ಶಾಸಕರಾಗದೇ ಸಿಎಂ ಪಟ್ಟಕ್ಕೇರಿದವರ ಪೈಕಿ ಉದ್ಧವ್ ಮೊದಲಿಗರಲ್ಲ!
ಮುಂಬೈ, ನವೆಂಬರ್ 28: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕಟ್ಟು ಅಂತ್ಯ ಕಂಡಿದ್ದು, ಶಿವಾಜಿ ಪಾರ್ಕ್ ನಲ್ಲಿಂದು ಶಿವಸೇನಾ ಹೊಸ ಹುಮ್ಮಸ್ಸಿನೊಂದಿಗೆ ಹೊಸ ಅಧ್ಯಾಯ ಆರಂಭಿಸಲಿದೆ. ಠಾಕ್ರೆ ಕುಟುಂಬದಿಂದ ಇದೇ ಮೊದಲ ಬಾರಿಗೆ ಸ್ಪರ್ಧಿಸಿ ಆದಿತ್ಯ ಶಾಸಕರಾಗಿದ್ದಾರೆ. ಶಾಸಕರಲ್ಲದಿದ್ದರೂ ಶಿವಸೇನಾ ಮುಖ್ಯಸ್ಥ 59 ವರ್ಷ ವಯಸ್ಸಿನ ಉದ್ಧವ್ ಠಾಕ್ರೆಗೆ ಸಿಎಂ ಪಟ್ಟ ಒಲಿದು ಬಂದಿದೆ.
ಆದರೆ, ಎಂಎಲ್ ಎ/ ಎಂಎಲ್ ಸಿ ಅಲ್ಲದಿದ್ದರೂ ಮಹಾರಾಷ್ಟ್ರದ ಮುಖ್ಯಮಂತ್ರಿ ಪಟ್ಟಕ್ಕೇರಿದವರ ಪೈಕಿ ಉದ್ಧವ್ ಅವರೇನೂ ಮೊದಲಿಗರಲ್ಲ. ಉದ್ಧವ್ ಅವರಿಗೂ ಮುನ್ನ ಅನೇಕ ಮಂದಿ ಈ ರೀತಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ಎಆರ್ ಅಂತುಲೆ, ವಸಂತ್ ದಾದಾ ಪಾಟೀಲ್, ಶಿವಾಜಿರಾವ್ ನಿಲಾಂಗೆಕರ್ ಪಾಟೀಲ್, ಶಂಕರ್ ರಾವ್ ಚವಾಣ್, ಸುಶೀಲ್ ಕುಮಾರ್ ಶಿಂಧೆ ಹಾಗೂ ಪೃಥ್ವಿರಾಜ್ ಚವಾಣ್ ಅವರು ಶಾಸಕರಲ್ಲದಿದ್ದರೂ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದವರು. ಇವರೆಲ್ಲರ ಜೊತೆಗೆ ಶರದ್ ಪವಾರ್ ಕೂಡಾ ಎಂಎಲ್ಎ, ಎಂಎಲ್ಸಿ ಅಲ್ಲದಿದ್ದರೂ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಸಂವಿಧಾನದ 164ನೇ ವಿಧಿಯಂತೆ ರಾಜ್ಯವೊಂದರ ಮುಖ್ಯಮಂತ್ರಿಯನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡುತ್ತಾರೆ. ಸಾಮಾನ್ಯವಾಗಿ ಮುಖ್ಯಮಂತ್ರಿಗಳ ಅಧಿಕಾರ ಅವಧಿ 5 ವರ್ಷಗಳ ಅವಧಿ ಇರುತ್ತದೆ. ಶಾಸಕರಲ್ಲದವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಅವಕಾಶವಿದ್ದರೂ, ಪ್ರಮಾಣ ವಚನ ಸ್ವೀಕರಿಸಿದ ಆರು ತಿಂಗಳಿನಲ್ಲಿ ವಿಧಾನಸಭೆ ಅಥವಾ ವಿಧಾನಪರಿಷತ್ತಿಗೆ ಆಯ್ಕೆಯಾಗಬೇಕಾಗುತ್ತದೆ. ಸದ್ಯದ ಮಾಹಿತಿಯಂತೆ ಮಾಹಿಂ ವಿಧಾನಸಭಾ ಕ್ಷೇತ್ರದಿಂದ ಉದ್ಧವ್ ಠಾಕ್ರೆ ವಿಧಾನಸಭೆಗೆ ಸ್ಪರ್ಧಿಸುವ ಸಾಧ್ಯತೆಯಿದೆ
ಶಿವಾಜಿಪಾರ್ಕಿನಲ್ಲಿ ಇಂದು ಸಂಜೆ ಉದ್ಧವ್ ಠಾಕ್ರೆ ಜೊತೆಗೆ ಕಾಂಗ್ರೆಸ್, ಎನ್ಸಿಪಿ ಹಾಗೂ ಶಿವಸೇನಾದಿಂದ ತಲಾ 2 ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ನಿಂದ ಬಾಳಾಸಾಹೇಬ್ ಥೋರಟ್, ನಿತಿನ್ ರಾವತ್, ಎನ್ಸಿಪಿಯಿಂದ ಛಗನ್ ಭುಜ್ ಬಲ್, ಜಯಂತ್ ಪಾಟೀಲ್, ಶಿವಸೇನಾದಿಂದ ಸುಭಾಷ್ ದೇಸಾಯಿ, ಏಕನಾಥ್ ಶಿಂಧೆ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
288 ಮಂದಿ ವಿಧಾನಸಭಾ ಸದಸ್ಯರನ್ನು ಒಳಗೊಂಡ ಮಹಾರಾಷ್ಟ್ರದಲ್ಲಿ ಚುನಾವಣೆ ಬಳಿಕ ಯಾವೊಂದು ಪಕ್ಷವು ಅಧಿಕಾರ ಸ್ಥಾಪಿಸಲು ಅಗತ್ಯವಾದ ಮ್ಯಾಜಿಕ್ ನಂಬರ್ 145 ದಾಟಲು ಸಾಧ್ಯವಾಗಲಿಲ್ಲಲ್ಲ. 105 ಸದಸ್ಯ ಬಲದ ಬಿಜೆಪಿ ಜೊತೆ 54 ಸದಸ್ಯ ಬಲದ ಎನ್ಸಿಪಿ ಕೈ ಜೋಡಿಸಿದರೆ 159 ಸ್ಥಾನದೊಂದಿಗೆ ಸುಲಭವಾಗಿ ಸರ್ಕಾರ ರಚಿಸಬಹುದು ಎಂಬ ಲೆಕ್ಕಾಚಾರ ಉಲ್ಟಾ ಹೊಡೆಯಿತು. ಕೊನೆಗೆ 56 ಸೀಟು ಪಡೆದ ಶಿವಸೇನಾ, 44 ಗಳಿಸಿದ ಕಾಂಗ್ರೆಸ್, 54 ಗೆದ್ದ ಎನ್ಸಿಪಿ ಹಾಗೂ ಬೆಂಬಲಿತ ಪಕ್ಷಗಳು ಸೇರಿ ಸರ್ಕಾರ ರಚಿಸಿವೆ.












Click it and Unblock the Notifications