮುಂದೂಡಿಕೆ
10.30: ಪುಣೆಯಲ್ಲಿ ಯಾವುದೇ ರೀತಿಯ ಹಿಂಸಾಚಾರ ನಡೆಯುತ್ತಿಲ್ಲ. ಜನರು ಎಂದಿನಂತೇ ತಮ್ಮ ದಿನಚರಿಯಲ್ಲಿ ಪಾಲ್ಗೊಳ್ಳಬಹುದು. ವದಂತಿಗಳಿಗೆ ಕಿವಿಕೊಡಬೇಡಿ: ಡಿಸಿಪಿ ಪ್ರವೀಣ್ ಮುಂಡೆ ಹೇಳಿಕೆ
ಬೆಳಿಗ್ಗೆ10.25: ವೋರ್ಲಿ ನಾಕಾ, ಖೆರ್ವಾಡಿ ಜಂಕ್ಷನ್, ಕಲಾನಗರ, ಎಂಎಂ ಆರ್ ಡಿಎ ಜಂಕ್ಷನ್ ಬಳಿ ಟ್ರಾಫಿಕ್ ಸಮಸ್ಯೆ
ಬೆಳಿಗ್ಗೆ10.15: ಕಾಂಡಿವಾಲಿಯ ಅಂಕುರ್ಲಿ ಬ್ರಿಡ್ಜ್, ಸಂತೋಷ್ ನಗರದ ದಿಂದೋಷಿ, ಕಾಮರಾಜ ನಗರ, ವಿಜಯನಗರ, ಅರುಣ್ ಕುಮಾರ್ ವೈದ್ಯ ನಗರಗಳಲ್ಲಿ ಪ್ರತಿಭಟನೆ ಆರಂಭ.
ಬೆಳಿಗ್ಗೆ 10.10: ಕರ್ನಾಟಕ-ಮಹಾರಾಷ್ಟ್ರ ಅಂತರರಾಜ್ಯ ಬಸ್ ಸೇವೆ ಸ್ಥಗಿತ. ಪುಣೆಯಿಂದ ಬೆಳಗಾವಿಗೆ ಬರಬೇಕಿದ್ದ ಎಲ್ಲಾ ಬಸ್ ಗಳೂ ಬಂದ್. ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ಕ್ರಮ.
ಬೆಳಿಗ್ಗೆ9.50: ಸಾಮಾಜಿಕ ಮಾಧ್ಯಮಗಳ ಮೇಲೂ ಹದ್ದಿನ ಕಣ್ಣಿಟ್ಟ ಪೊಲೀಸರು. ಪ್ರಚೋದನಾಕಾರಿ ಹೇಳಿಕೆ ನೀಡುವವರ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ
ಬೆಳಿಗ್ಗೆ 9.45: ಥಾಣೆಯಲ್ಲಿ ಹಲವು ಶಾಲೆ ಮತ್ತು ಕಾಲೇಜುಗಳಿಗೆ ರಜೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ: ಆಡಳಿತ ಮಂಡಳಿಯಿಂದ ಸ್ಪಷ್ಟನೆ
ಬೆಳಿಗ್ಗೆ 9.40: ಪುಣೆಯಿಂದ ಸಾತಾರಕ್ಕೆ ಹೊರಟಿದ್ದ ಬಸ್ ಗಳನ್ನು ತಡೆದ ಪ್ರತಿಭಟನಾಕಾರರು.
ಬೆಳಿಗ್ಗೆ 9.35: ಔರಂಗಾಬಾದ್ ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ
ಬೆಳಿಗ್ಗೆ 9. 30: ಪುಣೆಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ. ಕಲ್ಲುತೂರಾಟದ ಕುರಿತು ಮಾಹಿತಿ ಲಭ್ಯ. ಸದ್ಯಕ್ಕೆ ಐಪಿಸಿ ಸೆಕ್ಷನ್ 144 ಜಾರಿ.
ಬೆಳಿಗ್ಗೆ 9.30: ಸಂತೋಷ್ ನಗರ ನಾಲಾ, ಹನುಮಾನ್ ನಗರ್ ಬಸ್ ನಿಲ್ದಾಣ, ಫಿಲ್ಮ್ ಸಿಟಿ ರಸ್ತೆ ಗಳನ್ನು ಬಿಟ್ಟರೆ ಬೇರೆಲ್ಲೂ ಸಂಚಾರ ಅಸ್ತವ್ಯಸ್ತವಾದ ಕುರಿತು ಮಾಹಿತಿ ಲಭ್ಯವಾಗಿಲ್ಲ.
ಬೆಳಿಗ್ಗೆ 9.20: ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ 9 ಪ್ರಕರಣಗಳನ್ನು ದಾಖಲಿಸಿದ ಪೊಲೀಸರು. ಈಗಾಗಲೇ 100 ಕ್ಕೂ ಹೆಚ್ಚು ಜನ ಪೊಲೀಸ್ ವಶಕ್ಕೆ.
ಬೆಳಿಗ್ಗೆ9.00: ಪುಣೆ, ಮುಂಬೈ ಆದ್ಯಂತ ಬಿಗಿಬಂದೋಬಸ್ತ್.
ಬೆಳಿಗ್ಗೆ8.30: ಥಾಣೆಯಲ್ಲಿ ಐಪಿಸಿ ಸೆಕ್ಷನ್ 144 ಜಾರಿ
ಬೆಳಿಗ್ಗೆ8.15: ಥಾಣೆಯಲ್ಲಿ ರೈಲು ಸಂಚಾರವನ್ನು ತಡೆಯಲು ಪ್ರಯತ್ನಿಸಿದ ಪ್ರತಿಭಟನಾಕಾರರು.