ವೃದ್ಧರಿಗೆ ಉಚಿತ ಊಟ ನೀಡುವ ಮುಂಬೈ ವೈದ್ಯರೊಬ್ಬರ ಆದರ್ಶ ಕತೆಯಿದು
ಮುಂಬೈ, ಆಗಸ್ಟ್ 1: ನಮ್ಮ ಕರ್ನಾಟಕದಲ್ಲಿ ಚುನಾವಣೆಯ ಗಿಮಿಕ್ ಎಂಬಂತೆ, ಕಡಿಮೆ ಬೆಲೆಗೆ ಊಟ ನೀಡುತ್ತೇವೆಂದು ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್ ಗಳು ತಲೆಯೆತ್ತುತ್ತಿದ್ದರೆ ಮುಂಬೈಯ ವೈದ್ಯನೊಬ್ಬ ಕಳೆದ 10 ವರ್ಷದಿಂದ ಒಂದೇ ಒಂದು ರೂಪಾಯಿಯನ್ನೂ ತೆಗೆದುಕೊಳ್ಳದೆ 200 ಕ್ಕೂ ಹೆಚ್ಚು ವೃದ್ಧರಿಗೆ ಪ್ರತಿದಿನ ಊಟ ನೀಡುತ್ತಿದ್ದಾರೆ. ಶ್ರವಣ ಟಿಫಿನ್ ಸೇವಾ ಎಂಬ ಈ ಸಂಸ್ಥೆ ಈ ಭಾಗದ ವೃದ್ಧರ ಪಾಲಿಗೆ ಸಾಕ್ಷಾತ್ ಅನ್ನಪೂರ್ಣೇಶ್ವರಿಯಾಗಿದೆ.
ತನ್ನ ವೃದ್ಧ, ಅಂಧ ತಂದೆ-ತಾಯಿಯನ್ನು ತಕ್ಕಡಿಯಲ್ಲೇ ಕೂರಿಸಿಕೊಂಡು ಅವರ ಇಚ್ಛೆಯಂತೆ ಪುಣ್ಯಕ್ಷೇತ್ರಗಳನ್ನು ಸಂಧಿಸಿದ ಶ್ರವಣ ಕುಮಾರನ ಕತೆ ನಾವೆಲ್ಲರೂ ಕೇಳಿದ್ದೇವೆ. ವೃದ್ಧ ತಂದೆ-ತಾಯಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ ಪುರಾಣದ ಆ ಶ್ರವಣಕುಮಾರ ಆದರ್ಶಗಳನ್ನು ಕೊಂಚವಾದರೂ ಪಾಲಿಸಬೇಕೆಂಬ ಉದ್ದೇಶದೊಂದಿಗೆ ಶ್ರವಣ ಟಿಫಿನ್ ಸೇವೆಯನ್ನು ಆರಂಭಿಸಿದವರು ಮುಂಬೈಯ ವೈದ್ಯ ಉದಯ ಮೋದಿ.

ಮಕ್ಕಳಿಂದ ಪರಿತ್ಯಕ್ತರಾದ ವೃದ್ಧ ದಂಪತಿಗಳಿಗೆ ಊಟ ನೀಡುವ ಕೆಲಸವನ್ನು 'ಶ್ರವಣ ಟಿಫಿನ್ ಸೇವಾ' ಮಾಡುತ್ತಿದೆ. ವೃತ್ತಿಯಲ್ಲಿ ವೈದ್ಯರಾದ ಡಾ.ಉದಯ ಮೋದಿ ಮಾನವೀಯ ಅಂತಃಕರಣದವರು.
