ಅತೃಪ್ತ ಶಾಸಕರಿರುವ ಮುಂಬೈನ ಹೋಟೆಲ್ ಹೊರಗೆ ಕಾಂಗ್ರೆಸ್ ಪ್ರತಿಭಟನೆ
ಮುಂಬೈ, ಜುಲೈ 8: ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ನ ಅತೃಪ್ತ ಶಾಸಕರು ತಂಗಿರುವ ಮುಂಬೈನ ಹೋಟೆಲ್ ಹೊರ ಭಾಗದಲ್ಲಿ ಕಾಂಗ್ರೆಸ್ ನಾಯಕರು ಭಾನುವಾರ ಪ್ರತಿಭಟನೆ ನಡೆಸಿದರು. ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದವರಲ್ಲಿ ಹತ್ತು ಶಾಸಕರು ಈ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಇತರ ಪಕ್ಷಗಳ ಶಾಸಕರಿಗೆ ಬಿಜೆಪಿ ಆಮಿಷ ಒಡ್ಡುತ್ತಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಅತೃಪ್ತ ಶಾಸಕರು ಮುಂಬೈಗೆ ಹಾರಿದ್ದು ರಾಜೀವ್ ಚಂದ್ರಶೇಖರ್ ವಿಮಾನದಲ್ಲಿ
ಕರ್ನಾಟಕದಲ್ಲಿ ಸಭಾಧ್ಯಕ್ಷರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ ನಂತರ ಅತೃಪ್ತ ಶಾಸಕರು ಖಾಸಗಿ ವಿಮಾನದಲ್ಲಿ ಮುಂಬೈಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ. ಭಾನುವಾರ ಸಂಜೆ ಕಾಂಗ್ರೆಸ್ ನ ಹಿರಿಯ ನಾಯಕರಾದ ಮೊಹ್ಮದ್ ಆರೀಫ್ ನಸೀಮ್ ಖಾನ್, ಏಕ್ ನಾಥ್ ಗಾಯಕ್ವಾಡ್, ಭಾಯ್ ಜಗ್ ತಾಪ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
'ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗಲ್ಲ, ರಾಜೀನಾಮೆ ನಿರ್ಧಾರ ಅಚಲ'
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಹಾಗೂ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದವರು ಭಾಗವಹಿಸಿದ್ದರು. ಹೋಟೆಲ್ ಪ್ರವೇಶಿಸಲು ಪೊಲೀಸರು ಅವಕಾಶ ನಿರಾಕರಿಸಿದ್ದರಿಂದ ಪ್ರತಿಭಟನೆ ನಡೆಸುತ್ತಿರುವುದಾಗಿ ಖಾನ್ ಹೇಳಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಶಾಸಕರು ತಾವಾಗಿಯೇ ಇಲ್ಲಿಗೆ ಬಂದಿದ್ದಾರಾ ಅಥವಾ ಬಲವಂತವಾಗಿ ಕರೆತರಲಾಗಿದೆಯಾ ಎಂಬ ಬಗ್ಗೆ ಕೇಳಲು ಹೋಟೆಲ್ ಒಳಗೆ ತೆರಳಬೇಕು ಎಂದಿದ್ದೆವು. ಆದರೆ ನಮಗೆ ಅವಕಾಶ ಮಾಡಿಕೊಡದೆ ಬಿಜೆಪಿ ನಾಯಕರಿಗೆ ಮಾತ್ರ ಒಳಬಿಡಲಾಯಿತು ಎಂದು ಆರೋಪ ಮಾಡಿದ್ದಾರೆ.