ಉಡುಪಿ: ಶಾಸಕರಿಗೆ ಟೋಪಿ ಹಾಕಿದ ವಿದ್ಯಾರ್ಥಿಗಳು!
ಉಡುಪಿ, ಜೂ.5: ಸುಳ್ಳು ದಾಖಲೆ ಸೃಷ್ಟಿಸಿ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಟ್ರಸ್ಟ್ನಿಂದ ದೇಣಿಗೆ ಪಡೆದು ವಂಚಿಸಿದ ಮೂವರು ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮವಾರ ಹಾರಾಡಿಯ ಪ್ರದೀಪ್ ಕುಮಾರ್, ಬ್ರಹ್ಮವಾರ ಕೊಳಂಬೆಯ ಯೋಗೀಶ್, ಚಾಂತಾರಿನ ಸುಬ್ರಮಣ್ಯ ಬಂಧಿತ ಆರೋಪಿಗಳು. ಬಂಧಿತರು ಒಟ್ಟು 64 ಸಾವಿರ ರೂಪಾಯಿ ದೇಣಿಗೆ ಸ್ವೀಕರಿಸಿದ್ದು ಅದರಲ್ಲಿ 36 ಸಾವಿರ ರೂಪಾಯಿಯನ್ನು ಪೊಲೀಸರು ವಶ ಪಡೆದಿದ್ದಾರೆ.
ವಂಚಿಸಿದ್ದು ಹೇಗೆ?
ವಂಚನೆ ಪ್ರಕರಣದಲ್ಲಿ ಪ್ರದೀಪ್ ಕುಮಾರ್ ಮಾಸ್ಟರ್ ಮೈಂಡ್ ಆಗಿದ್ದು ಸುಳ್ಳು ಸುಳ್ಳು ದಾಖಲೆಯ ಮೂಲಕ ಕುಂದಾಪುರದಲ್ಲಿ ವಾದಿರಾಜ ಇನ್ಸ್ಟಿಟ್ಯೂಟ್ ಎಂಬ ವಿದ್ಯಾ ಸಂಸ್ಥೆಯನ್ನು ಸೃಷ್ಟಿಸಿದ್ದಾನೆ. ಜೊತೆಗೆ ಈ ಸಂಸ್ಥೆಯ ಮಾಲೀಕ ನಾನೇ ಎಂಬುದನ್ನು ದೃಢಪಡಿಸಲು ತಲೂರು ವಿಜಯ ಬ್ಯಾಂಕಿನಲ್ಲಿ ಪ್ರದೀಪ್ ಕುಮಾರ್ ಖಾತೆಯನ್ನು ತೆರೆದಿದ್ದಾನೆ. ಬಳಿಕ ತನ್ನ ಸಂಸ್ಥೆಯ ವಿದ್ಯಾರ್ಥಿಗಳು ಎಂದು ಹೇಳಿ ಯೋಗೀಶ್, ಸುಬ್ರಮಣ್ಯರನ್ನು ಶಾಸಕ ಪ್ರಮೋದ್ ಮಧ್ವರಾಜ್ ಅವರು ನಡೆಸುತ್ತಿರುವ ಮಲ್ಪೆ ಮಧ್ವರಾಜ ಟ್ರಸ್ಟ್ಗೆ ಧನಸಹಾಯಕ್ಕಾಗಿ ಕಳುಹಿಸಿದ್ದಾನೆ.[ಉಡುಪಿ: ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ]

ಟ್ರಸ್ಟ್ನವರು ವಿದ್ಯಾಭ್ಯಾಸ ಸಹಾಯಕ್ಕಾಗಿ ಎಂಟು ಮಂದಿ ನಕಲಿ ವಿದ್ಯಾರ್ಥಿಗಳಿಗೆ 8 ಸಾವಿರದಂತೆ ಒಟ್ಟು 64 ಸಾವಿರ ರೂಪಾಯಿಯ ಚೆಕ್ ನೀಡಿದ್ದಾರೆ. ನಿರಂತರವಾಗಿ ವಿದ್ಯಾರ್ಥಿಗಳು ಸಹಾಯಧನಕ್ಕಾಗಿ ಟ್ರಸ್ಟ್ಗೆ ಬರುವುದು ನೋಡಿ ಅನುಮಾನಗೊಂಡ ಟ್ರಸ್ಟ್ನವರು ಮಲ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಮಾಡಿ ಪತ್ತೆ ಮಾಡಿದಾಗ ಈ ವಂಚನೆ ಜಾಲ ಬೆಳಕಿಗೆ ಬಂದಿದೆ.
ಪ್ರದೀಪ್ ಇವರಿಂದ ಚೆಕ್ ಸ್ವೀಕರಿಸಿ ಒಂದು ಸಾವಿರ ರೂಪಾಯಿ ಕಮಿಷನ್ ಪಡೆಯುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು ಉಳಿದ ಐವರ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಬಂಧಿತರನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಜೂ.18ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.












Click it and Unblock the Notifications