42 ಲಕ್ಷ ಮಂದಿಗೆ ಸಂಪೂರ್ಣ ಲಸಿಕೆ: 'ಮುಂಬೈಗೆ ಕೋವಿಡ್ 3 ನೇ ಅಲೆ ಅಪ್ಪಳಿಸುವಂತೆ ಕಾಣಲ್ಲ'
ಮುಂಬೈ, ಅಕ್ಟೋಬರ್ 05: "ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯು ಬರುತ್ತಿರುವಂತೆ ಕಾಣುತ್ತಿಲ್ಲ," ಎಂದು ಬಾಂಬೆ ಹೈಕೋರ್ಟ್ಗೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಹೇಳಿದೆ.
"ಕೊರೊನಾ ವೈರಸ್ ಸೋಂಕಿನ ವಿರುದ್ಧವಾಗಿ ಲಸಿಕೆ ನೀಡುವ ಪ್ರಕ್ರಿಯೆಯು ಸರಾಗವಾಗಿ ಸಾಗುತ್ತಿದೆ. ನಗರದಲ್ಲಿ 42 ಲಕ್ಷಕ್ಕೂ ಅಧಿಕ ಮಂದಿಗೆ ಸಂಪೂರ್ಣವಾಗಿ ಕೋವಿಡ್ ಲಸಿಕೆಯನ್ನು ಹಾಕಲಾಗಿದೆ. ಹಾಗೆಯೇ 82 ಲಕ್ಷ ಜನರಿಗೆ ಮೊದಲ ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಈ ಕಾರಣದಿಂದಾಗಿ ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯು ಬರುವಂತೆ ಕಾಣುತ್ತಿಲ್ಲ," ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕೌನ್ಸಿಲ್ ಅನಿಲ್ ಸಖಾರೆ ಬಾಂಬೆ ಹೈಕೋರ್ಟ್ಗೆ ತಿಳಿಸಿದ್ದಾರೆ.
"ಹಾಸಿಗೆಯಲ್ಲೇ ಇರುವ 2,586 ಮಂದಿಗೆ ಇದುವರೆಗೆ ಕೋವಿಡ್ -19 ಲಸಿಕೆಯ ಎರಡೂ ಡೋಸ್ಗಳನ್ನು ನೀಡಲಾಗಿದ್ದು, ಅಂತಹ 3,942 ಜನರು ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ," ಎಂದು ಹೇಳಿದ್ದಾರೆ.

"ಕೊರೊನಾ ವೈರಸ್ ವಿರುದ್ದವಾಗಿ ಲಸಿಕೆಯನ್ನು ನೀಡುವ ಕೆಲಸವು ನಡೆಯುತ್ತಿದೆ. ಈ ಕಾರ್ಯವು ಸರಾಗವಾಗಿ ಸಾಗುತ್ತಿದೆ. ಈಗ ಕೊರೊನಾ ಲಸಿಕೆಯ ಕೊರತೆಯೂ ಕೂಡಾ ಇಲ್ಲ. ಮುಂಬೈ ಈಗ ಸುರಕ್ಷಿತವಾಗಿದೆ. ಹಾಗಾಗಿ ಮುಂಬೈಗೆ ಕೋವಿಡ್ 3 ನೇ ಅಲೆ ಅಪ್ಪಳಿಸುವಂತೆ ಕಾಣಲ್ಲ," ಎಂದು ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.
