ಜೈಲಿನ ಕೊವಿಡ್ ಕೇಂದ್ರದಲ್ಲಿ ರಾತ್ರಿ ಕಳೆದ ಅರ್ನಬ್ ಗೋಸ್ವಾಮಿ
ಮುಂಬೈ, ನವೆಂಬರ್ 05: ಆತ್ಮಹತ್ಯೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಬುಧವಾರ ರಾತ್ರಿಯನ್ನು ಜೈಲಿನ ಕೊವಿಡ್ ಕೇಂದ್ರದಲ್ಲಿ ಕಳೆದಿದ್ದಾರೆ.
ಈ ಕೊವಿಡ್-19 ಕೇಂದ್ರವನ್ನು ಸದ್ಯ ಅಲಿಬೌಗ್ ಕಾರಾಗೃಹದ ಕೈದಿಗಳ ತಂಗುವಿಕೆಗೆ ನೀಡಲಾಗಿದೆ.ಬಂಧನದ ನಂತರ ನಿನ್ನೆ ಅರ್ನಬ್ ಗೋಸ್ವಾಮಿಯವರನ್ನು ರಾತ್ರಿ ವೈದ್ಯಕೀಯ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಪರೀಕ್ಷೆ ಮಾಡಿದ ನಂತರ ಅಲಿಬೌಗ್ ನಗರ ಪರಿಷತ್ ಶಾಲೆಗೆ ಕರೆದೊಯ್ಯಲಾಯಿತು.
ಅದನ್ನು ಅಲಿಬೌಗ್ ಕಾರಾಗೃಹದ ಕೋವಿಡ್-19 ಕೇಂದ್ರಕ್ಕೆ ಮೀಸಲಿಡಲಾಗಿದೆ. ಅಲ್ಲಿಯೇ ರಾತ್ರಿಯನ್ನು ಕಳೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ ರಾಯ್ ಗಢ್ ಜಿಲ್ಲೆಯಲ್ಲಿರುವ ಅಲಿಬೌಗ್ ನ ಕೋರ್ಟ್ ನಿನ್ನೆ ಅರ್ನಬ್ ಗೋಸ್ವಾಮಿ ಮತ್ತು ಇತರ ಇಬ್ಬರನ್ನು ನವೆಂಬರ್ 18ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ. ಅರ್ನಬ್ ಅವರನ್ನು 14 ದಿನಗಳ ಕಸ್ಟಡಿಗೊಪ್ಪಿಸಲು ಅನುಮತಿ ನೀಡಬೇಕೆಂದು ಪೊಲೀಸರು ಕೇಳಿದ್ದರು. ಆದರೆ ಕಸ್ಟಡಿ ತನಿಖೆ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.
ಅರ್ನಬ್ ಗೋಸ್ವಾಮಿ ಮತ್ತು ಇತರ ಇಬ್ಬರ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ಮತ್ತು 34ರಡಿ ಕೇಸು ದಾಖಲಾಗಿದೆ.
ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ನಾಯಕ್ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಅರ್ನಬ್ ಗೋಸ್ವಾಮಿ ಮೇಲಿದ್ದು ತೆಗೆದುಕೊಂಡ ಸಾಲವನ್ನು ಹಿಂತಿರುಗುವ ವಿಚಾರದಲ್ಲಿ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ಹೇಳಲಾಗಿದೆ.












Click it and Unblock the Notifications