ದಾವೂದ್ ಹೋಟೆಲ್ ಖರೀದಿಸಲು ಮುಂದಾದ ಹಿಂದೂ ಮುಖಂಡ!
ಮುಂಬೈ, ನವೆಂಬರ್ 11 : ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಆಸ್ತಿ ಪಾಸ್ತಿ ಹರಾಜಿಗೆ ಬಂದರೆ ಸಾಕು, ಹಿಂದೂ ಮಹಾಸಭಾದ ಮುಖಂಡರೊಬ್ಬರು ಅಲ್ಲಿ ಕಾಣಿಸುತ್ತಾರೆ. ಈ ಹಿಂದೆ ದಾವೂದ್ ನ ಬೆಲೆ ಬಾಳುವ ಕಾರು ಖರೀದಿಸಿ ಅದಕ್ಕೆ ಬೆಂಕಿ ಇಟ್ಟಿದ್ದ ಹಿಂದೂ ಮುಖಂಡ ಸ್ವಾಮಿ ಚಕ್ರಪಾಣಿ ಈಗ ದಾವೂದ್ ಒಡೆತನ ಹೋಟೆಲ್ ಮೇಲೆ ಕಣ್ಣಿಟ್ಟಿದ್ದಾರೆ.
ಪಾತಕಿ ದಾವೂದ್ ಗೆ ಸೇರಿರುವ ಹೋಟೆಲ್ ಖರೀದಿಸಿ, ಆ ಸ್ಥಳದಲ್ಲಿ ಶೌಚಾಲಯ ಕಟ್ಟಿಸಲು ನಿರ್ಧರಿಸಿರುವುದಾಗಿ ಹಿಂದೂ ಮುಖಂಡ ಸ್ವಾಮಿ ಚಕ್ರಪಾಣಿ ಘೋಷಿಸಿದ್ದಾರೆ.
ದಾವೂದ್ ಅವರ ರಾನಾಖ್ ಅಫ್ರೋಜ್ ಹೋಟೆಲ್ ಹರಾಜಿನಲ್ಲಿ ಬಿಡ್ ಸಲ್ಲಿಸಲಿರುವ ಹಿಂದೂ ಮಹಾಸಭಾ, ಈ ಹೋಟೆಲ್ ಖರೀದಿಸಿ, ಅದನ್ನು ಸಾರ್ವಜನಿಕ ಮೂತ್ರಾಲಯ ಮಾಡಲು ಮುಂದಾಗಿದೆ.
ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಸ್ವಾಮಿ ಚಕ್ರಪಾಣಿ ಹರಾಜಿನಲ್ಲಿ 'ದೆಹಲಿ ಝೈಕಾ' ಹೋಟೆಲ್ ಖರೀದಿಸಲು ತೀರ್ಮಾನಿಸಿದ್ದಾರೆ. ಅಷ್ಟೇ ಅಲ್ಲ, ಪಾತಕಿ ದಾವೂದ್ನ ಆ ಹೋಟೆಲ್ ಖರೀದಿಸಿ, ಅದೇ ಸ್ಥಳದಲ್ಲಿ ಶೌಚಾಲಯ ಕಟ್ಟಿಸಲು ಮುಂದಾಗಿದ್ದಾರೆ.

ಸರ್ಕಾರದ ವಶದಲ್ಲಿ ದಾವೂದ್ ಆಸ್ತಿ
ಪಾತಕಿ ದಾವೂದ್ಗೆ ಸೇರಿದ ಬಹುತೇಕ ಆಸ್ತಿಗಳನ್ನು ಈಗಾಗಲೇ ಸರ್ಕಾರದ ವಶದಲ್ಲಿದೆ. ನವೆಂಬರ್ 14ರಂದು ಕೆಲವು ಆಸ್ತಿಗಳು ಹರಾಜಿಗೆ ಬರುತ್ತಿದ್ದು, ಮುಂಬೈನ ಭೇಂಡಿ ಬಜಾರ್ನಲ್ಲಿರುವ ಪಾತಕಿ ದಾವೂದ್ಗೆ ಸೇರಿದ 'ದೆಹಲಿ ಝೈಕಾ' ಹೋಟೆಲ್ ಪ್ರಮುಖ ಆಕರ್ಷಣೆ ಪಡೆದುಕೊಂಡಿದೆ.

