ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಸಿಬಿಐ ಮೊದಲ ಹೇಳಿಕೆ
ಮುಂಬೈ, ಸೆಪ್ಟೆಂಬರ್ 28: ತೀವ್ರ ಸಂಚಲನ ಮೂಡಿಸಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವು ಸಂಭವಿಸಿದ 106 ದಿನಗಳಾದರೂ ಯಾವುದೇ ಬೆಳವಣಿಗೆ ಕಂಡಿಲ್ಲ. ಮುಂಬೈ ಪೊಲೀಸರಿಂದ ಸಿಬಿಐಗೆ ತನಿಖೆ ವರ್ಗಾವಣೆಯಾದರೂ ಇದುವರೆಗೂ ಘಟನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿಯನ್ನು ಸಿಬಿಐ ನೀಡಿಲ್ಲ. ಇದು ಸುಶಾಂತ್ ಸಿಂಗ್ ಕುಟುಂಬದವರು ಹಾಗೂ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಸುಶಾಂತ್ ಅವರದ್ದು ಕೊಲೆ ಎಂದು ಕುಟುಂಬದವರು ಹಾಗೂ ಅಭಿಮಾನಿಗಳು ಆರೋಪಿಸಿದ್ದಾರೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಳಂಬ ನೀತಿ ಅನುಸರಿಸುತ್ತಿದೆ. ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ ಎಂದು ಸುಶಾಂತ್ ಕುಟುಂಬದ ಪರ ವಕೀಲ ವಿಕಾಸ್ ಸಿಂಗ್ ಆರೋಪಿಸಿದ್ದರು. ಸುಶಾಂತ್ ಅವರನ್ನು ಕೊಲ್ಲಲಾಗಿದೆ ಎಂಬ ಮಾಹಿತಿ ತಮಗೆ ಬಂದಿದೆ. ಈ ಆಯಾಮದಲ್ಲಿ ಸಿಬಿಐ ಸೂಕ್ತ ತನಿಖೆ ನಡೆಸುತ್ತಿರುವಂತೆ ಕಾಣಿಸುತ್ತಿಲ್ಲ ಎಂದು ಅವರು ಹೇಳಿದ್ದರು.
ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮತ್ತು ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್ಸಿಬಿ) ಕೂಡ ತನಿಖೆಗೆ ಇಳಿದಿವೆ. ಈಗ ಸುಶಾಂತ್ ಪ್ರಕರಣ ಹಿನ್ನೆಲೆಗೆ ಸರಿದು ಬಾಲಿವುಡ್ ಕಲಾವಿದರ ಮಾದಕ ವಸ್ತು ಸಾಗಣೆ ಹಾಗೂ ಬಳಕೆಯ ವಿವಾದ ಮುನ್ನೆಲೆಗೆ ಬಂದಿದೆ. ಈ ನಡುವೆ ಇದೇ ಮೊದಲ ಬಾರಿಗೆ ಸಿಬಿಐ ಹೇಳಿಕೆ ನೀಡಿದೆ. ಮುಂದೆ ಓದಿ...

ಯಾವ ಆಯಾಮವನ್ನೂ ನಿರಾಕರಿಸಿಲ್ಲ
'ಕೇಂದ್ರ ತನಿಖಾ ಸಂಸ್ಥೆಯು (ಸಿಬಿಐ) ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ವೃತ್ತಿಪರ ತನಿಖೆ ನಡೆಸುತ್ತಿದೆ. ಎಲ್ಲ ದಿಕ್ಕುಗಳಿಂದಲೂ ತನಿಖೆ ನಡೆಸುತ್ತಿದ್ದು, ಇದುವರೆಗೂ ಯಾವ ಆಯಾಮವನ್ನೂ ತಳ್ಳಿ ಹಾಕಿಲ್ಲ. ತನಿಖೆಯು ಮುಂದುವರಿಯುತ್ತಿದೆ' ಎಂದು ಸಿಬಿಐ ಸೋಮವಾರ ಹೇಳಿಕೆ ನೀಡಿದೆ.

