ಡ್ರಗ್ ಕೇಸ್: ಆರ್ಯನ್ ಖಾನ್ ಭವಿಷ್ಯ ಅಕ್ಟೋಬರ್ 20ರಂದು ನಿರ್ಧಾರ
ಮುಂಬೈ, ಅಕ್ಟೋಬರ್ 14: ''ಅರಬ್ಬಿ ಸಮುದ್ರದಲ್ಲಿ ತೇಲುತ್ತಿದ್ದ ಕ್ರೂಸರ್ ಶಿಪ್ನಲ್ಲಿ ನಿಗದಿತ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ಆರ್ಯನ್ ಖಾನ್ ಡ್ರಗ್ ಸಾಗಿಸಿಲ್ಲ, ಡ್ರಗ್ಸ್ ಹೊಂದಿರಲಿಲ್ಲ, ವಿದೇಶಿ ಕರೆನ್ಸಿ ಜಪ್ತಿಯಾಗಿಲ್ಲ, ಹೀಗಿದ್ದು, ನನ್ನ ಕಕ್ಷಿದಾರರ ಬಂಧನವೇಕೆ?,'' ಎಂದು ಹಿರಿಯ ವಕೀಲ ಅಮಿತ್ ದೇಸಾಯಿ ವಾದಿಸಿದ್ದಾರೆ. ಆದರೆ, ಆರ್ಯನ್ ಹಾಗೂ ಸಹ ಆರೋಪಿಗಳ ಜಾಮೀನು ಅರ್ಜಿ ವಜಾಗೊಂಡಿದ್ದು, ಅಕ್ಟೋಬರ್ 20ರಂದು ಎನ್. ಡಿ.ಪಿ. ಎಸ್ ವಿಶೇಷ ನ್ಯಾಯಾಲಯವು ತನ್ನ ತೀರ್ಪನ್ನು ನೀಡಲಿದೆ.
ಆರ್ಯನ್ ಖಾನ್ ಜಾಮೀನು ಮನವಿಯ ವಿಚಾರಣೆ ನಡೆಸಿದ ಎನ್ ಡಿ ಪಿ ಎಸ್ ವಿಶೇಷ ನ್ಯಾಯಾಲಯವು, ಆರೋಪಿಗಳಿಗೆ ರಿಮ್ಯಾಂಡ್ ವಿಸ್ತರಿಸಲಾಗಿಲ್ಲ, ಹಾಗಾಗಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಖಾನ್ಗೆ ಸಮನ್ಸ್ ನೀಡಿ, ತನಿಖೆ ನಡೆಸಲಾಗಿದೆ. ಹಾಗಾಗಿ ಅವರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಂಗ ಬಂಧನ ಮುಂದುವರೆಯಲಿದೆ ಎಂದಿದೆ. ಆರ್ಥರ್ ರೋಡ್ ಜೈಲಿನಲ್ಲಿ ಆರ್ಯನ್ ಖಾನ್ ಇತರರನ್ನು ಕೋವಿಡ್ 19 ಮಾರ್ಗಸೂಚಿಯಂತೆ ಇರಿಸಲು ಸೂಚಿಸಲಾಗಿದೆ. ಪೊಲೀಸರ ಕಸ್ಟಡಿಗೆ ನೀಡಿಲ್ಲವಾದ್ದರಿಂದ ಇದು ಜಾಮೀನು ನೀಡಲು ಅತಿ ಮುಖ್ಯವಾಗುತ್ತದೆ ಎಂದು ವಕೀಲ ದೇಸಾಯಿ ಹೇಳಿದ್ದಾರೆ.
"ಆರ್ಯನ್ ಅವರನ್ನು ಎನ್ಡಿಪಿಎಸ್ ಕಾಯಿದೆಯ ಸೆಕ್ಷನ್ಗಳಾದ 27, 20(ಬಿ), 28, 29, 8(ಸಿ) ಅಡಿ ಬಂಧಿಸಲಾಗಿದೆ. ಎನ್ಸಿಬಿ ಪ್ರತಿಕ್ರಿಯೆಯಲ್ಲಿ ಕಾನೂನುಬಾಹಿರ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಆರ್ಯನ್ ಅವರನ್ನು ಎನ್ಡಿಪಿಎಸ್ ಕಾಯಿದೆಯ ಸೆಕ್ಷನ್ 27ಎ ಅಡಿ ಬಂಧಿಸಲಾಗಿಲ್ಲ" ಎಂದು ದೇಸಾಯಿ ಅವರು ವಿಶೇಷ ನ್ಯಾಯಾಧೀಶ ವಿ ವಿ ಪಾಟೀಲ್ ಅವರ ಏಕಸದಸ್ಯ ಪೀಠದ ಮುಂದೆ ವಾದಿಸಿದರು.

