26/11 ಮುಂಬೈ ದಾಳಿಯ ಉಗ್ರ ಕಸಬ್ ಗೂ ಬೆಂಗಳೂರಿಗೂ ನಂಟು!
ಮುಂಬೈ, ಫೆಬ್ರವರಿ.18: ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ 26/11 ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದ ಉಗ್ರ ಅಜ್ಮಲ್ ಕಸಬ್ ನನ್ನು ಹಿಂದೂ ಉಗ್ರನಂತೆ ಬಿಂಬಿಸಲು ಪಾಕಿಸ್ತಾನ್ ಮೂಲದ ಉಗ್ರ ಸಂಘಟನೆ ಲಷ್ಕರ್-ಇ-ತೈಬಾ ಸಂಚು ರೂಪಿಸಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಮುಂಬೈ ದಾಳಿ ಪ್ರಕರಣದ ತನಿಖೆ ನಡೆಸಿದ ಮುಂಬೈನ ನಿವೃತ್ತ ಪೊಲೀಸ್ ಅಧಿಕಾರಿ ರಾಕೇಶ್ ಮಾರಿಯಾ ತಮ್ಮ ಆತ್ಮಕಥೆ 'Let Me Say It Now' ನಲ್ಲಿ ರೋಚಕ ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಮುಂಬೈ ದಾಳಿಯ ಹಿಂದೆ ಒಬ್ಬ ಹಿಂದೂ ಭಯೋತ್ಪಾದಕ ಇರುವಂತೆ ಬಿಂಬಿಸಲು ಎಲ್ಇಟಿ ಸಂಚು ರೂಪಿಸಿತ್ತು ಎಂದು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಮುಂಬೈ ದಾಳಿಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ರಾಕೇಶ್ ಮಾರಿಯಾ ಈ ಪುಸ್ತಕದಲ್ಲಿ ತಿಳಿಸಿದ್ದಾರೆ. ಲಷ್ಕರ್-ಇ-ತೈಬಾ ನಡೆಸಿದ ಉಗ್ರ ದಾಳಿಯ ಹಿಂದೆ ನೆರೆಯ ರಾಷ್ಟ್ರ ಪಾಕಿಸ್ತಾನದ ಪಾತ್ರವೂ ಕೂಡಾ ಅಡಗಿತ್ತು ಎಂದು ತಿಳಿಸಿದ್ದಾರೆ.

ಉಗ್ರನಿಗೆ ಬೆಂಗಳೂರಿನ ನಂಟು ಕಲ್ಪಿಸುವ ಸಂಚು
ಮುಂಬೈನಲ್ಲಿ ನೆತ್ತರು ಹರಿಸಿದ ಉಗ್ರ ಅಜ್ಮಲ್ ಕಸಬ್ ಗೆ ಕರ್ನಾಟಕ ರಾಜಧಾನಿ ಬೆಂಗಳೂರಿನ ನಂಟು ಕಲ್ಪಿಸಲು ಲಷ್ಕರ್-ಇ-ತೈಬಾ ಸಂಘಟನೆಯು ಪ್ಲಾನ್ ಮಾಡಿಕೊಂಡಿತ್ತು. ಇದಕ್ಕೆ ಪುಷ್ಟಿ ನೀಡುವಂತಹ ನಕಲಿ ಗುರುತಿನ ಚೀಟಿಯು ಉಗ್ರನ ಬಳಿ ಪತ್ತೆಯಾಗಿತ್ತು. ಬೆಂಗಳೂರಿನ ನಿವಾಸಿ ಸಮೀರ್ ಚೌಧರಿ ಎಂಬ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್ ನ್ನು ಹೊಂದಿದ್ದನು ಎಂದು ತಿಳಿದು ಬಂದಿದೆ.

