ನೀವು ಹಳೆ ಗೋರಿ ಅಗೆಯಲು ಬಯಸಿದರೆ ನಾವೂ ಅಗೆಯುತ್ತೇವೆ: ಬಿಜೆಪಿಗೆ ಶಿವಸೇನಾ ಎಚ್ಚರಿಕೆ
ಮುಂಬೈ, ನವೆಂಬರ್ 14: ಶಿವಸೇನಾ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರವು ನವೆಂಬರ್ 28ರಂದು ತನ್ನ ಮೊದಲೇ ವಾರ್ಷಿಕೋತ್ಸವ ಆಚರಿಸುತ್ತಿದೆ. ಸರ್ಕಾರವನ್ನು ಉರುಳಿಸಲು ನಡೆಸಿದ 'ಆಪರೇಷನ್ ಕಮಲ'ದ ಬಗ್ಗೆ ಮರೆಯಬೇಡಿ ಮತ್ತು ಜನರ ಅಭಿವೃದ್ಧಿಗಾಗಿ ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡಿ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಈ ಸಂದರ್ಭದಲ್ಲಿ ಬಿಜೆಪಿಗೆ ಹೇಳಿದ್ದಾರೆ.
ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಮಾಡಿರುವ ಸರಣಿ ಆರೋಪಗಳ ಕುರಿತು ಕಠಿಣ ಎಚ್ಚರಿಕೆ ನೀಡಿರುವ ಸಂಜಯ್ ರಾವತ್, ಶಿವಸೇನಾ ಹಳೆಯ ಸಮಾಧಿಗಳನ್ನು ಅಗೆಯಲು ಆರಂಭಿಸಿದರೆ ಬಿಜೆಪಿಯು ಭಾಗಿಯಾಗಿರುವ ಭ್ರಷ್ಟಾಚಾರಗಳ ಅಸ್ಥಿಪಂಜರಗಳನ್ನು ಹೊರತೆಗೆಯಲಿದೆ ಎಂದಿದ್ದಾರೆ.
ವಿರೋಧಪಕ್ಷಗಳ ಧ್ವನಿಯನ್ನು ಎಂದಿಗೂ ಶಿವಸೇನಾ ಹತ್ತಿಕ್ಕಿಲ್ಲ ಎಂದಿರುವ ಸಂಜಯ್ ರಾವತ್, ಮಾಜಿ ಸಂಸದ ಸೋಮಯ್ಯ ಅವರನ್ನು ಅವರದೇ ಪಕ್ಷದವರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ. ಮುಂದೆ ಓದಿ.

ನಮಗೆ ಪ್ರಬಲ ವಿಪಕ್ಷ ಬೇಕು
'ಅವರು ಗಂಭೀರವಾಗಿ ಮಾಡಿದ್ದನ್ನು ಅವರ ಪಕ್ಷ ಪರಿಗಣಿಸುತ್ತದೆ ಎಂದು ನನಗನ್ನಿಸುತ್ತಿಲ್ಲ. ಆದರೆ ವಿರೋಧಪಕ್ಷವು ಟೀಕಿಸಲೇಬೇಕು. ನಾವು ರಾಜ್ಯದಲ್ಲಿ ಪ್ರಬಲ ವಿರೋಧಪಕ್ಷವನ್ನು ಬಯಸಿದ್ದೇವೆ. ಇತರೆ ರಾಜ್ಯಗಳು ಹಾಗೂ ಕೇಂದ್ರದಲ್ಲಿ ಮಾಡುತ್ತಿರುವಂತೆ ನಾವು ವಿರೋಧಪಕ್ಷವನ್ನು ಹತ್ತಿಕ್ಕುವ ಅಥವಾ ನಿಯಂತ್ರಿಸಲು ಹೋಗುವುದಿಲ್ಲ ಎಂದು ಉದ್ಧವ್ ಠಾಕ್ರೆ ಅವರನ್ನು ಬಲ್ಲವರು ಮತ್ತು ಬಾಳಸಾಹೇಬ್ ಠಾಕ್ರೆ ಅವರ ಬಗ್ಗೆ ತಿಳಿದಿದ್ದವರು ಖಂಡಿತಾ ನಿಮಗೆ ಹೇಳುತ್ತಾರೆ' ಎಂದು ರಾವತ್ ತಿಳಿಸಿದ್ದಾರೆ.