"13 ಗ್ರಾಂ ಕೊಕೇನ್ ಆಗಲಿ, ಮಾದಕ ಮಾತ್ರೆಗಳು, ಮೆಫೆಡ್ರೋನ್ ಯಾವುದನ್ನೂ ಖಾನ್ ಅವರಿಂದ ವಶಪಡಿಸಿಕೊಳ್ಳಲಾಗಿಲ್ಲ. ಆರ್ಯನ್ ಬಳಿ ಹಣವಿರಲಿಲ್ಲ. ಮಾದಕ ವಸ್ತುಗಳನ್ನು ಸೇವನೆ ಅಥವಾ ಮಾರಾಟ ಮಾಡುವ ಯೋಜನೆ ಅವರಿಗೆ ಇರಲಿಲ್ಲ... ಮುಂಬೈನಲ್ಲಿ ಹಲವು ಪ್ರಕರಣಗಳು ವರದಿಯಾಗಿರುವುದರಿಂದ ಹಲವರನ್ನು ಬಂಧಿಸುವ ಮೂಲಕ ಎನ್ಸಿಬಿ ಒಳ್ಳೆಯ ಕೆಲಸ ಮಾಡಿದೆ. ಆದರೆ, ಯಾವುದಕ್ಕೂ ಸಂಬಂಧವಿಲ್ಲದವರನ್ನು ಕರೆತಂದು ಕಸ್ಟಡಿಯಲ್ಲಿ ಅವರು ಇಡಲಾಗದು" ಎಂದು ದೇಸಾಯಿ ಹೇಳಿದ್ದಾರೆ.
ಎನ್ಸಿಬಿಯು ಅಂತಾರಾಷ್ಟ್ರೀಯ ಮಾದಕ ವಸ್ತು ಕಳ್ಳ ಸಾಗಣೆಯ ಆರೋಪ ಮಾಡಿದೆ. ಇದರಲ್ಲಿ ವಿದೇಶಿ ಪ್ರಜೆಗಳೂ ಇದ್ದಾರೆ... ಈ ಪ್ರಕರಣವನ್ನು ಅವರು ಪಿತೂರಿ ವಿಭಾಗದಲ್ಲಿ ಬಳಕೆ ಮಾಡುತ್ತಿದ್ದಾರೆ... ಪ್ರತಿಕ್ರಿಯೆಯಲ್ಲಿ ಎನ್ಸಿಬಿಯು ಹಲವು ಆರೋಪಿಗಳನ್ನು ಉಲ್ಲೇಖಿಸಿದೆ.
ಎನ್ ಸಿಬಿ ಪರ ವಕೀಲ ಅನಿಲ್ ಸಿಂಗ್ ವಾದ: ಆರ್ಯನ್ ಖಾನ್ ವಾಟ್ಸಾಪ್ ಸಂದೇಶ, ಡ್ರಗ್ ಗುಣಮಟ್ಟ, ವಿದೇಶಿ ಪ್ರಜೆಗಳು ಭಾಗಿಯಾಗಿರುವುದು ಎಲ್ಲವೂ ಪ್ರಕರಣದಲ್ಲಿ ಮುಖ್ಯವಾಗಿದೆ. ಒಂದೇ ಕಾರಿನಲ್ಲಿ ಖಾನ್ ಮನೆಗೆ ಮರ್ಚೆಂಟ್ ತೆರಳಿದ್ದಾರೆ. ಬಂಧನವಾದಾಗ ಇಬ್ಬರೂ ಟರ್ಮಿನಲ್ ಬಳಿ ಇದ್ದರು. ಅರ್ಬಾಜ್ ಮರ್ಚೆಂಟ್ ಬಳಿ ಇದ್ದ ಮಾದಕ ವಸ್ತುವನ್ನು ತಾವು ಸೇವಿಸಿಲು ಇಟ್ಟುಕೊಂಡಿದ್ದರು. ಇದು ಇಬ್ಬರಿಗೂ ತಿಳಿದಿತ್ತು. ಮರ್ಚೆಂಟ್ ಮಾದಕ ವಸ್ತು ಸೇವಿಸಿದ್ದಾರೆ ಎಂಬುದು ಖಾನ್ಗೆ ತಿಳಿದಿತ್ತು ಎಂದ ಸಿಂಗ್.
ಕಾನೂನುಬಾಹಿರ ಮಾದಕ ವಸ್ತುಗಳ ಸಂಗ್ರಹದ ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲದಲ್ಲಿರುವ ಕೆಲವರ ಜೊತೆ ಖಾನ್ ಸಂಪರ್ಕದಲ್ಲಿದ್ದಾರೆ ಎಂದು ತೋರಿಸಲು ದಾಖಲೆಗಳಿವೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ಎನ್ಸಿಬಿ ಹೇಳಿದೆ. ಉಭಯ ಪಕ್ಷದ ವಕೀಲರ ವಾದ-ಪ್ರತಿವಾದ ಆಲಿಸಿದ ಕೋರ್ಟ್, ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ಅಕ್ಟೋಬರ್ 20ರಂದು ತೀರ್ಪು ಹೊರಬರಲಿದೆ. ಐಸೋಲೇಷನ್ ಅವಧಿ ಮುಗಿದಿರುವುದರಿಂದ ಉಳಿದ ಕೈದಿಗಳ ಜೊತೆ ಆರ್ಯನ್ ಅವರು ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ.












Click it and Unblock the Notifications