75 ವರ್ಷ ಹಾಗೂ ಅದಕ್ಕಿಂತ ಅಧಿಕ ವರ್ಷದವರಿಗೆ ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆಯನ್ನು ನೀಡಲು ಮಹಾರಾಷ್ಟ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬೇಕು, ವಿಶೇಷವಾಗಿ ಅಂಗವೈಫಲ್ಯ ಹೊಂದಿರುವವರು ಹಾಗೂ ಹಾಸಿಗೆಯಲ್ಲೇ ಇರುವವರಿಗೆ ಮನಗೆಯೇ ತೆರಳಿ ಲಸಿಕೆಯನ್ನು ನೀಡಲು ಆದೇಶಿಸಬೇಕು ಎಂದು ಈ ವರ್ಷದ ಆರಂಭದಲ್ಲಿ ವಕೀಲರಾದ ದುತ್ರಿ ಕಾಪಾಡಿಯಾ ಹಾಗೂ ಕುನಾಲ್ ತಿವಾರಿ ಹೈಕೋರ್ಟ್ ಅರ್ಜಿಯನ್ನು ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕೌನ್ಸಿಲ್ ಅನಿಲ್ ಸಖಾರೆ "ಹಾಸಿಗೆಯಲ್ಲೇ ಇರುವ 2,586 ಮಂದಿಗೆ ಇದುವರೆಗೆ ಕೋವಿಡ್ -19 ಲಸಿಕೆಯ ಎರಡೂ ಡೋಸ್ಗಳನ್ನು ನೀಡಲಾಗಿದ್ದು, ಅಂತಹ 3,942 ಜನರು ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ," ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಕೇಂದ್ರ ಸರ್ಕಾರವು ಮನೆಮನೆಗೆ ತೆರಳಿ ಕೋವಿಡ್ ಲಸಿಕೆಯನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಕಳೆದ ತಿಂಗಳು ಮನೆ ಮನೆಗೆ ತೆರಳಿ ಲಸಿಕೆಯನ್ನು ನೀಡಲು ಅನುಮತಿ ನೀಡಿದೆ. ಮಹಾರಾಷ್ಟ್ರ ಸರ್ಕಾರ ಆಗಸ್ಟ್ನಲ್ಲಿ, ಈ ಕಾರ್ಯಕ್ರಮವನ್ನು ಆರಂಭ ಮಾಡಿತು. ಮನೆ ಮನೆಗೆ ತೆರಳಿ ಅಧಿಕಾರಿಗಳು ಕೋವಿಡ್ ಲಸಿಕೆಯನ್ನು ನೀಡಲು ಆರಂಭ ಮಾಡಿದರು.
ಇನ್ನು ಈ ನಡುವೆ ಸೋಮವಾರ ಹಬ್ಬ ಹಾಗೂ ರಜೆಗಳ ಸೀಸನ್ ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆ ಎರಡು ವಾರ ಮುಂಚಿತವಾಗಿ ಕಾಣಿಸಿಕೊಳ್ಳಲು ಕಾರಣವಾಗುತ್ತದೆ ಎಂದು ಹೇಳಿರುವ ಐಸಿಎಮ್ಆರ್ ಪ್ರಯಾಣ ಸಲಹೆಯನ್ನು ಸೂಚಿಸಿದೆ.
"ಭಾರತವು ಈಗಾಗಲೇ ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯ ಎಚ್ಚರಿಕೆಯ ನಡುವೆ ಇದೆ. ಮೂರನೇ ಅಲೆಯ ಸಂದರ್ಭದಲ್ಲಿನ ಉಂಟಾಗುವ ಅಪಾಯಗಳನ್ನು ಗುರುತಿಸಲು, ಅದಕ್ಕೆ ತಕ್ಕುದಾದ ಪರಿಹಾರ ಕಾರ್ಯವನ್ನು ನಡೆಸಲು ಈ ಸಲಹೆ ಸಹಕಾರಿ ಆಗಲಿದೆ. ಸಂದರ್ಶಕರು, ನಿವಾಸಿಗಳು ಮತ್ತು ಸ್ಥಳೀಯ ಅಧಿಕಾರಿಗಳಿಗಾಗು ನಾವು ಹಂಚಿಕೊಂಡ ಈ ಸಲಹೆಯು ದೇಶದ ಕಲ್ಯಾಣವನ್ನು ರಕ್ಷಿಸಲು ಸಹಕಾರಿ ಆಗಲಿದೆ," ಎಂದು ಐಸಿಎಮ್ಆರ್ ತಿಳಿಸಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications