ಕಲಾವಿದೆ ಹೇಮಾ ಹತ್ಯೆ: ಪತಿ ಚಿಂತನ್ ಉಪಾಧ್ಯಾಯ್ ಬಂಧನ
ಮುಂಬೈ, ಡಿ.22: ದೇಶದಲ್ಲಿ ಸಾಕಷ್ಟು ಸುದ್ದಿಯಾಗಿರುವ ಕಲಾವಿದೆ ಹೇಮಾ ಉಪಾಧ್ಯಾಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಚಿಂತನ್ ಉಪಾಧ್ಯಾಯ್ ಅವರನ್ನು ಮಂಗಳವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಚಿಂತನ್ ಸೇರಿದಂತೆ ಐವರನ್ನು ಮುಂಬೈ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಹೇಮಾ ಉಪಾಧ್ಯಾಯ ಮತ್ತು ಅವರ ವಕೀಲ ಹರೀಶ್ ಭಾಂಭಾನಿ ಅವರನ್ನು ಕೊಲೆ ಮಾಡಿ ಕಂಡಿವಲಿ ಬಳಿಯ ಚರಂಡಿಯಲ್ಲಿ ಎಸೆಯಲಾಗಿತ್ತು. ಡಿಸೆಂಬರ್ 12 ರಂದು ಪ್ರಕರಣ ಬೆಳಕಿಗೆ ಬಂದಿತ್ತು. ಸೋಮವಾರ ರಾತ್ರಿಯೇ ಚಿಂತನ್ ಅವರನ್ನು ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆಸಿಕೊಂಡಿದ್ದರು. ಹೆಚ್ಚಿನ ಮಾಹಿತಿ ಪಡೆಯುವ ಸಲುವಾಗಿ ಬಂಧನ ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಫತ್ತೇಸಿಂಗ್ ಪಾಟೀಲ್ ಹೇಳಿದ್ದಾರೆ. [ಮುಂಬೈ ಡಬಲ್ ಮರ್ಡರ್ : ಯಾರು ಕೊಂದವರು?]

ಪ್ರಕರಣದ ಮುಖ್ಯ ಆರೋಪಿ ವಿದ್ಯಾಧರ್ ರಾಜ್ ಭರ್ ಅವರ ಜೊತೆ ಚಿಂತನ್ ಅವರು ಫೋನ್ ಸಂಪರ್ಕ ಹೊಂದಿದ್ದರು ಹಾಗೂ ಆರೋಪಿಗಳು ಘಟನೆ ನಡೆದ ದಿನ ಕೂಡಾ ಹೇಮಾ ಅವರಿಗೆ ಕರೆ ಮಾಡಿದ್ದರ ಬಗ್ಗೆ ಮಾಹಿತಿ ಸಿಕ್ಕ ಬಳಿಕ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. [ಮುಂಬೈ ಜೋಡಿ ಕೊಲೆ: ವಾರಣಾಸಿಯಲ್ಲಿ ಸಿಕ್ಕ ಸಾಧು, ಕೊಲೆ ಪಾತಕ!]
ಈ ನಡುವೆ ಹೇಮಾ ಸಾವು ಪ್ರಕರಣದ ಮುಖ್ಯ ಶಂಕಿತ ವಾರಣಾಸಿಯ ಬಡಗಾಂವ್ ನ ನಿವಾಸಿ ಶಿವಕುಮಾರ್ ಅಲಿಯಾಸ್ ಸಾಧು ರಜ್ ಭರ್ ವಾರಣಾಸಿಯಲ್ಲಿ ಉತ್ತರ ಪ್ರದೇಶದ ವಿಶೇಷ ಟಾಸ್ಕ್ ಫೋರ್ಸ್ ಬಂಧಿಸಿ ನಂತರ ಮುಂಬೈ ಪೊಲೀಸರ ವಶಕ್ಕೆ ನೀಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ವಿದ್ಯಾಸಾಗರ್ ರಜ್ ಭರ್ ನಾಪತ್ತೆಯಾಗಿದ್ದು, ಶೋಧಕಾರ್ಯ ಜಾರಿಯಲ್ಲಿದೆ. ಈಗಾಗಲೇ ಅಜಾದ್ ರಜ್ ಭರ್, ಪ್ರದೀಪ್ ರಜ್ ಭರ್ ಹಾಗೂ ವಿಜಯ್ ರಜ್ ಭರ್ ಬಂಧಿಸಿ ವಿಚಾರಣೆ ನಡೆಸಲಾಗಿದೆ.
ಹೇಮಾ ಅವರ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಚಿಂತನ್ ಅವರು ಹಾಜರಿದ್ದರು. ಸಾಂತಾಕ್ರೂಜ್ ನಲ್ಲಿ(ಈಗ ಹೇಮಾ ಇದ್ದ ಮನೆ) ನೆಲೆಸಿದ್ದ ಇಬ್ಬರ ನಡುವೆ 2010ರಲ್ಲಿ ಮೂಡಿದ ವೈಮನಸ್ಯ 2013ರಲ್ಲಿ ವಿವಾಹ ವಿಚ್ಛೇದನಕ್ಕೆ ಮುನ್ನಡಿ ಬರೆಯಿತು. ಫ್ಯಾಮಿಲಿ ಕೋರ್ಟಿನಲ್ಲಿ ಕೇಸ್ ನಡೆಯುತ್ತಿದೆ. ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇತ್ತೀಚೆಗೆ ದುಬೈಗೆ ಹೋಗಿ ಬಂದಿದ್ದ ಹೇಮಾ ಅಲ್ಲೂ ಕೂಡಾ ಆರ್ಟ್ ಗ್ಯಾಲರಿ ಶಾಲೆ ಆರಂಭಿಸುವ ಕನಸು ಹೊತ್ತಿದ್ದರು.












Click it and Unblock the Notifications