ಪರಿಷತ್ ಚುನಾವಣೆ; ನಾಮಪತ್ರ ಸಲ್ಲಿಸಿದ ಸಿಎಂ ಉದ್ಭವ ಠಾಕ್ರೆ
ಮುಂಬೈ, ಮೇ 11 : ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಗೆ ಮುಖ್ಯಮಂತ್ರಿ ಉದ್ಭವ ಠಾಕ್ರೆ ನಾಮಪತ್ರ ಸಲ್ಲಿಕೆ ಮಾಡಿದರು. ಮೇ 28ರೊಳಗೆ ಅವರು ವಿಧಾನಸಭೆ ಅಥವ ಪರಿಷತ್ ಸದಸ್ಯರಾಗದಿದ್ದಲ್ಲಿ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕಾಗುತ್ತದೆ.
ಸೋಮವಾರ ಉದ್ಭವ ಠಾಕ್ರೆ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಮೇ 21ರಂದು ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದೆ. ಆದರೆ, ಉದ್ಭವ ಠಾಕ್ರೆ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ನ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರಿಬ್ಬರೂ ನಾಮಪತ್ರ ವಾಪಸ್ ಪಡೆದಿದ್ದು, ಉದ್ಭವ ಠಾಕ್ರೆ ಅವರು ಕಣದಲ್ಲಿರುವ ಏಕೈಕ ಅಭ್ಯರ್ಥಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್, ಎನ್ಸಿಪಿ ಮೈತ್ರಿಕೂಟ ಸರ್ಕಾರ ರಚನೆ ಮಾಡಿದೆ. ಶಾಸಕರು, ವಿಧಾನ ಪರಿಷತ್ ಸದಸ್ಯರೂ ಅಲ್ಲದ ಉದ್ಭವ ಠಾಕ್ರೆ 2019ರ ನವೆಂಬರ್ 28ರಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಸಂವಿಧಾನದ 164 (4)ನೇ ಪರಿಚ್ಛೇದದ ಪ್ರಕಾರ ಪ್ರಮಾಣ ವಚನ ಸ್ವೀಕಾರ ಮಾಡಿದ 6 ತಿಂಗಳ ಒಳಗೆ ವಿಧಾನಸಭೆ ಅಥವ ಪರಿಷತ್ ಸದಸ್ಯರಾಗಬೇಕು.
ವಿಧಾನ ಪರಿಷತ್ ಚುನಾವಣೆ ಕಣಕ್ಕಿಳಿದು ಆಯ್ಕೆಯಾಗುವ ಆಲೋಚನೆಯನ್ನು ಉದ್ಭವ ಠಾಕ್ರೆ ಹೊಂದಿದ್ದರು. ಆದರೆ, ಕೊರೊನಾ ಲಾಕ್ ಡೌನ್ ಪರಿಣಾಮ ಮಾರ್ಚ್ 26ಕ್ಕೆ ನಡೆಯಬೇಕಿದ್ದ ಚುನಾವಣೆ ಮುಂದೂಡಲಾಗಿತ್ತು. ಇದರಿಂದಾಗಿ ಮೇ 28ರೊಳಗೆ ಸದಸ್ಯರಾಗುವ ಸಂಕಷ್ಟ ಉದ್ಭವ ಠಾಕ್ರೆಗೆ ಎದುರಾಗಿತ್ತು.
ರಾಜ್ಯಪಾಲರ ಬೇಡಿಕೆಯಂತೆ ವಿಧಾನ ಪರಿಷತ್ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಲಾಗಿದ್ದು, ಮೇ 21ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಉದ್ಭವ ಠಾಕ್ರೆ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.












Click it and Unblock the Notifications