10 ವರ್ಷದ ಹಿಂದೆ ಪಾರ್ಶ್ವವಾಯು ಪೀಡಿತ ರೋಗಿಯೊಬ್ಬ, ತನ್ನ ಪತ್ನಿಗೆ ಮಾತ್ರೆ ಖರೀದಿಸಲು ಉದಯ ಅವರ ಬಳಿ ಬಂದಿದ್ದ. ಸ್ವತಃ ರೋಗಿಯಾಗಿದ್ದ ವ್ಯಕ್ತಿ ಹೀಗೆ ಪತ್ನಿಗೆ ಮಾತ್ರೆ ಕೊಳ್ಳುವುದಕ್ಕಾಗಿ ಬಂದಿದ್ದನ್ನು ಕಂಡು, ಮನೆಯಲ್ಲಿ ಬೇರೆ ಯಾರೂ ಇಲ್ಲವೇ ಎಂದು ವಿಚರಿಸಿದಾಗ ಆ ದಂಪತಿಗಳನ್ನು ಮಕ್ಕಳು ಮನೆಯಿಂದ ಹೊರಹಾಕಿರುವುದು ತಿಳಿಯಿತು. ರೋಗಪೀಡಿತ ದಂಪತಿಗಳಿಗೆ ಅಡುಗೆ ಮಾಡಿಕೊಂಡುವುದಕ್ಕೂ ಯಾರೂ ಇರಲಿಲ್ಲ!
ಈ ವಿಷಯ ತಿಳಿದು ಡಾ.ಉದಯ, ಈ ದಂಪತಿಗಳಿಗೆ ಪ್ರತಿದಿನ ತಾವೇ ಊಟ ನೀಡುವ ಯೋಚನೆ ಮಾಡಿದರು. ಹತ್ತು ದಿನ ಈ ದಂಪತಿಗಳಿಗೆ ಊಟ ನೀಡುತ್ತಿದ್ದಂತೆಯೇ ಉದಯ ಅವರಂತೆಯೇ ಮಾನವೀಯ ಅಂತಃಕರಣದ ಅವರ ಪತ್ನಿ ಮತ್ತಷ್ಟು ಅಸಹಾಯಕರಿಗೆ ನೆರವಿನ ಹಸ್ತ ಚಾಚುವ ಉಸ್ತುಕತೆ ತೋರಿದರು. ಹೀಗೇ ಬೆಳೆಯುತ್ತ ಇದೀಗ 200 ಕ್ಕೂ ಹೆಚ್ಚು ಜನರಿಗೆ ಇವರು ಊಟ ನೀಡುತ್ತಿದ್ದಾರೆ. ನಾಲ್ವರು ಬಾಣಸಿಗರನ್ನು ನೇಮಿಸಿಕೊಳ್ಳಲಾಗಿದೆ.
ವೃದ್ಧಾಶ್ರಮ ಕಟ್ಟಬೇಕು ಎಂಬುದು ಅವರ ಯಾವತ್ತಿನ ಆಸೆ. ತಮ್ಮ ದುಡಿಮೆಯೊಂದಿಗೆ ಮಾನವೀಯ ಮನಸ್ಸುಳ್ಳ, ಸೇವಾ ಮನೋಭಾವದ ಒಂದಷ್ಟು ಜನ, ಸಂಘ-ಸಂಸ್ಥೆಗಳು ನೀಡುವ ದೇಣಿಗೆಯೇ ಇವರಿಗೆ ಶ್ರೀರಕ್ಷೆ.
ಸಮಾಜಸೇವೆಯಲ್ಲಿ ನಿರತರಾದ ಹಲವರನ್ನು ಹೀಗೆಯೇ ಪರಿಚಯಿಸುತ್ತಿರುವ seniorworld.in ಇವರ ಕುರಿತು ಸುದ್ದಿಯನ್ನು ಪ್ರಕಟಿಸಿದ್ದನ್ನು, ಈ ಆದರ್ಶ ವ್ಯಕ್ತಿಯ ಸೇವಾಕಾರ್ಯ ಮತ್ತಷ್ಟು ಜನಕ್ಕೆ ಪರಿಚಯವಾಗುವಂತೆ ಮಾಡಿದೆ.












Click it and Unblock the Notifications