'ನಾವು ಪ್ರಮಾಣೀಕೃತ ಗೂಂಡಾಗಳು': ಸೇನಾ ಭವನ ಘರ್ಷಣೆ ಬಳಿಕ ಸಂಜಯ್ ರಾವತ್
ಮುಂಬೈ, ಜೂ. 17: ಮುಂಬೈನ ದಾದರ್ ಪ್ರದೇಶದಲ್ಲಿ ಸೇನಾ ಭವನದ ಹೊರಗೆ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನಿನ್ನೆ ನಡೆದ ಘರ್ಷಣೆಯ ನಂತರ ಬಿಜೆಪಿ ಮಾಡಿದ ಗೂಂಡಾಗಿರಿಯ ಆರೋಪಕ್ಕೆ ಶಿವಸೇನೆಯ ಸಂಜಯ್ ರಾವತ್ ತಿರುಗೇಟು ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್ "ಗೂಂಡಾಗಳು ಎಂದು ಯಾರೂ ನಮಗೆ ಪ್ರಮಾಣಪತ್ರವನ್ನು ನೀಡುವ ಅಗತ್ಯವಿಲ್ಲ, ನಾವು ಪ್ರಮಾಣೀಕೃತ ಗೂಂಡಾಗಳು. ಮರಾಠಿ ಹೆಮ್ಮೆ ಮತ್ತು ಹಿಂದುತ್ವದ ವಿಷಯಕ್ಕೆ ಬಂದಾಗ, ನಾವು ಪ್ರಮಾಣೀಕೃತ (ಸರ್ಟಿಪೈಡ್) ಗೂಂಡಾಗಳು," ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಭೂ ವ್ಯವಹಾರ ವಿವಾದದ ಬಗ್ಗೆ ಸೇನಾ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾದ ಹೇಳಿಕೆಗಳ ವಿರುದ್ಧ ಬಿಜೆಪಿ ಯುವ ವಿಭಾಗವು ಪ್ರತಿಭಟನಾ ಮೆರವಣಿಗೆ ನಡೆಸಿದ ನಂತರ ಸೇನಾ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಿನ್ನೆ ಸೇನಾ ಭವನದ ಹೊರಗೆ ಘರ್ಷಣೆ ನಡೆದಿದೆ.

ಸೇನಾ ಕಾರ್ಯಕರ್ತರು ಬಿಜೆಪಿಯಿಂದ ಗೂಂಡಾಗಿರಿ ಆರೋಪ ಮಾಡಿದರೆ, ಬಿಜೆಪಿಯೂ ಸಹ ತಮ್ಮ ಪಕ್ಷದ ಮಹಿಳಾ ಸದಸ್ಯರ ಮೇಲೆ ಸೇನಾ ಕಾರ್ಮಿಕರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಲು ಬಿಜೆಪಿ ಕಾರ್ಯಕರ್ತರು ಬರುತ್ತಿದ್ದಾರೆ ಎಂಬ ಮಾಹಿತಿ ತಮಗೆ ದೊರೆತಿದೆ ಎಂದು ಸೇನಾ ಹೇಳಿದೆ.
"ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಾ ಬರುತ್ತಿದ್ದಾರೆ ಎಂದು ನಮಗೆ ಮೊದಲು ಮಾಹಿತಿ ಲಭಿಸಿದೆ. ನಂತರ ಸೇನಾ ಭವನವನ್ನು ಧ್ವಂಸ ಮಾಡಲು ಬರುತ್ತಿದ್ದಾರೆ ಎಂದು ನಮಗೆ ಮೊದಲು ಮಾಹಿತಿ ಲಭಿಸಿದೆ. ಆದ್ದರಿಂದ ಹತ್ತಿರ ತಲುಪುವ ಮುನ್ನ ನಾವು ಅವರನ್ನು ತಡೆದಿದ್ದೇವೆ," ಎಂದು ಸೇನಾ ಶಾಸಕ ಸದಾ ಸರ್ವಂಕರ್ ತಿಳಿಸಿದ್ಧಾರೆ.
"ಬಾಲಾಸಾಹೇಬ್ ಠಾಕ್ರೆ ಶಿವಸೇನೆ ಭವನದಲ್ಲಿ ಕುಳಿತುಕೊಳ್ಳುತ್ತಿದ್ದರು. ಶಿವಸೇನೆ ಭವನದ ಮೇಲೆ ಯಾರಾದರೂ ಆರೋಪ ಮಾಡಿದರೆ ನಾವು ಉತ್ತರಿಸುತ್ತೇವೆ. ಅದನ್ನು ಗೂಂಡಾಗಿರಿ ಎಂದು ಕರೆದರೆ ನಾವು ಗೂಂಡಾಗಳು," ಎಂದರು.
"ಬಿಜೆಪಿ ಏಕೆ ಇಷ್ಟು ಆಕ್ರೋಶಗೊಂಡಿತು? ಸೇನಾ ಸಂಪಾದಕೀಯ ಏನು ಹೇಳಿದೆ? ಇದು ಕೇವಲ ಆರೋಪಗಳ ಬಗ್ಗೆ ಸ್ಪಷ್ಟೀಕರಣವನ್ನು ಕೋರಿದೆ. ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸಿದರೆ, ಆರೋಪ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದೆ. ಸಂಪಾದಕೀಯದಲ್ಲಿ ಎಲ್ಲಿಯೂ ಬಿಜೆಪಿ ಭಾಗಿಯಾಗಿದೆ ಎಂದು ಉಲ್ಲೇಖಿಸಿಲ್ಲ. ನಿಮಗೆ ಓದಲು ಮತ್ತು ಬರೆಯಲು ಸಾಧ್ಯವಿಲ್ಲವೇ?. ಮೊದಲು ಆರೋಪಗಳು ಯಾವುವು ಮತ್ತು ಶಿವಸೇನೆ ವಕ್ತಾರರು ಏನು ಹೇಳಿದ್ದಾರೆಂದು ಅರ್ಥಮಾಡಿಕೊಳ್ಳಿ. ನೀವು ವಿದ್ಯಾವಂತರಲ್ಲವೇ?," ಎಂದು ಸಾಮ್ನಾ ಸಂಪಾದಕರಾಗಿರುವ ಸೇನಾ ನಾಯಕರು ಹೇಳಿದರು.
ರಾಜ್ಯ ಬಿಜೆಪಿ ಮುಖಂಡ ಆಶಿಶ್ ಶೆಲಾರ್ ಶಿವಸೇನಾದ ವಿರುದ್ದ ಕಿಡಿಕಾರಿದ್ದಾರೆ. "ರಾಮನನ್ನು ಈ ಸೇನಾದವರು ದೂಷಿಸುತ್ತಿದ್ದಾರೆ. ಬಾಬರಿ ಮಸೀದಿ ನೆಲಸಮಗೊಳಿಸಿದ ಬಗ್ಗೆ ಸೇನಾ ಒಂದು ಕಾಲದಲ್ಲಿ ಹೆಮ್ಮೆಪಟ್ಟಿತ್ತು. ಆದರೆ ಈಗ ಸೋನಿಯಾ ಅಥವಾ ವಾದ್ರಾ (ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ) ಈಗ ಸೇನೆಯ ದೇವತೆಗಳಾಗಿದ್ದಾರೆ," ಎಂದಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications