ಕರ್ತವ್ಯದಲ್ಲಿದ್ದ ಮಹಿಳಾ ಪೇದೆ ಮೇಲೆ ರಾಜಕೀಯ ಮುಖಂಡನ ಪುಂಡಾಟಿಕೆ
ಮುಂಬೈ, ಫೆ 27: ಕರ್ತವ್ಯ ನಿರತ ಮಹಿಳಾ ಪೊಲೀಸ್ ಕೆನ್ನೆಗೆ ಬಾರಿಸಿ ಪುಂಡ ಶಿವಸೇನೆಯ ಮುಖಂಡನೊಬ್ಬ ದಾದಾಗಿರಿ ಮೆರೆದಿದ್ದಾನೆ. ಇದು ನಡೆದಿದ್ದು ಮುಂಬೈ ಹೊರವಲಯದ ಥಾಣೆ ವ್ಯಾಪ್ತಿಯಲ್ಲಿ.
ಈ ಸಂಬಂಧ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಸ್ತೆ ಮಧ್ಯೆ ಮಹಿಳಾ ಪೇದೆಯನ್ನು ಥಳಿಸಿದ ವ್ಯಕ್ತಿ ಥಾಣೆ, ಧರ್ಮವೀರ ನಗರದ ಶಿವಸೇನೆ ಮುಖಂಡ ಶಶಿಕಾಂತ್ ಎಂದು ಗುರುತಿಸಲಾಗಿದೆ. (ಪೊಲೀಸ್ ವೆರಿಫಿಕೇಶನ್ ಇಲ್ಲದೇ ಕೈಗೆ ಪಾಸ್ ಪೋರ್ಟ್)
ಈತನ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಘಟನೆ ನಡೆದಿದ್ದು ಗುರುವಾರ (ಫೆ 25) ಮಟಮಟ ಮಧ್ಯಾಹ್ನ ಹನ್ನೊಂದು ಗಂಟೆಗೆ. ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿರುವ ಪ್ರಕಾರ ಈತನ ವಾಹನ ಸಂಖ್ಯೆ ಸ್ಕಾರ್ಪಿಯೋ ಎಂಎಚ್- 06-ಬಿಇ-7340.
ವಾಹನದಲ್ಲಿ ಇಳಿದು ಶಶಿಕಾಂತ್ ಕನಿಷ್ಠ ಆರು ಬಾರಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ, ಮಹಿಳಾ ಪೇದೆ ಕೂಡಾ ಒಂದೆರಡು ಬಾರಿ ತಿರುಗೇಟು ನೀಡಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಘಟನೆಯ ವಿಡಿಯೋಗೆ ಇಲ್ಲಿ ಕ್ಲಿಕ್ಕಿಸಿ.
2007ರ ಬ್ಯಾಚಿನ ಕಾನ್ಸ್ ಸ್ಟೇಬಲ್ ಆಗಿರುವ ಈಕೆ, ಜನನಿಬಿಡ ಥಾಣೆಯ ಕಾರ್ಪೋರೇಶನ್ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೊಬೈಲ್ ನಲ್ಲಿ ಮಾತನಾಡುತ್ತಾ ಬರುತ್ತಿದ್ದ ಶಿವಸೇನೆಯ ಮುಖಂಡ ಶಶಿಕಾಂತ್ ಗೆ ಗಾಡಿ ನಿಲ್ಲಿಸಿ ಲೈಸೆನ್ಸ್ ತೋರಿಸುವಂತೆ ಈಕೆ ಸೂಚಿಸಿದ್ದಾರೆ.
ಇದರಿಂದ ಸಿಟ್ಟುಗೊಂಡ ಶಿವಸೇನೆಯ ಮುಖಂಡ, ಅವ್ಯಾಚ್ಯ ಶಬ್ದಗಳಿಂದ ಆಕೆಯನ್ನು ನಿಂದಿಸುತ್ತಾ ಗಾಡಿಯಿಂದ ಕೆಳಗಿಳಿದು ತಳ್ಳಿ, ಹಲ್ಲೆ ನಡೆಸಲಾರಂಭಿಸಿದ. ಇದರಿಂದ ಮಹಿಳಾ ಪೇದೆಗೆ ಮೂಗಿನಲ್ಲಿ ರಕ್ತಸ್ರಾವ ಆಗುತ್ತಿತ್ತು.
ವಡಾಪಾವ್ ವ್ಯಾಪಾರ ನಡೆಸುತ್ತಿರುವ ಈ ಶಿವಸೇನೆಯ ಮುಖಂಡನ ಈ ಪುಂಡತನ ವೈರಲ್ ಆಗುತ್ತಿದ್ದಂತೇ, ತಕ್ಷಣವೇ ಆತನ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಶಿವಸೇನೆಯ ಮುಖಂಡ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಕೇಸು ದಾಖಲಿಸಿ ಕೊಂಡಿರುವ ಪೊಲೀಸರು ಈತನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ದಾದಾಗಿರಿ ನಡೆಸಿದ ಶಶಿಕಾಂತ್ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದುಗೊಳಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಪೊಲೀಸ್ ಇಲಾಖೆ ಪತ್ರ ಬರೆದಿದೆ.