ಕಸಬ್ ನನ್ನು ಹಿಂದೂ ಉಗ್ರನಂತೆ ಬಿಂಬಿಸಲು ಸ್ಕೆಚ್
ಲಷ್ಕರ್-ಇ-ತೈಬಾ ಹಾಗೂ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ 26/11 ಮುಂಬೈ ದಾಳಿಯ ಯೋಜನೆಯನ್ನು ರೂಪಿಸಿದ್ದವು. ಮೊದಲೇ ರೂಪಿಸಿದ ಪ್ಲಾನ್ ನಂತೆ ಎಲ್ಲವೂ ನಡೆದಿದ್ದರೆ ಅಜ್ಮಲ್ ಕಸಬ್ ನನ್ನು ಒಬ್ಬ ಹಿಂದೂ ಉಗ್ರ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿತ್ತು ಎಂದು ಪುಸ್ತಕದಲ್ಲಿ ಬಿಂಬಿಸಲಾಗಿದೆ.

ಮೊಣಕೈಗೆ ಕೆಂಪುದಾರ ತೊಟ್ಟುಕೊಂಡಿದ್ದ ಕಸಬ್
ಮುಂಬೈ ದಾಳಿಕೋರ ಅಜ್ಮಲ್ ಕಸಬ್ ನಲ್ಲು ಹಿಂದೂ ಉಗ್ರನಂತೆ ಬಿಂಬಿಸಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿತ್ತು. ಅದಕ್ಕಾಗಿ ಮುಸ್ಲಿಂ ಉಗ್ರನಾಗಿದ್ದರೂ ಕೂಡಾ ಆತನು ಮೊಣಕೈಗೆ ಕೆಂಪುದಾರವನ್ನು ಕಟ್ಟಿಕೊಂಡಿದ್ದನು. ಈ ಕೆಂಪುದಾರವು ಹಿಂದೂ ಧರ್ಮದ ಪ್ರತೀಕ ಎಂದು ನಂಬಲಾಗಿದೆ. ಹೀಗಾಗಿಯೇ ಕಸಬ್ ನ ಮೊಣಕೈಯಲ್ಲಿ ದಾರವನ್ನು ಕಟ್ಟಿಕೊಂಡಿದ್ದ ಎಂದು ತಿಳಿದು ಬಂದಿದೆ.

ಮುಂಬೈನಲ್ಲಿ ನಡೆದ ಉಗ್ರ ದಾಳಿಯ ಹಿನ್ನೆಲೆ
ಕಳೆದ 2008ರ ನವೆಂಬರ್ 26ರಂದು ಮುಂಬೈನಲ್ಲಿ ಶಸ್ತ್ರಸಜ್ಜಿತ ಉಗ್ರರು ಗುಂಡಿನ ದಾಳಿ ನಡೆಸಿ 174ಕ್ಕೂ ಅಧಿಕ ಮಂದಿಯನ್ನು ಹತ್ಯೆಗೈದಿದ್ದರು. ನಂತರ ತಾಜ್ ಹೋಟೆಲ್ ನಲ್ಲಿ ಅಡಗಿ ಕುಳಿತ ಉಗ್ರರನ್ನು ಸೇನಾ ಕಾರ್ಯಾಚರಣೆಯನ್ನು ಹೊಡೆದುರುಳಿಸಲಾಗಿದ್ದು, ಈ ಪೈಕಿ ಅಜ್ಮಲ್ ಕಸಬ್ ನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿತ್ತು. ಅಲ್ಲಿಂದ ನಾಲ್ಕು ವರ್ಷಗಳ ಸುದೀರ್ಘ ವಿಚಾರಣೆ ಹಾಗೂ ಜೈಲುಶಿಕ್ಷೆ ಬಳಿಕ ಉಗ್ರನನ್ನು 2012ರ ನವೆಂಬರ್.21ರಂದು ಗಲ್ಲುಶಿಕ್ಷೆಗೆ ಗುರಿಪಡಿಸಲಾಯಿತು.












Click it and Unblock the Notifications