ಅತ್ಯಾಚಾರ ಪ್ರಕರಣ, ನಟ ಆದಿತ್ಯನಿಗೆ ತಾತ್ಕಾಲಿಕ ರಿಲೀಫ್
ಮುಂಬೈ, ಜುಲೈ 03: ಬಾಲಿವುಡ್ಡಿನ ಹಿರಿಯ ನಟ ಆದಿತ್ಯ ಪಂಚೋಲಿಗೆ ಅತ್ಯಾಚಾರ ಪ್ರಕರಣದಲ್ಲಿ ತಾತ್ಕಾಲಿಕ ನೆಮ್ಮದಿ ಸುದ್ದಿ ಸಿಕ್ಕಿದೆ. ಜುಲೈ 19ರ ತನಕ ಮಧ್ಯಂತರ ರಿಲೀಫ್ ಪಡೆದುಕೊಂಡಿದ್ದಾರೆ.
ಆದಿತ್ಯ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಮಂಗಳವಾರದಂದು ನಡೆಸಿದ ದಿನ್ದೋಶೀ ಸೆಷನ್ಸ್ ಕೋರ್ಟ್, ಪಂಚೋಲಿ(54) ಅವರನ್ನು ಜುಲೈ 19ರ ತನಕ ಬಂಧಿಸದಂತೆ ಪೊಲೀಸರಿಗೆ ಸೂಚಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

ಮಹಿಳೆಯೊಬ್ಬರು ನೀಡಿರುವ ಲಿಖಿತ ದೂರಿನ ಅನ್ವಯ ಆದಿತ್ಯ ಪಂಚೋಲಿ ವಿರುದ್ಧ ಐಪಿಸಿ ಸೆಕ್ಷನ್ 376 ಅನ್ವಯ ದೂರು ದಾಖಲಿಸಿಕೊಳ್ಳಲಾಗಿತ್ತು. ವರ್ಸೋವಾ ಸಬ್ ಅರ್ಬನ್ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದು, ದೂರು ನೀಡಿದ ಮಹಿಳೆಯ ಹೇಳಿಕೆ ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಸಂತ್ರಸ್ತೆಯ ಸೋದರಿಯೊಬ್ಬರು, ಪೊಲೀಸರ ಮೊರೆ ಹೋಗಿ ದೂರು ನೀಡಿದ್ದರು. 2004ರಲ್ಲೇ ಆದಿತ್ಯ ಕಿರುಕುಳ ನೀಡಿದ್ದಾನೆ. ಇಬ್ಬರು ಲಿವ್ ಇನ್ ಸಂಬಂಧದಲ್ಲಿದ್ದರು. ಹೀಗಾಗಿ, ನನ್ನ ಸೋದರಿಯ ಖಾಸಗಿ ಚಿತ್ರಗಳನ್ನು ತೆಗೆದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದರು.
ನೆರೆಮನೆಯವರ ಮೇಲೆ ಹಲ್ಲೆ ಮಾಡಿದ ಪ್ರಕರಣವನ್ನು 2013ರಲ್ಲಿ ಎದುರಿಸಿದ್ದ ಆದಿತ್ಯ ಪಂಚೋಲಿಗೆ ಬಹುವಾಗಿ ಕಾಡಿದ್ದು ನಟಿ ಜಿಯಾ ಖಾನ್ ಅವರ ನಿಗೂಢ ಸಾವು. ಜಿಯಾ ಸಾವಿಗೆ ಆದಿತ್ಯ ಪಂಚೋಲಿ ಹಾಗೂ ಅವರ ಮಗ ಸೂರಜ್ ಕಾರಣ ಎಂದು ಜಿಯಾ ಅವರ ತಾಯಿ ಆಗ್ರಹಿಸಿ ವಿವಿಧ ತನಿಖಾ ಸಂಸ್ಥೆಗಳಿಂದ ತನಿಖೆಗಾಗಿ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications