ಬಿಜೆಪಿ ಕೊಟ್ಟ ಭರವಸೆಗಳೆಲ್ಲ ಸುಳ್ಳುರೀ! ಹೀಗೆ ಹೇಳಿದ್ದು ಸಚಿವ ನಿತಿನ್ ಗಡ್ಕರಿ
ಮುಂಬೈ, ಅಕ್ಟೋಬರ್ 10: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ನಿತಿನ್ ಗಡ್ಕರಿ ನೀಡಿರುವ ಹೇಳಿಕೆಯೊಂದು ಬಿಜೆಪಿಗೆ ಮುಳುವಾಗುವ ಸೂಚನೆ ಕಂಡುಬಂದಿದೆ.
ಬಿಜೆಪಿ ಸರ್ಕಾರ ಮತ್ತು ಪ್ರಧಾನ ನರೇಂದ್ರ ಮೋದಿ ಸುಳ್ಳುಗಳ ಮೂಲಕವೇ ಜನರನ್ನು ವಂಚಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪುಷ್ಠಿ ನೀಡುವಂತೆ ನಿತಿನ್ ಗಡ್ಕರಿ ಹೇಳಿಕೆ ಕೊಟ್ಟಿರುವುದು, ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿದೆ.
ಲೋಕಸಭೆ ಚುನಾವಣೆಗೂ ಮುನ್ನ ಭರವಸೆಗಳ ಬೃಹತ್ ಪಟ್ಟಿಯನ್ನೇ ನೀಡಿದ್ದ ಬಿಜೆಪಿ, ಚುನಾವಣೆ ಬಳಿಕವೂ ಜನರಿಗೆ ಅನೇಕ ಆಶ್ವಾಸನೆಗಳನ್ನು ನೀಡಿತ್ತು. ಇದೆಲ್ಲವೂ ಅಧಿಕಾರಕ್ಕಾಗಿ ಹೇಳಿಕೊಂಡ ಸುಳ್ಳು ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಈಗಾಗಲೇ ಕೇಂದ್ರದ ವಿರುದ್ಧ ವ್ಯಾಪಕ ಟೀಕಾಪ್ರಹಾರ ನಡೆಸುತ್ತಿರುವ ಕಾಂಗ್ರೆಸ್ಗೆ ನಿತಿನ್ ಗಡ್ಕರಿ ಆಹಾರ ಒದಗಿಸಿದ್ದಾರೆ. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಚಾರ ನಡೆಸಲು 'ಕೈ' ಪಾಳೆಯಕ್ಕೆ ಬೃಹತ್ ಅಸ್ತ್ರವೂ ದೊರೆತಂತಾಗಿದೆ.

ಗಡ್ಕರಿ ಹೇಳಿದ್ದೇನು?
ಮರಾಠಿ ವಾಹಿನಿಯೊಂದಕ್ಕೆ ನಿತಿನ್ ಗಡ್ಕರಿ ನೀಡಿದ್ದ ಸಂದರ್ಶನ ಕೆಲವು ದಿನಗಳ ಹಿಂದೆ ಪ್ರಸಾರವಾಗಿತ್ತು.
ಅದರಲ್ಲಿ ನಿತಿನ್ ಗಡ್ಕರಿ ಅವಾಸ್ತವಿಕ ಭರವಸೆಗಳನ್ನು ನೀಡಿ, ಅದರ ಆಧಾರದಲ್ಲಿಯೇ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿತು ಎಂದು ಹೇಳಿಕೆ ನೀಡಿದ್ದರು. ಇದು ಬಿಜೆಪಿಗೆ ಮುಜುಗರ ಉಂಟುಮಾಡಿದೆ.

ಅಧಿಕಾರಕ್ಕೆ ಬರುವುದಿಲ್ಲ ಎಂದು ಗೊತ್ತಿತ್ತು
ನಾವು ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ನಮಗೆ ಗೊತ್ತಿತ್ತು. ಹೀಗಾಗಿ ನಮಗೆ ಸುಳ್ಳು ಭರವಸೆಗಳು ನೀಡುವಂತೆ ಸಲಹೆ ಕೊಟ್ಟರು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಂದರ್ಶನದಲ್ಲಿ ಹೇಳಿದ್ದರು.