ಕೊಲೆ ಎಂದು ವೈದ್ಯರೇ ಹೇಳಿದ್ದಾರೆ
'ಸುಶಾಂತ್ ಅವರ ಪ್ರಕರಣವನ್ನು ಆತ್ಮಹತ್ಯೆಗೆ ಪ್ರಚೋದನೆಯಿಂದ ಕೊಲೆಗೆ ಪರಿವರ್ತಿಸುವಲ್ಲಿ ಸಿಬಿಐ ಮಾಡುತ್ತಿರುವ ವಿಳಂಬ ಹತಾಶೆಯುಂಟುಮಾಡುತ್ತಿದೆ. ನಾನು ಕಳುಹಿಸಿದ್ದ ಫೋಟೊಗಳನ್ನು ಪರಿಶೀಲಿಸಿದ್ದ ಏಮ್ಸ್ ತಂಡದ ವೈದ್ಯರೊಬ್ಬರು, ಇದು ಶೇ 200ರಷ್ಟು ಕತ್ತು ಹಿಸುಕಿ ಮಾಡಿರುವ ಕೊಲೆಯೇ ವಿನಾ ಆತ್ಮಹತ್ಯೆಯಲ್ಲ ಎಂದಿದ್ದರು' ಎಂಬುದಾಗಿ ಸುಶಾಂತ್ ಕುಟುಂಬದ ವಕೀಲ ವಿಕಾಸ್ ಸಿಂಗ್ ಆರೋಪಿಸಿದ್ದರು.

ಡ್ರಗ್ಸ್ ಪ್ರಕರಣದತ್ತ ತಿರುಗಿಸಲಾಗುತ್ತಿದೆ
'ಎಲ್ಲ ಗಮನವನ್ನೂ ಡ್ರಗ್ಸ್ ಪ್ರಕರಣದತ್ತ ತಿರುಗುವಂತೆ ಮಾಡಲಾಗುತ್ತಿದೆ. ಇಂದು ಪ್ರಕರಣ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎನ್ನುವುದು ಗೊತ್ತಾಗದೆ ನಾವು ಅಸಹಾಯಕರಾಗಿದ್ದೇವೆ. ತಮಗೆ ತನಿಖೆಯಲ್ಲಿ ಏನು ಸಿಕ್ಕಿದೆ ಎಂಬ ಬಗ್ಗೆ ಇಂದಿನವರೆಗೂ ಸಿಬಿಐ ಯಾವುದೇ ಪತ್ರಿಕಾ ಹೇಳಿಕೆ ನೀಡಿಲ್ಲ' ಎಂದು ಅವರು ದೂರಿದ್ದರು.

ನಾವು ಕಾಯುತ್ತಿದ್ದೇವೆ- ಅನಿಲ್ ದೇಶ್ ಮುಖ್
'ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ವೃತ್ತಿಪರವಾಗಿ ನಡೆಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಅದನ್ನು ಸಿಬಿಐಗೆ ಒಪ್ಪಿಸಲಾಯಿತು. ಅವರಿಗೆ ತನಿಖೆಯಲ್ಲಿ ಏನು ಸಿಕ್ಕಿತು ಎಂಬುದನ್ನು ತಿಳಿಯಲು ನಾವೂ ಕಾತರರಾಗಿ ಕಾಯುತ್ತಿದ್ದೇವೆ. ಅವರು ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಕೊಲೆಯಾದರೇ ಎಂದು ಜನರು ಕೇಳುತ್ತಿದ್ದಾರೆ. ನಾವು ತನಿಖೆಯ ಫಲಿತಾಂಶಕ್ಕೆ ಕಾಯುತ್ತಿದ್ದೇವೆ' ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವ್ಯಂಗ್ಯವಾಗಿ ಹೇಳಿದ್ದಾರೆ.

ಸ್ಪಷ್ಟನೆ ನೀಡಿದ್ದ ಸಿಬಿಐ
ಸಿಬಿಐ ತನಿಖೆ ಆರಂಭವಾದ ಕೆಲವು ವಾರಗಳ ಬಳಿಕ, ಇದು ಕೊಲೆಯಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಸಿಬಿಐ ಆತ್ಮಹತ್ಯೆಯ ಆಯಾಮದಿಂದ ತನಿಖೆ ನಡೆಸುತ್ತಿದೆ ಎಂಬ ಸುದ್ದಿ ಹರಡಿತ್ತು. ನಾವು ಪ್ರಕರಣದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಮತ್ತು ಅಂತಹ ನಿರ್ಧಾರಕ್ಕೆ ಬಂದಿಲ್ಲ. ಇನ್ನೂ ತನಿಖೆ ನಡೆಸುತ್ತಿದ್ದೇವೆ ಎಂದು ಸಿಬಿಐ ಸ್ಪಷ್ಟೀಕರಣ ನೀಡಿತ್ತು.












Click it and Unblock the Notifications