ಗೋವಾ ರಾಜಕೀಯ ನಾಚಿಕೆಗೇಡಿನ ಅಧಿಕಾರ ದಾಹ: ಬಿಜೆಪಿಗೆ ಶಿವಸೇನೆ ಗುದ್ದು
ಮುಂಬೈ, ಮಾರ್ಚ್ 20: ಗೋವಾದಲ್ಲಿ ಮನೋಹರ್ ಪರಿಕ್ಕರ್ ಅವರ ಚಿತೆಯ ಭಸ್ಮ ತಣ್ಣಗಾಗುವ ವರೆಗೂ ಬಿಜೆಪಿಗೆ ಕಾಯುವುದಕ್ಕೂ ವ್ಯವಧಾನವಿರಲಿಲ್ಲ. ಇದು ನಾಚಿಕೆಗೇಡಿನ ಅಧಿಕಾರ ದಾಹ ಎಂದು ಶಿವಸೇನೆ ಟೀಕಿಸಿದೆ.
ಶಿವಸೇನೆ ಮುಖವಾಣಿ 'ಸಾಮನಾ'ದಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಬಿಜೆಪಿಗೆ ಶಿವಸೇನೆ ಗುದ್ದು ನೀಡಿದೆ.
"ಮನೋಹರ್ ಪರಿಕ್ಕರ್ ಅವರು ನಿಧನರಾದ ದಿನವೇ ಗೋವಾದಲ್ಲಿ ಸಾಕಷ್ಟು ನಾಟಕೀಯ ರಾಜಕೀಯ ಬೆಳವಣಿಗೆ ಸಂಭವಿಸಿತು. ಪರಿಕ್ಕರ್ ಅವರ ಅಂತ್ಯ ಸಂಸ್ಕಾರ ನಡೆದು, ಅವರ ಚಿತೆಯ ಭಸ್ಮ ತಣ್ಣಗಾಗುವ ಮೊದಲೇ ಗೋವಾದ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಅವರನ್ನು ಬಿಜೆಪಿ ಆಯ್ಕೆ ಮಾಡಿದ್ದಲ್ಲದೆ, ವಿಜಯ್ ಸರ್ದೇಸಾಯಿ, ಸುದಿನ್ ದವಾಲಿಕರ್ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ನೇಮಿಸಿತು. ಅಷ್ಟೊಂದು ಅವಸರ ಮಾಡುವ ಅಗತ್ಯ ಏನಿತ್ತು?

"ಇದು ನಿಜಕ್ಕೂ ಪ್ರಜಾಪ್ರಭುತ್ವದ ದುರಂತದ ಗಳಿಗೆ. ಮಂಗಳವಾರ ಬೆಳಗ್ಗಿನ ವರೆಗೂ ಕಾಯುವ ವ್ಯವಧಾನವಿಲ್ಲದೆ, ತಡರಾತ್ರಿಯಲ್ಲಿ ಮುಖ್ಯಮಂತ್ರಿಗಳ ಪ್ರಮಾಣವಚನವನ್ನು ತರಾತುರಿಯಲ್ಲಿ ಮಾಡಲಾಯ್ತು. ಅಧಿಕಾರ ನೀಡದಿದ್ದರೆ ಕಾಂಗ್ರೆಸ್ ಸೇರಬಹುದು ಎಂಬ ಕಾರಣಕ್ಕೆ ಇಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಯ್ತು. ಇದನ್ನು ಅಧಿಕಾರದ ದುರಾಸೆ ಎನ್ನದೆ ಏನೆನ್ನಬೇಕು" ಎಂದು ಶಿವಸೇನೆ ಟೀಕಿಸಿದೆ.












Click it and Unblock the Notifications