ಮಹಾರಾಷ್ಟ್ರದಲ್ಲಿ ರಾಜ್ಯಪಾಲರ ವಿರುದ್ಧವೇ ಸಮರ ಸಾರಿದ ಮಿತ್ರಪಕ್ಷಗಳು!
ಮುಂಬೈ, ನವೆಂಬರ್.25: ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಗದ್ದುಗೆ ಏರಲು ಅವಕಾಶ ಕಲ್ಪಿಸಿಕೊಟ್ಟಿರುವ ರಾಜ್ಯಪಾಲರ ವಿರುದ್ಧ ಮಿತ್ರಪಕ್ಷಗಳು ಫುಲ್ ಗರಂ ಆಗಿ ಬಿಟ್ಟಿವೆ. ಶಾಸಕರ ಬೆಂಬಲವೇ ಇಲ್ಲದ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದು, ಮೂರು ಪಕ್ಷದ ನಾಯಕರನ್ನು ರೊಚ್ಚಿಗೆಬ್ಬಿಸಿದೆ.
ಈ ಮೊದಲು ರಾಜಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೌಶಿಯಾರ್ ಎದುರು ಮಿತ್ರಪಕ್ಷದ ಶಾಸಕರು ಪ್ಲಾನ್ ಮಾಡಿಕೊಂಡಿದ್ದರು. ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಪಕ್ಷದ ಎಲ್ಲ ಶಾಸಕರು ಒಟ್ಟಾಗಿ ಶಕ್ತಿಪ್ರದರ್ಶಿಸಲು ಮುಂದಾಗಿದ್ದರು.
ಮಹಾರಾಷ್ಟ್ರದಲ್ಲಿ ಮೂರು ಪಕ್ಷದ ಶಾಸಕರು ಒಂದಾಗಿದ್ದೇವೆ. 162 ಶಾಸಕರು ಬಿಜೆಪಿ ಸರ್ಕಾರವನ್ನು ವಿರೋಧಿಸುತ್ತಿದ್ದಾರೆ. ಹೀಗಿರುವಾಗ ಬಿಜೆಪಿಗೆ ಸರ್ಕಾರ ರಚಿಸಲು ಹೇಗೆ ಅವಕಾಶ ಕೊಟ್ಟಿದ್ದೀರಿ ಎಂದು ಶಿವಸೇನೆ ಮುಖಂಡ ಸಂಜಯ್ ರಾವಲ್ ಪ್ರಶ್ನಿಸಿದ್ದಾರೆ. ಈ ಮೊದಲು ಮೂರು ಪಕ್ಷಗಳ 162 ಶಾಸಕರು ರಾಜ್ಯಪಾಲರ ಎದುರಿನಲ್ಲೇ ಪರೇಡ್ ನಡೆಸಲು ತೀರ್ಮಾನಿಸಿದ್ದರು.

ಖಾಸಗಿ ಹೋಟೆಲ್ ನಲ್ಲಿ 162 ಶಾಸಕರ ಸಭೆ
ಮುಂಬೈ ಖಾಸಗಿ ಐಶಾರಾಮಿ ಹೋಟೆಲ್ ಗ್ರ್ಯಾಂಡ್ ಹರಾತ್ ನಲ್ಲಿ ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಪಕ್ಷದ ಶಾಸಕರೆಲ್ಲ ಒಂದಾಗಿ ಸೇರಿದ್ದಾರೆ. ಮೊದಲ ಬಾರಿಗೆ 162 ಮಂದಿ ಶಾಸಕರು ಒಂದು ಕಡೆಯಲ್ಲಿ ಸೇರಿದ್ದು, ಬಿಜೆಪಿ ಸರ್ಕಾರ ರಚನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಭೆಯಲ್ಲಿ 162 ಶಾಸಕರಿದ್ದೇವೆ ಎಂಬ ಪೋಸ್ಟರ್ ಗಳು ರಾರಾಜಿಸುತ್ತಿದ್ದವು.

