ಆರ್ಯನ್ ಡ್ರಗ್ಸ್ ಪ್ರಕರಣ: ಮುಂಬೈ ಪೊಲೀಸ್ ಕಮಿಷನರ್ಗೆ ಸಮೀರ್ ವಾಂಖೆಡೆ ಬರೆದ ಪತ್ರದಲ್ಲೇನಿದೆ?
ಮುಂಬೈ, ಅಕ್ಟೋಬರ್ 25: ಮುಂಬೈ ಪೊಲೀಸ್ ಕಮಿಷನರ್ಗೆ ಎನ್ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ ಪತ್ರ ಬರೆದಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಮುಚ್ಚಿ ಹಾಕಲು ಎನ್ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ 25 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಸ್ಫೋಟಕ ಆರೋಪ ಕೇಳಿಬಂದಿದ್ದು, ಇದೀಗ ಸಮೀರ್ ವಾಂಖೆಡೆ ಕಾನೂನು ರಕ್ಷಣೆ ಕೋರಿ ಮುಂಬೈ ಪೊಲೀಸ್ ಮೊರೆ ಹೋಗಿದ್ದಾರೆ.
ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಕೈಬಿಡಲು 25 ಕೋಟಿ ಡೀಲ್?
ಎನ್ಸಿಬಿ ವಕ್ತಾರ ಹಾಗೂ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ಹೇಳಿಕೆಯನ್ನು ಪತ್ರದಲ್ಲಿ ಪರೋಕ್ಷವಾಗಿ ಉಲ್ಲೇಖಿಸಿರುವ ಅವರು, ಗೌರವಾನ್ವಿತರೊಬ್ಬರಿಂದ ನನಗೆ ಬೆದರಿಕೆಯಿದೆ. ನನ್ನ ಹುದ್ದೆಯಿಂದ ವಜಾಗೊಳಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.
ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಗ್ರಾಲೆಗೆ ಈ ಕುರಿತಾಗಿ ಪತ್ರ ಬರೆದಿರುವ ಅವರು, ತಮ್ಮ ವಿರುದ್ಧದ ಲಂಚದ ಆರೋಪ ನಿರಾಧಾರವಾಗಿದೆ. ಹಾಗಾಗಿ, ಕಾನೂನು ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಅಕ್ಟೋಬರ್ 2 ರಂದು ಹಡಗಿನ ಮೇಲೆ ನಡೆದ ದಾಳಿಯಲ್ಲಿ ಕೆಲವರು ನನ್ನನ್ನು ಸಿಲುಕಿಸುವ ಯತ್ನ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ ವಾರ ಸಮೀರ್ ವಾಂಖೆಡೆ ಅವರು ಬಾಲಿವುಡ್ ತಾರೆಯರನ್ನು ಟಾರ್ಗೆಟ್ ಮಾಡುತ್ತಿದ್ದು, ಅವರಿಂದ ಹಣ ಸುಲಿಗೆ ಮಾಡುವುದಕ್ಕಾಗಿ ಮತ್ತು ಬ್ಲ್ಯಾಕ್ಮೇಲ್ ಮಾಡುವುದಕ್ಕಾಗಿ ದುಬೈಗೆ ತೆರಳಿದ್ದರು ಎಂದು ನವಾಬ್ ಮಲಿಕ್ ಆರೋಪಿಸಿದ್ದರು.
ನನ್ನನ್ನು ಯಾವುದೇ ಉದ್ದೇಶಪೂರ್ವಕ ಸುಳ್ಳು ಆರೋಪದಲ್ಲಿ ಸಿಲುಕಿಸದಂತೆ ನೋಡಿಕೊಳ್ಳಿ ಎಂದು ಪೊಲೀಸ್ ಅಧಿಕಾರಿಗೆ ವಾಂಖೆಡೆ ಮನವಿ ಮಾಡಿದ್ದಾರೆ. ಈ ಹಿಂದೆ ಜೀವ ಬೆದರಿಕೆಯಿದೆ ಎಂದು ನಗರ ಮತ್ತು ರಾಜ್ಯ ಪೊಲೀಸರಿಗೆ ವಾಂಖೆಡೆ ದೂರು ನೀಡಿದ್ದರು.
ಲಂಚ ಆರೋಪಕ್ಕೆ ಎನ್ಸಿಬಿ ಸ್ಪಷ್ಟನೆ: ಆರ್ಯನ್ ಖಾನ್ ಆರೋಪಿಯಾಗಿರುವ ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಭಾನುವಾರ ಲಂಚ ಬೇಡಿಕೆಯ ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಈ ಆರೋಪಕ್ಕೆ ಎನ್ಸಿಬಿ ಸ್ಪಷ್ಟನೆ ನೀಡಿದೆ.
