ಶಿವಸೇನೆ ನಾಶವಾಗುವುದನಲ್ಲಿ ತಪ್ಪಿಸಲು ಮೈತ್ರಿ ಸರ್ಕಾರದಿಂದ ಹೊರಬರಬೇಕು: ಏಕನಾಥ್ ಶಿಂಧೆ
ಮುಂಬೈ, ಜೂನ್ 22: ಮಹಾರಾಷ್ಟ್ರ ರಾಜ್ಯ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದೆ. ಶಿವಸೇನೆ ವಿರುದ್ಧ ಬಂಡಾಯವೆದ್ದ ಏಕನಾಥ್ ಶಿಂಧೆ ಹಲವು ಶಾಸಕರೊಡನೆ ರೆಸಾರ್ಟ್ನಲ್ಲಿ ಬೀಡುಬಿಟ್ಟಿದ್ದಾರೆ. ಒಂದು ಕಡೆ ಸರ್ಕಾರ ಬೀಳುವ ಅಪಾಯ ಎದುರಾಗಿದೆ, ಉದ್ಧವ್ ಠಾಕ್ರೆ ರಾಜ್ಯ ರಾಜಕೀಯ ಬೆಳವಣಿಗೆ ಕುರಿತಂತೆ ಮಾತನಾಡಿದ ಬೆನ್ನಲ್ಲೇ ಏಕನಾಥ್ ಶಿಂಧೆ ಪ್ರತಿಕ್ರಿಯೆ ನೀಡಿದ್ದಾರೆ.
ಉದ್ದವ್ ಠಾಕ್ರೆ ಸುದ್ದಿಗೋಷ್ಠಿ ನಂತರ ಪ್ರತಿಕ್ರಿಯೆ ನೀಡಿರುವ ಏಕನಾಥ್ ಶಿಂಧೆ, "ಅಧಿಕಾರಕ್ಕೆ ಬಂದ 2.5 ವರ್ಷಗಳಲ್ಲಿ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್ಸಿಪಿ ಮಾತ್ರ ಲಾಭ ಪಡೆದಿವೆ ಆದರೆ ಶಿವಸೈನಿಕರಿಗೆ ಯಾವುದೇ ಲಾಭವಾಗಿಲ್ಲ" ಎಂದು ಹೇಳಿದ್ದಾರೆ.
ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಎರಡು ಮಿತ್ರ ಪಕ್ಷಗಳು ಬಲಗೊಳ್ಳುತ್ತಿವೆ, ಆದರೆ ಶಿವಸೇನೆ ಮಾತ್ರ ನಾಶವಾಗುತ್ತಿದೆ ಎಂದಿರುವ ಏಕನಾಥ್ ಶಿಂಧೆ ಶಿವಸೇನಾ ಮತ್ತು ಶಿವಸೈನಿಕರನ್ನು ಉಳಿಸುವ ಸಲುವಾಗಿ ಅಸಹಜ ಮೈತ್ರಿಯಿಂದ ಹೊರಬರುವುದು ಅನಿವಾರ್ಯ ಎಂದಿದ್ದಾರೆ.

ಮಹಾರಾಷ್ಟ್ರ ರಾಜ್ಯಕ್ಕೆ ಒಳಿತಾಗುವ ದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ ಎಂದಿರುವ ಶಿಂಧೆ ತಾವು ಮಾಡಿರುವ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ ಏಕನಾಥ್ ಶಿಂಧೆ ಮತ್ತು ಅವರ ಬೆಂಬಲಿಗರು ಮೈತ್ರಿ ಸರ್ಕಾರ ಉರುಳಿಸುವುದು ಬಹುತೇಕ ಖಚಿತವಾದಂತಾಗಿದೆ.
ಸುದ್ದಿಗೋಷ್ಠಿ ನಡೆಸಿದ್ದ ಉದ್ದವ್ ಠಾಕ್ರೆ
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದ ಭವಿಷ್ಯ ಅತಂತ್ರವಾಗಿರುವುದಕ್ಕಿಂತ, ತಮ್ಮ ಪಕ್ಷದ ಶಾಸಕರೇ ಬಂಡಾಯವೆದ್ದು, ಸರ್ಕಾರದ ವಿರುದ್ಧ ನಿಂತಿರುವುದು ತಮಗೆ ಅತ್ಯಂತ ದುಃಖ ತಂದಿದೆ ಎಂದು ಬುಧವಾರ ಸಂಜೆ ಸಿಎಂ ಉದ್ಧವ್ ಠಾಕ್ರೆ ಹೇಳಿದರು.

ಫೇಸ್ ಬುಕ್ ಲೈವ್ ಮೂಲಕ ಮಹಾರಾಷ್ಟ್ರ ಉದ್ದೇಶಿಸಿ ಮಾತನಾಡಿದ ಉದ್ಧವ್, ನಾನು ರಾಜೀನಾಮೆ ಬರೆದಿಟ್ಟಿದ್ದೇನೆ, ರಾಜ್ಯಪಾಲರಿಗೆ ಅದನ್ನು ತಲುಪಿಸಿ ಎಂದು ಹೇಳಿದ್ದರು. ಕಾಂಗ್ರೆಸ್, ಎನ್ಸಿಪಿ ಶಾಸಕರ ಬದಲಿಗೆ ಶಿವಸೇನಾ ಶಾಸಕರ ನಡೆಯಿಂದ ಆಘಾತವಾಗಿದೆ, ನನ್ನ ರಾಜೀನಾಮೆ ಬೇಕಿದ್ದರೆ, ಬಂದು ಕೇಳಬಹುದಿತ್ತು, ಬಂಡಾಯ ಏಕೆ? ಎಂದು ಪ್ರಶ್ನಿಸಿದ್ದರು.
ನಾನು ಬಾಳಾಸಾಹೇಬ್ ಪುತ್ರ, ನನಗೆ ನೀಡಿದ್ದ ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ, ಅನುಭವದ ಕೊರತೆಯಿದ್ದರೂ ನಾನು ಜವಾಬ್ದಾರಿ ವಹಿಸಿಕೊಂಡು ಪಕ್ಷವನ್ನು ಮುನ್ನಡೆಸಿದ್ದೇನೆ, ಶಿವಸೇನೆ ಎಂದಿಗೂ ಹಿಂದುತ್ವವನ್ನು ಬಿಟ್ಟುಕೊಡುವುದಿಲ್ಲ, ಬಾಳಾಸಾಹೇಬ್ ನೀಡಿದ ಮಂತ್ರವದು ಅದನ್ನು ಕೊನೆ ತನಕ ಪಾಲಿಸುತ್ತೇವೆ ಎಂದು ಹೇಳಿದ್ದರು.
ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ, ಬಂಡಾಯ ಶಾಸಕರಲ್ಲಿ ಯಾರಾದರೂ ಮುಖಾಮುಖಿಯಾಗಿ ಹೇಳಿದರೆ ಅವರು ಮುಖ್ಯಮಂತ್ರಿ ಸ್ಥಾನ ಮತ್ತು ಪಕ್ಷದ ಮುಖ್ಯಸ್ಥರ ಸ್ಥಾನದಿಂದ ಕೆಳಗಿಳಿಯುವೆ. ಶಿವಸೇನಾ ಶಾಸಕರ ಬೇಡಿಕೆಯಂತೆ ನಾನು ವರ್ಷಾಬಂಗಲೆ (ಸಿಎಂ ಅಧಿಕೃತ ನಿವಾಸ)ಯಿಂದ ಮಾತೋಶ್ರಿಗೆ ಶಿಫ್ಟ್ ಆಗುತ್ತೇನೆ ಎಂದು ಉದ್ಧವ್ ಹೇಳಿದ್ದಾರೆ.












Click it and Unblock the Notifications