ಮಾಸ್ಕ್ ಧರಿಸದ ಒಬ್ಬ ಸೋಂಕಿತನಿಂದ 400 ಮಂದಿಗೆ ಕೊರೊನಾವೈರಸ್!
ಮುಂಬೈ, ನವೆಂಬರ್.08: ಕೊರೊನಾವೈರಸ್ ಸೋಂಕು ಏನ್ ಮಾಡುತ್ತೆ. ಮಾಸ್ಕ್ ಧರಿಸುವುದಕ್ಕೆ ನಮ್ಮಿಂದ ಆಗೋದಿಲ್ಲ. ಹೀಗೆ ನಿರ್ಲಕ್ಷ್ಯ ತೋರುವುದಕ್ಕೂ ಮೊದಲು ಜನರು ಜಾಗೃತಿ ವಹಿಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಮೊದಲಿಗಿಂತ ಈಗ ಕೊಂಚ ಇಳಿಮುಖವಾಗಿದೆ. ಹಾಗೆಂದ ಮಾತ್ರಕ್ಕೆ ಜನರು ನಿರಾಳರಾಗುವಂತಿಲ್ಲ. ಮುಖಕ್ಕೆ ಮಾಸ್ಕ್ ಇಲ್ಲದೇ ಯಾರೊಬ್ಬರೂ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವಂತಿಲ್ಲ ಎಂದು ಅವರು ಮನವಿ ಮಾಡಿದ್ದಾರೆ.
Live: ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,44,147
ಸಾಮಾನ್ಯವಾಗಿ ಮುಖಕ್ಕೆ ಮಾಸ್ಕ್ ಧರಿಸದ ಒಬ್ಬರ ಕೊರೊನಾವೈರಸ್ ಸೋಂಕಿತ ವ್ಯಕ್ತಿಯಿಂದ 400ಕ್ಕೂ ಹೆಚ್ಚು ಜನರಿಗೆ ಮಹಾಮಾರಿ ಅಂಟಿಕೊಳ್ಳುವ ಅಪಾಯವಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರರು ಮಾಹಿತಿ ನೀಡಿದ್ದಾರೆ ಎಂದು ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಪಟಾಕಿ ಸಿಡಿಸದಂತೆ ಸಿಎಂ ಉದ್ಧವ್ ಠಾಕ್ರೆ ಮನವಿ:
ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಅಪಾಯದ ನಡುವೆ ದೀಪಾವಳಿಯನ್ನು ಸರಳ ಹಾಗೂ ಸುರಕ್ಷಿತವಾಗಿ ಆಚರಿಸಬೇಕಿದೆ. ದೀಪಾವಳಿ ನಂತರದ 15 ದಿನಗಳು ರಾಜ್ಯದ ಪಾಲಿಗೆ ಬಲು ಮುಖ್ಯ ಆಗಿರುತ್ತದೆ. ಪರಿಸರ ಮಾಲಿನ್ಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಇಲ್ಲದಿದ್ದರೆ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಘೋಷಿಸುವಂತಾ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳಿರುತ್ತವೆ. ಅಂಥ ಸನ್ನಿವೇಶವು ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
Recommended Video