ಅಮಿತ್ ಶಾ & ಕಂಪೆನಿಯನ್ನು ನಂಬೊಲ್ಲ: ಬಿಜೆಪಿಗೆ ಉದ್ಧವ್ ಠಾಕ್ರೆ ಪೆಟ್ಟು

ಮುಂಬೈ, ನವೆಂಬರ್ 8: ಮಹಾರಾಷ್ಟ್ರದಲ್ಲಿ ಶಿವಸೇನಾ-ಬಿಜೆಪಿ ಜಗಳ ಮತ್ತೊಂದು ಘಟ್ಟಕ್ಕೆ ತಲುಪಿದೆ. 50:50ರ ಅಧಿಕಾರ ಹಂಚಿಕೆ ಒಪ್ಪಂದ ಸೂತ್ರಕ್ಕೆ ಬದ್ಧವಾದರೆ ಮಾತ್ರ ಸರ್ಕಾರ ರಚನೆಗೆ ಕೈಜೋಡಿಸುವುದಾಗಿ ಪಟ್ಟುಹಿಡಿದಿದ್ದ ಶಿವಸೇನಾ, ಈಗ ಬಿಜೆಪಿ ತಮ್ಮನ್ನು ಮುಗಿಸಲು ಹೊರಟಿದೆ. ಗೃಹ ಸಚಿವ ಅಮಿತ್ ಶಾ ಮತ್ತು ಅವರ ಬಳಗವನ್ನು ತಾವು ನಂಬುವುದಿಲ್ಲ ಎಂದು ನೇರಾನೇರ ಆರೋಪ ಮಾಡುವ ಮೂಲಕ ಮೈತ್ರಿಗೆ ಅಂತ್ಯಹಾಡುವ ಸುಳಿವು ನೀಡಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿಯ ಹಿರಿಯ ನಾಯಕರು ಸುಳ್ಳಿನ ಕಂತೆ ಬಿಡುತ್ತಿದ್ದಾರೆ ಮತ್ತು ಶಿವಸೇನಾಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು 50:50ರಂತೆ ತಲಾ ಎರಡೂವರೆ ವರ್ಷ ಹಂಚಿಕೊಳ್ಳುವ ಸೂತ್ರದಂತೆ ಎರಡೂ ಪಕ್ಷಗಳು ನಡೆದುಕೊಳ್ಳಬೇಕು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೀಡಿದ್ದ ವಚನಕ್ಕೆ ಬಿಜೆಪಿ ಗೌರವ ನೀಡುತ್ತಿಲ್ಲ ಎಂದು ಉದ್ಧವ್ ಠಾಕ್ರೆ ದೂರಿದರು.

ನಿಮ್ಮಿಂದ ಪ್ರಮಾಣಪತ್ರ ಬೇಕಿಲ್ಲ

ನಿಮ್ಮಿಂದ ಪ್ರಮಾಣಪತ್ರ ಬೇಕಿಲ್ಲ

'ನಾನು ಬಿಜೆಪಿಗನಲ್ಲ. ನಾನು ಸುಳ್ಳು ಹೇಳುವುದಿಲ್ಲ. ಅವರು ನಮಗೆ ಮಾತು ಕೊಟ್ಟಿದ್ದರು. ಆದರೆ ಈಗ ಮಾತು ತಪ್ಪುತ್ತಿದ್ದಾರೆ' ಎಂದು ಕಿಡಿಕಾರಿದರು.

'ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ನೀವು (ಬಿಜೆಪಿ) ಹೇಳಿರುವ ಸುಳ್ಳನ್ನು ಒಪ್ಪಿಕೊಳ್ಳುವವರೆಗೂ ನಾನು ನಿಮ್ಮೊಂದಿಗೆ ಮಾತನಾಡುವುದಿಲ್ಲ. ಸತ್ಯವನ್ನು ಮಾತನಾಡುತ್ತಿರುವ ನಮಗೆ ನಿಮ್ಮಿಂದ ಪ್ರಮಾಣಪತ್ರ ಬೇಕಾಗಿಲ್ಲ. ನಮ್ಮ ನಡುವೆ ಯಾವುದೇ ವಿಶ್ವಾಸ-ನಂಬಿಕೆ ಇಲ್ಲ ಎಂದು ನಿಮಗೆ ಅನಿಸಿದರೆ, ನಾವೂ ಅಮಿತ್ ಶಾ ಮತ್ತು ಕಂಪೆನಿಯನ್ನು ನಂಬುವುದಿಲ್ಲ' ಎಂದು ಖಡಕ್ಕಾಗಿ ಹೇಳಿದರು.

ಬಿಜೆಪಿ ಮುಗಿಸಲು ಹೊರಟಿದೆ

ಬಿಜೆಪಿ ಮುಗಿಸಲು ಹೊರಟಿದೆ

'ಸಿಹಿಯಾದ ಮಾತುಗಳನ್ನು ಆಡಿ ಬಿಜೆಪಿ ನಮ್ಮನ್ನು ಮುಗಿಸಲು ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿ ಹುದ್ದೆ ಪಡೆಯಲು ಶಿವಸೇನಾಕ್ಕೆ ಬಿಜೆಪಿಯ ಅಗತ್ಯವಿಲ್ಲ. ಅಮಿತ್ ಶಾ ಅವರ ಉಪಸ್ಥಿತಿಯಲ್ಲಿಯೇ ಸಮಾನ ಅಧಿಕಾರ ಹಂಚಿಕೆಯ ಒಪ್ಪಂದ ನಡೆದಿತ್ತು. ಆದರೆ ಬಿಜೆಪಿಗರು ನನಗೆ ಸುಳ್ಳುಗಾರನೆಂಬ ಹಣೆಪಟ್ಟಿ ಕಟ್ಟಿರುವುದು ಆಘಾತ ಮತ್ತು ನೋವನ್ನುಂಟು ಮಾಡಿದೆ' ಎಂದು ಹೇಳಿದರು.

ಸಿಎಂ ಹುದ್ದೆಗೇರುವುದಾಗಿ ತಂದೆಗೆ ಮಾತು

ಸಿಎಂ ಹುದ್ದೆಗೇರುವುದಾಗಿ ತಂದೆಗೆ ಮಾತು

'ಶಿವಸೇನಾವನ್ನು ಸುಳ್ಳುಗಾರ ಎಂದು ಸಾಬೀತುಪಡಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನಗಳು ಒಪ್ಪುವಂತಹದ್ದಲ್ಲ' ಎಂದ ಅವರು, ಶಿವಸೇನಾ ಸಂಸ್ಥಾಪಕ ಮತ್ತು ತಮ್ಮ ತಂದೆ ಬಾಳ ಠಾಕ್ರೆ ಅವರನ್ನು ನೆನಪಿಸಿಕೊಂಡರು. ಮಹಾರಾಷ್ಟ್ರದಲ್ಲಿ ಒಂದಲ್ಲ ಒಂದು ದಿನ ಶಿವಸೇನಾವು ಮುಖ್ಯಮಂತ್ರಿ ಸ್ಥಾನಕ್ಕೆ ಏರಲಿದೆ ಎಂದು ತಮ್ಮ ತಂದೆಗೆ ಮಾತು ನೀಡಿದ್ದಾಗಿ ಹೇಳಿಕೊಂಡರು.

ತಾವು ತಮ್ಮ ತಂದೆಗೆ ನೀಡಿದ್ದ ವಚನವನ್ನು ಈಡೇರಿಸಲು ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂಬ ಬೇಡಿಕೆಗೆ ದೃಢವಾಗಿ ಅಂಟಿಕೊಂಡಿರುವುದಾಗಿ ತಿಳಿಸಿದರು. 'ಸಿಎಂ ಹುದ್ದೆಯ ಬೇಡಿಕೆ ವಿಚಾರದಲ್ಲಿ ನಾವು ಅಚಲವಾಗಿದ್ದೇವೆ. ಶಿವಸೇನಾ ಮುಖ್ಯಮಂತ್ರಿಯನ್ನು ಮಾಡುವ ಮೂಲಕ ತಂದೆಗೆ ನೀಡಿದ್ದ ಭರವಸೆಯನ್ನು ಪೂರ್ಣಗೊಳಿಸುತ್ತೇನೆ. ನನಗೆ ಇದಕ್ಕಾಗಿ ಅಮಿತ್ ಶಾ ಅಥವಾ ದೇವೇಂದ್ರ ಫಡ್ನವೀಸ್ ಅವರ ಅಗತ್ಯವಿಲ್ಲ' ಎಂದರು.

ಫಡ್ನವೀಸ್‌ರಿಂದ ನಿರೀಕ್ಷಿಸಿರಲಿಲ್ಲ

ಫಡ್ನವೀಸ್‌ರಿಂದ ನಿರೀಕ್ಷಿಸಿರಲಿಲ್ಲ

'ಫಡ್ನವೀಸ್ ನನ್ನ ಉತ್ತಮ ಸ್ನೇಹಿತ. ಹಾಗಾಗಿಯೇ ಮುಖ್ಯಮಂತ್ರಿಯಾಗಿ ಅವರಿಗೆ ಬೆಂಬಲ ನೀಡಿದ್ದೆ. ಅವರಿಗೆ ಐದು ವರ್ಷ ಯಾವುದೇ ಅಡ್ಡಿ ಮಾಡಿರಲಿಲ್ಲ. ಆದರೆ ಈಗ ಏನಾಯಿತೆಂದು ನನಗೆ ತಿಳಿಯುತ್ತಿಲ್ಲ. ಅವರಿಂದ ನಾನು ಇದನ್ನು ನಿರೀಕ್ಷಿಸಿರಲಿಲ್ಲ' ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಫಡ್ನವೀಸ್ ಅವರು ಶಿವಸೇನಾ ವಿರುದ್ಧ ನಡೆಸಿದ ವಾಗ್ದಾಳಿ ಮತ್ತು ತಮ್ಮ ಕರೆಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

ಶತ್ರು ಎಂದು ಪರಿಗಣಿಸಿಲ್ಲ

ಶತ್ರು ಎಂದು ಪರಿಗಣಿಸಿಲ್ಲ

'ಬಿಜೆಪಿ ನನ್ನನ್ನು ಸುಳ್ಳುಗಾರ ಎಂದು ಸಾಬೀತುಪಡಿಸಲು ಪ್ರಯತ್ನಿಸಿದ್ದಕ್ಕಾಗಿ ಅದರೊಂದಿಗೆ ಮಾತುಕತೆಯನ್ನು ಸ್ಥಗಿತಗೊಳಿಸಿದ್ದೇನೆ. ಶಿವಸೇನಾ ಎಂದಿಗೂ ಬಿಜೆಪಿಯನ್ನು ಶತ್ರು ಎಂದು ಪರಿಗಣಿಸಿರಲಿಲ್ಲ. ಆದರೆ ಅವರು ಸುಳ್ಳು ಆರೋಪಗಳನ್ನು ಮಾಡಬಾರದು. ಅವರೊಂದಿಗೆ ತಪ್ಪು ಮೈತ್ರಿ ಮಾಡಿಕೊಂಡಿದ್ದಕ್ಕೆ ಬೇಸರವಿದೆ. ಉಪ ಮುಖ್ಯಮಂತ್ರಿ ಹುದ್ದೆಗೆ ತೃಪ್ತಿಪಡುವಷ್ಟು ಶಿವಸೇನಾ ಹತಾಶವಾಗಿಲ್ಲ ಎಂದು ಅಮಿತ್ ಶಾ ಅವರಿಗೆ ತಿಳಿಸಿದ್ದೆ' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+