ಐಷಾರಾಮಿ ಹಡಗಿನ ಮೇಲೆ ದಾಳಿ ನಡೆದ ಬಳಿಕ ಕೆಲವು ಸಾಕ್ಷಿದಾರರಿಂದ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರು ಖಾಲಿ ಹಾಳೆ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಪ್ರಭಾಕರ್ ಸೈಲ್ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಎನ್ಸಿಬಿ, ಸಾಮಾಜಿಕ ಜಾಲತಾಣಗಳ ಬದಲು ಪ್ರಭಾಕರ್ ಸೈಲ್ ನ್ಯಾಯಾಲಯದಲ್ಲಿ ವಾದ ಮಂಡಿಸಬೇಕು ಎಂದಿದೆ.
ನಮ್ಮ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಆದರೆ, ಇನ್ನೂ ವಿಚಾರಣೆಯ ಅವಶ್ಯಕತೆ ಇರುವುದರಿಂದ ಅಫಿಡವಿಟ್ ಅನ್ನು ವಿಚಾರಣೆಗಾಗಿ ಕಳುಹಿಸಲಾಗಿದೆ ಎಂದು ಎನ್ಸಿಬಿ ಡಿಡಿಜಿ ಮುತ್ತ ಜೈನ್ ಹೇಳಿದ್ದಾರೆ. ಅಲ್ಲದೇ, ಈ ಸಂಬಂಧ ಎನ್ಸಿಬಿ ಸುತ್ತೋಲೆ ಹೊರಡಿಸಿದೆ.
ಡ್ರಗ್ ಪಾರ್ಟಿ ಪ್ರಕರಣದಲ್ಲಿ ಆರ್ಯನ್ ಖಾನ್ ಬಿಡುಗಡೆಗೆ ರೂ. 25 ಕೋಟಿ ಡೀಲ್ ಬಗ್ಗೆ ಚರ್ಚಿಸಲಾಗಿದೆ ಎಂದು ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಹೇಳಿಕೊಂಡಿದ್ದಾರೆ. ಪ್ರಭಾಕರ್ ಸೈಲ್ ಕಿರಣ್ ಗೋಸಾವಿ ಅವರ ಅಂಗರಕ್ಷಕ. ಈ ಸಂದರ್ಭದಲ್ಲಿ ಕೆಲವು ಖಾಲಿ ಪೇಪರ್ಗಳಲ್ಲಿ ಸಮೀರ್ ವಾಂಖೆಡೆ ತಮ್ಮ ಸಹಿಯನ್ನು ತೆಗೆದುಕೊಂಡಿದ್ದಾರೆ ಎಂದು ಸೈಲ್ ಹೇಳಿಕೊಂಡಿದ್ದಾರೆ.
ಎನ್ಸಿಬಿ ಮೇಲಿನ ಆರೋಪವೇನು?: ಮುಂಬೈನ ಅರ್ಥರ್ ರೋಡ್ ಜೈಲಲ್ಲಿ ಬಂಧಿಯಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ.
ಪ್ರಭಾಕರ್ ಸೈಲ್ ಎಂಬಾತ 25 ಕೋಟಿ ರೂಪಾಯಿ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಲ್ಲದೆ ಎನ್ ಸಿ ಬಿ ಅಧಿಕಾರಿಗಳು ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿರುವ ಬಗ್ಗೆಯೂ ಆರೋಪಿಸಿದ್ದಾನೆ.
ಆರ್ಯನ್ ಖಾನ್ ಬಂಧಿಯಾಗಿದ್ದ ಫೋಟೋವೊಂದು ವೈರಲ್ ಆಗಿತ್ತು. ಅದುವೇ ಆರ್ಯನ್ ಖಾನ್ ಜೊತೆಗಿನ ಕಿರಣ್ ಗೋಸಾವಿ ಎಂಬಾತನ ಸೆಲ್ಫಿ ಫೋಟೋ. ಸದ್ಯ ಈ ಕಿರಣ್ ಗೋಸಾವಿ ನಾಪತ್ತೆಯಾಗಿದ್ದಾನೆ. ಈತನ ಬಾಡಿಗಾಡ್ ಆಗಿರುವ ಪ್ರಭಾಕರ್ ಸೈಲ್ ಎಂಬಾತ 25 ಕೋಟಿ ರೂಪಾಯಿ ವಸೂಲಿ ಆರೋಪದ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಬಾಲಿವುಡ್ ನಟ ಶಾರುಖ್ ಖಾನ್ ಮ್ಯಾನೇಜರ್ ಆಗಿರುವ ಪೂಜಾ ದದ್ಲಾನಿ ಹಾಗೂ ಕಿರಣ್ ಗೋಸಾವಿ ಭೇಟಿಯಾಗಿದ್ದರು. ನೀಲಿ ಬಣ್ಣದ ಮರ್ಸಿಡೀಸ್ ಬೆನ್ಜ್ ಕಾರಿನಲ್ಲಿ 15 ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು ಎಂಬುದರ ಬಗ್ಗೆ ಪ್ರಭಾಕರ್ ಹೇಳಿಕೊಂಡಿದ್ದಾನೆ.