ನಕ್ಕು ಸುಮ್ಮನಾಗುತ್ತೇವೆ
ಈಗ ನಾವು ಅಧಿಕಾರದಲ್ಲಿದ್ದೇವೆ. ನಾವು ಆಗ ನೀಡಿದ್ದ ಭರವಸೆಗಳನ್ನು ಜನರು ನಮಗೆ ನೆನಪಿಸುತ್ತಿದ್ದಾರೆ. ಆದರೆ, ಈಗ ನಾವು ಸುಮ್ಮನೆ ನಕ್ಕು ಮುಂದುವರಿಯುತ್ತೇವೆ ಎಂದು ಗಡ್ಕರಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
|
ನೀವು ಹೇಳಿದ್ದು ನಿಜ, ಗಡ್ಕರಿ
ಗಡ್ಕರಿ ಅವರ ಸಂದರ್ಶನದ ಮಾಹಿತಿ ದೊರೆಯುತ್ತಿದ್ದಂತೆಯೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ಸರ್ಕಾರದ ವಿರುದ್ಧದ ವಾಗ್ದಾಳಿಗೆ ಅದನ್ನು ಬಳಸಿಕೊಂಡಿದ್ದಾರೆ.
'ನೀವು ಹೇಳಿದ್ದು ನಿಜ. ಪಕ್ಷವು ಅಧಿಕಾರಕ್ಕೆ ಬರಲು ಬಿಜೆಪಿ ತಮ್ಮ ಕನಸುಗಳನ್ನು ಮತ್ತು ನಂಬಿಕೆಗಳನ್ನು ಬಳಸಿಕೊಂಡಿತ್ತು ಎಂಬುದನ್ನು ಜನರು ಕೂಡ ಯೋಚಿಸುತ್ತಿದ್ದಾರೆ' ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಕೆಲಸವಿಲ್ಲ ಎಂದಿದ್ದ ಗಡ್ಕರಿ
ಕೇಂದ್ರ ಸರ್ಕಾರವನ್ನು ಗಡ್ಕರಿ ಮುಜುಗರಕ್ಕೆ ಸಿಲುಕಿಸುತ್ತಿರುವುದು ಇದು ಮೊದಲ ಬಾರಿಯೇನಲ್ಲ. ದೇಶದಲ್ಲಿ ಉದ್ಯೋಗವೇ ಸಿಗದಿರುವಾಗ ಮೀಸಲಾತಿಯು ಉದ್ಯೋಗ ಕೊಡುತ್ತದೆ ಎಂಬ ಭರವಸೆ ನೀಡಲಾಗದು ಎಂದು ಮೀಸಲಾತಿಗಾಗಿ ಮರಾಠರು ನಡೆಸಿದ ಹೋರಾಟದ ಕುರಿತು ಪ್ರತಿಕ್ರಿಯಿಸಿದ್ದರು.
'ಒಂದು ವೇಳೆ ಮೀಸಲಾತಿ ಕೊಡಲಾಯಿತು ಎಂದಿಟ್ಟುಕೊಳ್ಳೋಣ. ಆದರೆ, ಎಲ್ಲೂ ಕೆಲಸವೇ ಇಲ್ಲ. ಏಕೆಂದರೆ, ಬ್ಯಾಂಕುಗಳಲ್ಲಿನ ಉದ್ಯೋಗವು ಐಟಿ ಕಾರಣ ಕಡಿತಗೊಂಡಿವೆ. ಸರ್ಕಾರಿ ನೇಮಕಾತಿಯನ್ನು ಸ್ಥಗಿತಗೊಳಿಸಲಾಗಿದೆ. ಕೆಲಸ ಎಲ್ಲಿದೆ?' ಎಂದು ಗಡ್ಕರಿ ಹೇಳಿದ್ದರು.












Click it and Unblock the Notifications