ಔರಂಗಾಬಾದ್ಗೆ ಸಂಭಾಜಿನಗರ ಎಂದು ಮರುನಾಮಕರಣ: ಶಿವಸೇನಾ-ಕಾಂಗ್ರೆಸ್ ಕಿತ್ತಾಟ
ಮುಂಬೈ, ಜನವರಿ 1: ಔರಂಗಾಬಾದ್ ಹೆಸರನ್ನು ಬದಲಿಸಿ 'ಸಂಭಾಜಿ ನಗರ' ಎಂದು ಬದಲಿಸುವ ವಿಚಾರದಲ್ಲಿ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಪಾಲುದಾರರಾದ ಶಿವಸೇನಾ ಮತ್ತು ಕಾಂಗ್ರೆಸ್ ನಸುವೆ ಭಿನ್ನಾಭಿಪ್ರಾಯ ತಲೆದೋರಿದೆ.
ಮಹಾರಾಷ್ಟ್ರದ ಮರಾಠವಾಡ ವಿಭಾಗೀಯ ಕ್ಷೇತ್ರ ಔರಂಗಾಬಾದ್ ಪ್ರವಾಸೋದ್ಯಮ ರಾಜಧಾನಿ ಎಂದು ಪರಿಗಣಿಸಲಾಗಿದೆ. ಈ ನಗರದ ಹೆಸರನ್ನು 'ಸಂಭಾಜಿನಗರ' ಎಂದು ಬದಲಿಸುವಂತೆ ಶಿವಸೇನಾ ಸುದೀರ್ಘ ಸಮಯದ ಹಿಂದಿನಿಂದಲೂ ಬೇಡಿಕೆ ಇರಿಸಿದೆ. ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಔರಂಗಾಬಾದ್ ಪಾಲಿಕೆ ಚುನಾವಣೆ (ಎಎಂಸಿ) ನಡೆಯಬೇಕಿರುವುದರಿಂದ ಈ ವಿಚಾರ ಮಹತ್ವದ ಪಡೆದುಕೊಂಡಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿಕಟವರ್ತಿ ಮತ್ತು ರಾಜ್ಯ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ಅವರು ಕಳೆದ ವಾರ 7,500 ಕೋಟಿ ಹೂಡಿಕೆ ಪ್ರಸ್ತಾವ ಬಂದಾಗ 'ಸೂಪರ್ ಸಂಭಾಜಿ ನಗರ್' ಎಂದು ಟ್ವೀಟ್ ಮಾಡಿದ್ದರು.

ಆದರೆ, ಔರಂಗಾಬಾದ್ ಹೆಸರನ್ನು ಬದಲಿಸುವ ಶಿವಸೇನಾ ಪ್ರಯತ್ನಕ್ಕೆ ರಾಜ್ಯ ಕಾಂಗ್ರೆಸ್ ಮುಖಂಡ ಮತ್ತು ಕಂದಾಯ ಸಚಿವ ಬಾಳಸಾಹೇಬ್ ಥೋರಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಔರಂಗಾಬಾದ್ ಹೆಸರನ್ನು ಸಂಭಾಜಿ ನಗರ ಎಂದು ಬದಲಿಸುವ ಯಾವುದೇ ಪ್ರಸ್ತಾವ ಬಂದರೂ ಕಾಂಗ್ರೆಸ್ ಅದನ್ನು ವಿರೋಧಿಸಲಿದೆ. ಹೆಸರು ಬದಲಿಸುವ ಜನಸಾಮಾನ್ಯನ ಅಭಿವೃದ್ಧಿಗೆ ಯಾವುದೇ ರೀತಿ ನೆರವಾಗುವುದಿಲ್ಲ. ಹೀಗಾಗಿ ಅದರಲ್ಲಿ ನಮ್ಮ ಸರ್ಕಾರಕ್ಕೆ ನಂಬಿಕೆ ಇಲ್ಲ' ಎಂದು ಥೋರಟ್ ಹೇಳಿದ್ದಾರೆ.
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳೆಂದು ಗುರುತಿಸಿರುವ ಅಜಂತಾ, ಎಲ್ಲೋರಾಗಳನ್ನು ಒಳಗೊಂಡಿದೆ. ಬೀಬಿ ಕಾ ಮಕ್ಬರಾ, ಗಿರ್ನೇಶ್ವರ್ ದೇವಸ್ಥಾನ, ದೌಲತಾಬಾದ್ ಕೋಟೆಯಂತಹ ಪ್ರವಾಸಿ ತಾಣಗಳಿವೆ.
ಮೊಘಲರ ದೊರೆ ಔರಂಗಜೇಬ್ ಈ ನಗರಕ್ಕೆ 1653ರಲ್ಲಿ ಔರಂಗಾಬಾದ್ ಎಂದು ಮರುನಾಮಕರಣ ಮಾಡಿದ್ದ. ಔರಂಗಜೇಬನ ಆದೇಶದಂತೆ ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜನನ್ನು ಚಿತ್ರಹಿಂಸೆಗೆ ಒಳಗಾಗಿ ಸಾವಿಗೀಡಾದ ಬಳಿಕ ಈ ನಗರದ ಹೆಸರು ಬದಲಿಸಬೇಕು ಎಂಬ ಬೇಡಿಕೆ ಶುರುವಾಗಿತ್ತು.












Click it and Unblock the Notifications