ಅಸ್ಥಿಪಂಜರಗಳು ಸಿಗುತ್ತವೆ
'ಹೀಗಾಗಿ ಬಿಜೆಪಿಯವರು ಈ ಸುಳ್ಳು ಆರೋಪಗಳನ್ನು ನಿಲ್ಲಿಸಬೇಕು. ಅವರು ಹಳೆಯ ಸಮಾಧಿಗಳನ್ನು ಅಗೆಯಲು ಬಯಸಿದರೆ ನಾವೂ ಕೂಡ ಅದನ್ನು ಮಾಡಬಹುದು. ಆದರೆ ನಮ್ಮ ನಿಲುವು ಹೇಗೆಂದರೆ ಹಳೆಯದನ್ನು ಮರೆಯಬೇಕು ಮತ್ತು ಮುಂದೆ ಸಾಗಬೇಕು. ನಾವು ಸಮಾಧಿಗಳನ್ನು ಅಗೆಯಲು ಮುಂದುವರಿಸಿದರೆ ನಿಮ್ಮ ಭ್ರಷ್ಟಾಚಾರದ ಅಸ್ಥಿಪಂಜರಗಳು ಸಿಗುತ್ತವೆ' ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ಆಪರೇಷನ್ ಕಮಲದ ಭಾಷೆ ನಿಲ್ಲಿಸಿ
'ಸರ್ಕಾರವನ್ನು ಅಸ್ಥಿರಗೊಳಿಸಲು ಅನೇಕ ಅಪವಿತ್ರ ಪ್ರಯತ್ನಗಳು ನಡೆದವು. ಆದರೆ ಯಾವುದೇ ಯಶಸ್ವಿಯಾಗಲಿಲ್ಲ. ಕಳೆದ ವರ್ಷ ವಿರೋಧಪಕ್ಷವು ಆಪರೇಷನ್ ಕಮಲ ನಡೆಸಲು ಹಲವು ಬಾರಿ ಪ್ರಯತ್ನಿಸಿತ್ತು. ಆದರೆ ಸಣ್ಣದೊಂದು ಗೀರು ಮಾಡಲು ಸಹ ಸಾಧ್ಯವಾಗಲಿಲ್ಲ. ಅವರು ಆಪರೇಷನ್ ಕಮಲದ ಭಾಷೆಯನ್ನು ನಿಲ್ಲಿಸಬೇಕು. ರಾಜ್ಯಕ್ಕಾಗಿ ಸರ್ಕಾರದ ಜತೆ ಕೆಲಸ ಮಾಡಬೇಕು.

ಪೂರ್ಣಾವಧಿ ಆಡಳಿತದ ಬಗ್ಗೆ ಅನುಮಾನ ಬೇಡ
'ಉದ್ಧವ್ ಠಾಕ್ರೆ ಸರ್ಕಾರ ಪೂರ್ಣಾವಧಿ ಆಡಳಿತ ನಡೆಸಲಿದೆ ಎಂಬ ಬಗ್ಗೆ ರಾಜ್ಯದಲ್ಲಿ ಯಾರಿಗೂ ಅನುಮಾನವಿಲ್ಲ. ಅವರು ಮುಖ್ಯಮಂತ್ರಿಯಾಗಿಯೇ ಇರುತ್ತಾರೆ' ಎಂದಿದ್ದಾರೆ. ಮಹಾರಾಷ್ಟ್ರ ಪ್ರಬಲವಾದಂತೆ ದೇಶವೂ ಶಕ್ತಿಶಾಲಿಯಾಗಲಿದೆ. ನಾವು ಹಳೆಯದನ್ನು ಮರೆತು ಮಹಾರಾಷ್ಟ್ರವನ್ನು ಪ್ರಬಲಗೊಳಿಸಬೇಕು ಎಂಬುದಾಗಿ ಉದ್ಧವ್ ಠಾಕ್ರೆ ಹೇಳಿದ್ದಾರೆ ಎಂದು ರಾವತ್ ತಿಳಿಸಿದ್ದಾರೆ.












Click it and Unblock the Notifications