ಸ್ವಾಮಿ ಚಕ್ರಪಾಣಿ ಬಿಡ್ಡಿಂಗ್
ನಾನು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಹೋಟೆಲ್ ಅನ್ನು ಖರೀಸುತ್ತೇನೆ. ಖರೀಸಿ ಆ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸುತ್ತೇನೆ. ಶೌಚಾಲಯವನ್ನು ಉಚಿತ ಉಪಯೋಗಕ್ಕೆ ಬಿಡುತ್ತೇನೆ, ಈ ಮೂಲಕ ಭಯೋತ್ಪಾದನೆ ಕೊನೆಗಾಣಿಸಲು ಸಂದೇಶ ರವಾನಿಸಲಿದ್ದೇನೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಸ್ವಾಮಿ ಚಕ್ರಪಾಣಿ ಹೇಳಿದ್ದಾರೆ.

ದಾವೂದ್ ಕಾರು ಖರೀದಿಸಿದ್ದ ಚಕ್ರಪಾಣಿ
ಈ ಹಿಂದೆ ದಾವೂದ್ಗೆ ಸೇರಿದ ಹ್ಯುಂಡೈ ಆಕ್ಸೆಂಟ್ ಕಾರೊಂದನ್ನು ಇದೇ ಸ್ವಾಮಿ ಚಕ್ರಪಾಣಿ ಹರಾಜಿನಲ್ಲಿ ಖರೀದಿಸಿದ್ದರು. ನಂತರ ಆ ಕಾರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಈಗ ಪಾತಕಿ ದಾವೂದ್ನ ಹೋಟೆಲ್ ಖರೀದಿಸಿ, ಆ ಸ್ಥಳದಲ್ಲಿ ಶೌಚಾಲಯ ಕಟ್ಟಿಸಲು ನಿರ್ಧರಿಸಿದ್ದಾರೆ.
ಈ ಶೌಚಾಲಯ ಉದ್ಘಾಟನೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಆಹ್ವಾನ ನೀಡುತ್ತೇನೆ. ಈ ಮೂಲಕ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮವೂ ಮುಂದುವರೆಯಲಿದೆ ಎಂದಿದ್ದಾರೆ.

ಹೊಟೇಲ್ ಹರಾಜಿನಲ್ಲಿ ಪತ್ರಕರ್ತ ಎಸ್.ಬಾಲಕೃಷ್ಣನ್
2015ರಲ್ಲಿ ಮಾತುಂಗಾದಲ್ಲಿರುವ ಹೋಟೆಲ್ ಅಲ್ಲದೆ ನಾನಿ ದಮನ್, ದಮನ್ ಹಾಗೂ ದಿಯುನಲ್ಲಿರುವ ಕೃಷಿ ಭೂಮಿ, ಮಾತುಂಗಾದ ಕಟ್ಟಡ, 2000 ಇಸವಿ ಮಾಡೆಲ್ ಹ್ಯುಂಡೈ ಅಕ್ಸೆಂಟ್ ಸೀಡನ್ ಕಾರು (4,000 ರೂ.ಮೂಲ ಹಣ ನಿಗದಿ) ಹರಾಜಿಗೆ ಇಡಲಾಗಿತ್ತು.
ಹೊಟೇಲ್ ಹರಾಜಿನಲ್ಲಿ ಪತ್ರಕರ್ತ ಹಾಲಿ ಎನ್ ಜಿಒ ವೊಂದರ ಮುಖ್ಯಸ್ಥ ಎಸ್.ಬಾಲಕೃಷ್ಣನ್, ದೆಹಲಿ ಮೂಲದ ನ್ಯಾಯವಾದಿ ಅಜಯ್ ಶ್ರೀವಾಸ್ತವ, ಹಿಂದೂ ಮಹಾಸಭಾದ ಸ್ವಾಮಿ ಚಕ್ರಪಾಣಿ ಮುಂತಾದವರು ಬಿಡ್ ಮಾಡಿದ್ದರು.












Click it and Unblock the Notifications