ಎನ್ಸಿಪಿ-ಶೀವಸೇನಾ-ಕಾಂಗ್ರೆಸ್ ಸರ್ಕಾರ ರಚನೆ ಖಾಯಂ: ಶರದ್ ಪವಾರ್
ಮುಂಬೈ, ನವೆಂಬರ್ 23: ಮಹಾರಾಷ್ಟ್ರ ರಾಜಕೀಯ ಕ್ಷಣ-ಕ್ಷಣಕ್ಕೂ ರೋಚಕ ತಿರುವುದು ತೆಗೆದುಕೊಳ್ಳುತ್ತಿದೆ. ಬೆಳ್ಳಂಬೆಳಿಗ್ಗೆ ಬಿಜೆಪಿ ಮತ್ತು ಎನ್ಸಿಪಿ ಬಂಡಾಯ ಶಾಸಕರು ಸೇರಿ ಸರ್ಕಾರ ರಚನೆ ಮಾಡಿದ್ದಾರೆ. ಆದರೆ ಈ ಸರ್ಕಾರ ಹೆಚ್ಚು ದಿನ ಇರುವುದು ಅನುಮಾನ ಎಂಬ ಗುಮಾನಿ ಹೊಸದಾಗಿ ಎದ್ದಿದೆ.
ಎನ್ಸಿಪಿ ಮುಖಂಡ ಶರದ್ ಪವಾರ್ ಮತ್ತು ಶೀವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶರದ್ ಪಾರ್, 'ಕಾಂಗ್ರೆಸ್-ಎನ್ಸಿಪಿ-ಶಿವಸೇನಾ ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸುವುದು ಖಾಯಂ, ನಮ್ಮ ಬಳಿ ಸಂಖ್ಯೆ ಇದೆ' ಎಂದು ಹೇಳಿದ್ದಾರೆ.
ನಮ್ಮ ಬಳಿ ಸಂಖ್ಯೆ ಇದ್ದು, ಕೆಲವು ಪಕ್ಷೇತರರು ಸಹ ನಮಗೆ ಬೆಂಬಲ ನೀಡುತ್ತಿದ್ದಾರೆ ಹಾಗಾಗಿ ನಾವು ಸರ್ಕಾರ ರಚನೆ ಮಾಡಲಿದ್ದೇವೆ. ಎನ್ಸಿಪಿ-ಬಿಜೆಪಿ ಮೈತ್ರಿಗೆ ನಮ್ಮ ಒಪ್ಪಿಗೆ ಇಲ್ಲ. ಅದು ಅಜಿತ್ ಪವಾರ್ ವೈಯಕ್ತಿಕ ನಿರ್ಧಾರ ಎಂದು ಶರದ್ ಪವಾರ್ ಹೇಳಿದರು.

ನಾವು ಬಹುಮತ ಸಾಬೀತು ಮಾಡ್ತೇವೆ: ಶರದ್ ಪವಾರ್
ರಾಜ್ಯಪಾಲರು ಅವರಿಗೆ (ಬಿಜೆಪಿ-ಎನ್ಸಿಪಿ ಬಂಡಾಯ ಶಾಸಕರು) ಬಹುಮತ ಸಾಬೀತು ಪಡಿಸಲು ಸಮಯ ನೀಡಿದೆ. ಅಂದು ಅವರು ಬಹುಮತ ಸಾಬೀತು ಮಾಡಲು ವಿಫಲರಾಗುತ್ತಾರೆ. ಆ ನಂತರ ನಾವು ಮೂರು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಶರದ್ ಪವಾರ್ ಹೇಳಿದರು.

'ಶಾಸಕರ ಸಹಿಯನ್ನು ಅಜಿತ್ ದುರುಪಯೋಗ ಮಾಡಿಕೊಂಡಿದ್ದಾರೆ'
ಎಲ್ಲ ಪಕ್ಷಗಳು ತಮ್ಮ ಶಾಸಕರ ಸಹಿಯನ್ನು ತೆಗೆದುಕೊಂಡಿರುತ್ತಾವೆ. ಅದೇ ರೀತಿಯ ಪಟ್ಟಿಯೊಂದನ್ನು ಇಟ್ಟುಕೊಂಡು ಅಜಿತ್ ಪವಾರ್ ರಾಜ್ಯಪಾಲರ ಬಳಿ ಹೋಗಿದ್ದಾರೆ ಎಂದ ಶರದ್ ಪವಾರ್, ಅಜಿತ್ ಪವಾರ್ ಜೊತೆ ಹೋದ ಶಾಸಕರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆ ಹೇರಲಾಗುವುದು ಎಂದರು.

12 ಶಾಸಕರು ಅಜಿತ್ ಜೊತೆ ಇದ್ದರು: ಶರದ್ ಪವಾರ್
ನನಗೆ ಬಂದ ಮಾಹಿತಿ ಪ್ರಕಾರ ರಾಜಭವನದಲ್ಲಿ ಎನ್ಪಿಸಿಯ 10-12 ಶಾಸಕರಿದ್ದರು. ಅದರಲ್ಲಿ ಮೂವರು ಈಗಾಗಲೇ ಇಲ್ಲಿ ನನ್ನ ಜೊತೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದಾರೆ ಎಂದು ಶರದ್ ಪವಾರ್, ಆ ಶಾಸಕರಿಗೆ ಮೈಕ್ ನೀಡಿ ಮಾತನಾಡಿಸಿದರು. 'ನಾವು ಶರದ್ ಪವಾರ್ ಜೊತೆ ಇದ್ದೇವೆ' ಎಂದು ಆ ಮೂವರು ಶಾಸಕರು ಹೇಳಿದರು.

'ತನಿಖಾ ಸಂಸ್ಥೆಯ ಭಯದಿಂದ ಅಜಿತ್ ಹೀಗೆ ಮಾಡಿರಬಹುದು'
ತನಿಖಾ ಸಂಸ್ಥೆಗಳ ಭಯದಿಂದಾಗಿ ಆತ (ಅಜಿತ್ ಪವಾರ್) ಬಿಜೆಪಿ ಜೊತೆ ಕೈ ಸೇರಿಸಿದರಾ ಎಂಬುದು ಗೊತ್ತಿಲ್ಲ. ಇಂದು ಸಂಜೆ 4 ಗಂಟೆಗೆ ಎನ್ಸಿಪಿ ಶಾಸಕರ ಸಭೆ ನಡೆಸಲಾಗುವುದು ಆ ಸಭೆಯಲ್ಲಿ ಹೊಸ ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದರು.

ಶಿವಸೇನಾ ಅನ್ನು ಒಡೆಯಲು ಸಾಧ್ಯವಿಲ್ಲ: ಉದ್ಧವ್ ಠಾಕ್ರೆ
ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಮಾತನಾಡಿ, 'ಅವರು (ಬಿಜೆಪಿ) ಶೀವಸೇನಾ ವನ್ನು ಮುರಿಯುವ ಪ್ರಯತ್ನ ಮಾಡಲಿ. ಮಹಾರಾಷ್ಟ್ರದ ಜನ ಎಲ್ಲವನ್ನೂ ನೋಡುತ್ತಿದ್ದಾರೆ, ಅವರು ನಿದ್ದೆ ಮಾಡುತ್ತಿಲ್ಲ' ಎಂದರು.

ದೇವೇಂದ್ರ ಪಡ್ನವೀಸ್ ಸಿಎಂ, ಅಜಿತ್ ಪವಾರ್ ಡಿಸಿಎಂ
ಅಜಿತ್ ಪವಾರ್ ನೇತೃತ್ವದಲ್ಲಿ ಎನ್ಸಿಪಿ ಬಂಡಾಯ ಶಾಸಕರು ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದು, ದೇವೇಂದ್ರ ಪಡ್ನವೀಸ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.












Click it and Unblock the Notifications