ಕಾಮಿಡಿಯನ್ ಕಪಿಲ್ ಶರ್ಮ ವಿರುದ್ಧ ಎಫ್ ಐಆರ್
ಮುಂಬೈ, ಸೆ. 20: ಪರಿಸರ ಕಾಯ್ದೆ ಉಲ್ಲಂಘನೆ ಆರೋಪದಡಿಯಲ್ಲಿ ಕಾಮಿಡಿಯನ್, ನಟ ಕಪಿಲ್ ಶರ್ಮ ವಿರುದ್ಧ ಮುಂಬೈ ಪೊಲೀಸರು ಸೋಮವಾರದಂದು ಎಫ್ ಐಆರ್ ದಾಖಲಿಸಿದ್ದಾರೆ.
'ಕಪಿಲ್ ಶರ್ಮ ವಿರುದ್ಧ ಒಟ್ಟು 6 ಪ್ರಕರಣಗಳು ದಾಖಲಾಗಿವೆ, ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. 2 ದಿನಗಳಲ್ಲಿ ನೋಟಿಸ್ ಜಾರಿ ಮಾಡಲಾಗುವುದು, ತನಿಖೆ ಪ್ರಗತಿಯಲ್ಲಿದೆ' ಎಂದು ಪೊಲೀಸರು ಹೇಳಿದರು.
ಕಪಿಲ್ ಶರ್ಮ ವರ್ಸೋವಾ ಉಪನಗರದಲ್ಲಿರುವ ತಮ್ಮ ಬಂಗಲೆ ಹಿಂಭಾಗದ ಕಾಂಡ್ಲಾ ಕಾಡಿನಲ್ಲಿ ಕಟ್ಟಡದ ಅವಶೇಷಗಳನ್ನು ಸುರಿದಿದ್ದಲ್ಲದೆ, ಅಲ್ಲಿ ಅಕ್ರಮವಾಗಿ ನಿರ್ಮಾಣ ಕಾರ್ಯ ಕೈಗೊಂಡ ಆರೋಪ ಎದುರಿಸುತ್ತಿದ್ದಾರೆ.ಎಂಎಚ್ಎಡಿಎ ಕಾಲೋನಿಯಲ್ಲಿ ನಾಲ್ಕು ಬಂಗಲೆಗಳನ್ನು ನವೆಂಬರ್ 7, 2015ರಲ್ಲಿ ಕಪಿಲ್ ಖರೀದಿಸಿದ್ದರು ಎಂದು ಅಂಧೇರಿಯ ತಹಸಿಲ್ದಾರ್ ಕಚೇರಿಯಿಂದ ದೂರು ದಾಖಲಾದೆ.
ಪರಿಸರ ಕಾಯ್ದೆ(LAC ) 87/16 ಯು/ಎಸ್ 15 (1)(2) ಅಡಿಯಲ್ಲಿ ಕಪಿಲ್ ಶರ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಅಶೋಕ್ ದುಧೆ ಹೇಳಿದ್ದಾರೆ.
ಅರಣ್ಯ ಒತ್ತುವರಿ ಪ್ರಕರಣ ಬೆಳಕಿಗೆ ಬಂದನಂತರ ಈ ಪ್ರದೇಶಕ್ಕೆ ಬೇಲಿ ಹಾಕಲು ನಿರ್ಧರಿಸಲಾಗಿದೆ. ಮಹಾರಾಷ್ಟ್ರ ಸರ್ಕಾರ 20 ಕೋಟಿ ರು ವೆಚ್ಚದಲ್ಲಿ ಬೇಲಿ ನಿರ್ಮಾಣ ಕಾರ್ಯ ಕೈಗೊಳ್ಳಲು ಮುಂದಾಗಿದೆ. ಮುಂಬೈನಲ್ಲಿ 5,469 ಹೆಕ್ಟೇರ್ ಕಾಂಡ್ಲಾ ಅರಣ್ಯ ಇದೆ. ಇದನ್ನು ಸಂರಕ್ಷಿತ ಅರಣ್ಯ ಎಂದು ಗುರುತಿಸಲಾಗಿದೆ. ಇದರಲ್ಲಿ ಶೇ 2ರಿಂದ 3ರಷ್ಟು ಜಾಗ ಒತ್ತುವರಿಯಾಗುವ ಅಪಾಯದಲ್ಲಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಕಾರಿ ಎನ್.ವಾಸುದೇವನ್ ತಿಳಿಸಿದ್ದಾರೆ.
ಎರಡನೇ ಎಫ್ ಐಆರ್ : ಈ ಮೊದಲು ಮುಂಬೈ ನಗರ ಪಾಲಿಕೆ ಕಚೇರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಪ್ರಧಾನಿ ಮೋದಿ ಅವರಿಗೆ ಕಪಿಲ್ ಟ್ವೀಟ್ ಮಾಡಿದ್ದರು. ನಾನು ಕಳೆದ ಐದು ವರ್ಷಗಳಿಂದ 15 ಕೋಟಿ ಆದಾಯ ತೆರಿಗೆ ಪಾವತಿಸಿದ್ದೇನೆ. ಆದರೆ, ಪಾಲಿಕೆ ಕಚೇರಿಯಲ್ಲಿ ಕೆಲಸ ಆಗಬೇಕಾದರೆ 5 ಲಕ್ಷ ರು ಲಂಚ ನೀಡಬೇಕಾಯಿತು. ಇದೇನಾ ಅಚ್ಚೆ ದೀನ್ ಎಂದು ಕಪಿಲ್ ಅವರು ಮೋದಿಗೆ ಟ್ವೀಟ್ ಮಾಡಿದ್ದರು.(ಪಿಟಿಐ)












Click it and Unblock the Notifications