ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಮನೆ ಮೇಲೆ ಸಿಬಿಐ ದಾಳಿ
ಮುಂಬೈ, ಜುಲೈ 14: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಮನೆ ಮತ್ತು ಕಚೇರಿ ಮೇಲೆ ಸಿಬಿಐ ತಂಡ ಮಂಗಳವಾರ ದಾಳಿ ನಡೆಸಿ ಹಲವಾರು ಕಡತಗಳನ್ನು ವಶಪಡಿಸಿಕೊಂಡಿದೆ. ವಿದೇಶಿ ಮೂಲಗಳಿಂದ ಅಕ್ರಮವಾಗಿ ದೇಣಿಗೆ ಸಂಗ್ರಹಿಸಿದ ಆರೋಪವನ್ನು ತೀಸ್ತಾ ಅವರು ಎದುರಿಸುತ್ತಿದ್ದಾರೆ.
ವಿದೇಶಿ ಮೂಲಗಳ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ ಸಿಆರ್ಎ) ಉಲ್ಲಂಘನೆ ಮಾಡಿರುವ ತೀಸ್ತಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಿಬಿಐ ತನಿಖೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ದಾಳಿಗಳನ್ನು ನಡೆಸಲು ಸಿಬಿಐ ತಂಡ ಮುಂದಾಗಿದೆ. ನಿಯಮ ಉಲ್ಲಂಘಿಸಿದ ತೀಸ್ತಾ ಅವರ ಮೇಲಿನ ಆರೋಪ ಸಾಬೀತುಪಡಿಸಲು ಕೆಲ ದಾಖಲೆಗಳು ಬೇಕಾಗಿದೆ. ಈ ಸಂಬಂಧ ದಾಳಿ ನಡೆಸಲಾಗುತ್ತಿದೆ.

ತೀಸ್ತಾ ಅವರಿಂದ ಖಂಡನೆ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಸಂಪೂರ್ಣ ಸಹಕಾರ ನೀಡಲು ಸಿದ್ಧ ಎಂದು ಪತ್ರ ಬರೆದಿದ್ದೆ. ಅದರೂ ಸುಮಾರು 15-16 ಜನ ಅಧಿಕಾರಿಗಳು ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದು ಏಕೆ ಎಂದು ತೀಸ್ತಾ ಪ್ರಶ್ನಿಸಿದ್ದಾರೆ.
ವ್ಯಾಪಂ ಹಗರಣದಲ್ಲಿ 60 ಮಂದಿ ಬಲಿಯಾಗಿದ್ದಾರೆ, ಆದರೆ ಸಿಬಿಐ ನನ್ನ ನಿವಾಸ, ಕಚೇರಿ ಮೇಲೆ ದಾಳಿ ನಡೆಸುತ್ತಿರುವುದು ಪೂರ್ವಾಗ್ರಜ ಪೀಡಿತ ಬಿಜೆಪಿ ಸರ್ಕಾರದ ಕ್ರಮಕ್ಕೆ ಧಿಕ್ಕಾರ ಎಂದಿದ್ದಾರೆ.
ತೀಸ್ತಾ ಅವರ ಸರ್ಕಾರೇತರ ಸಂಸ್ಥೆ ಸಬ್ರಂಗ್ ಕಮ್ಯೂನಿಕೇಷನ್ ಅಂಡ್ ಪಬ್ಲೀಶಿಂಗ್ ಪ್ರೈ ಲಿ ನ ಬ್ಯಾಂಕ್ ಖಾತೆ ವಿವರಗಳನ್ನು ಸಿಬಿಐ ಕಲೆ ಹಾಕುತ್ತಿದೆ. 2006-07 ರಿಂದ 201-15ರ ತನಕ ಬ್ಯಾಂಕ್ ಖಾತೆಗೆ ಬಂದಿರುವ ದೇಣಿಗೆ ಮೊತ್ತದ ಲೆಕ್ಕಾಚಾರ ನಡೆಸಲಾಗುತ್ತಿದೆ.
ತೀಸ್ತಾ ವಿರುದ್ಧ ಪ್ರಕರಣಗಳು:
ಐದು ದಿನಗಳ ಹಿಂದೆ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಹಾಗೂ ಆಕೆ ಪತಿ ಜಾವೇದ್ ಆನಂದ್ ವಿರುದ್ಧ ಎಫ್ ಸಿಆರ್ ಎ ಉಲ್ಲಂಘನೆ ಆರೋಪಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉದ್ಯಮಿ ಗುಲಾಂ ಮೊಹಮ್ಮದ್ ಹಾಗೂ ಎನ್ ಜಿಎಒ ಸಭ್ರಂಗ್ ಕಮ್ಯೂನಿಕೇಷನ್ ವಿರುದ್ಧ ಕೂಡಾ ಪ್ರಕರಣ ಬುಕ್ ಆಗಿದೆ. [ಲಾಟರಿ ಹಗರಣದ ತನಿಖೆ ಸಿಬಿಐ ನಡೆಸೋಲ್ಲ?]
ಸಭ್ರಂಗ್ ಟ್ರಸ್ಟಿಗೆ ವಿದೇಶದಿಂದ ಸುಮಾರು 1 ಕೋಟಿ ರು ಗೂ ಅಧಿಕ ದೇಣಿಗೆ ಬಂದಿದ್ದು ಇದನ್ನು ಎನ್ ಜಿಒನ ಇತರೆ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿದೆ. ಈ ಬಗ್ಗೆ ಗುಜರಾತ್ ಸರ್ಕಾರ ಈ ಹಿಂದೆ ಆರೋಪ ಹೊರೆಸಿತ್ತು.ನಂತರ ಪ್ರಕರಣದ ತನಿಖೆಯನ್ನು ಸಿಬಿಐಗೆ ಗೃಹ ಸಚಿವಾಲಯ ವಹಿಸಿತ್ತು. (ಒನ್ ಇಂಡಿಯಾ ಸುದ್ದಿ)












Click it and Unblock the Notifications