ಬೇಕಿದ್ದಲ್ಲಿ ಬಂದು ನೋಡಿ ನಾವಿಷ್ಟು ಶಾಸಕರಿದ್ದೀವಿ
ಮಹಾರಾಷ್ಟ್ರದಲ್ಲಿ ಈಗ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿಗೆ ಸರಿಯಾದ ಸಂಖ್ಯಾಬಲವಿಲ್ಲ. ಏಕೆಂದರೆ, ಬಿಜೆಪಿ ಹೇಳಿದಂತೆ ಎನ್ ಸಿಪಿ ಶಾಸಕರು ಬಿಜೆಪಿಗೆ ಬೆಂಬಲ ನೀಡುತ್ತಿಲ್ಲ. ಬೇಕಿದ್ದರೆ ನೀವೇ ಬಂದು ನೋಡಿ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ. ಮುಂಬೈನ ಹೋಟೆಲ್ ಗ್ರ್ಯಾಂಡ್ ಹಯಾತ್ ನಲ್ಲಿ ಎಲ್ಲ ಶಾಸಕರು ಒಂದಾಗಿ ಸೇರಿದ್ದೀವಿ. ನಿಮಗೆ ಅನುಮಾನವಿದ್ದಲ್ಲಿ ಬಂದು ನೋಡಿರಿ ಎಂದು ರಾವತ್ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಗತ್ ಸಿಂಗ್ ಕೌಶಿಯಾರ್ ಕ್ರಮಕ್ಕೆ ಆಕ್ರೋಶ
ಇನ್ನೇನು, ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಪಕ್ಷದ ನಾಯಕರೆಲ್ಲ ಮೈತ್ರಿ ಬಗ್ಗೆ ಘೋಷಣೆ ಮಾಡಬೇಕು. ಬೆಳಗ್ಗೆ ರಾಜ್ಯಪಾಲರ ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ಕೋರಬೇಕು. ಅಷ್ಟರಲ್ಲೇ, ರಾತ್ರೋರಾತ್ರಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಮಿತ್ರಪಕ್ಷಗಳ ಪ್ಲಾನ್ ಎಲ್ಲವೂ ಉಲ್ಟಾ ಹೊಡೆಯಿತು. ಬೆಳ್ಳಂಬೆಳಗ್ಗೆ ರಾಷ್ಟ್ರಪತಿ ಆಳ್ವಿಕೆ ತೆರವುಗೊಳಿಸಿದ ರಾಜ್ಯಪಾಲ ಭಗತ್ ಸಿಂಗ್ ಕೌಶಿಯಾರ್, ಅದಾಗಿ ಎರಡು ಗಂಟೆಯಲ್ಲೇ ದೇವೇಂದ್ರ ಫಡ್ನವೀಸ್ ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದರು. ಅಲ್ಲಿಂದ ಮುಂದೆ ಬೆಳಗ್ಗೆ 7.30ರ ವೇಳೆಗೆ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಹಾಗೂ ಎನ್ ಸಿಪಿ ಮುಖಂಡ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಭವಿಷ್ಯ ಬರೆಯುತ್ತಾ ಸುಪ್ರೀಂಕೋರ್ಟ್ ತೀರ್ಪು?
ಒಂದೆಡೆ ಮಿತ್ರಪಕ್ಷದ ಶಾಸಕರೆಲ್ಲ ಕಲೆತಿದ್ದಾರೆ. ಬಿಜೆಪಿಗೆ ಬಹುಮತವಿಲ್ಲ ಎಂಬುದನ್ನು ಸಾಬೀತುಪಡಿಸಲು ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸುತ್ತಿದ್ದಾರೆ. ಇದರ ನಡುವೆ ನಾಳೆ ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ರಾಜ್ಯಪಾಲರ ನಡೆ ವಿರೋಧಿಸಿ ಮಿತ್ರಪಕ್ಷಗಳು ಸುಪ್ರೀಂಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು, ನವೆಂಬರ್.25ರಂದು ವಿಚಾರಣೆ ನಡೆಸಿದ ಕೋರ್ಟ್, ನವೆಂಬರ್.26ರ ಬೆಳಗ್ಗೆ 10.30ಕ್ಕೆ ಆದೇಶ ಹೊರಡಿಸುವುದಾಗಿ ತಿಳಿಸಿದೆ. ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ದೇವೇಂದ್ರ ಫಡ್ನವೀಸ್ ಅವರ ಸರ್ಕಾರದ ಭವಿಷ್ಯ ನಿಂತಿದೆ.












Click it and Unblock the Notifications