ಬಾನೆತ್ತರದ ಅಡಿಕೆ ಮರ ಹತ್ತಲು ಸುಲಭೋಪಾಯ ಕಂಡುಹಿಡಿದ ಮುಪ್ಪೇರ್ಯ ಯುವಕ!
ಮಂಗಳೂರು, ಮೇ.09: ಕೇವಲ ಹಗ್ಗ, ಟೈರ್ ಬಳಸಿ ಬಾನೆತ್ತರಕ್ಕೆ ಬೆಳೆಯುವ ಅಡಿಕೆ ಮರ ಹತ್ತಬಹುದೇ? ನಂಬುವುದು ಬಹಳ ಕಷ್ಟ . ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಯುವಕನೊಬ್ಬ ಕೇವಲ ಹಗ್ಗ , ಟೈರ್ ಬಳಸಿ ಮರ ಹತ್ತುವ ಸಾಧನ ಸಿದ್ಧಪಡಿಸಿದ್ದಾರೆ. ಈ ಸಾಧನ ಅಡಿಕೆ ಮರ ಹತ್ತಿ ಮದ್ದು ಸಿಂಪಡಣೆ, ಕೊಯ್ಲಿಗೆ ಭಾರೀ ಉಪಯುಕ್ತವಾಗಿದೆ.
ಮುಪ್ಪೇರ್ಯ ಗ್ರಾಮದ ಲಾಲ್ಕೃಷ್ಣ ಕೈಂತಾಜೆ ಅಡಕೆ ಮರವೇರಲು ಸುಲಭ ಉಪಾಯ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಲಾಲ್ಕೃಷ್ಣ ಕೈಂತಾಜೆ ಸಿವಿಲ್ ಇಂಜಿನಿಯರಿಂಗ್ ಪದವೀಧರ. ಇಂಜಿನಿಯರಿಂಗ್ ಕ್ಷೇತ್ರಕ್ಕಿಂತ ಇವರನ್ನು ಸೆಳೆದದ್ದು ಕೃಷಿ ಕ್ಷೇತ್ರ . ಇಂಜಿನಿಯರಿಂಗ್ ಪದವಿಯ ನಂತರ ಕೃಷಿಯಲ್ಲಿಯೇ ಆಸಕ್ತಿ ತೋರಿದ ಲಾಲ್ಕೃಷ್ಣ ಕೈಂತಾಜೆ ಆ ಕ್ಷೇತ್ರದಲ್ಲಿ ಕೃಷಿ ತಾಂತ್ರಿಕತೆಯಲ್ಲಿ ನೂತನ ಆವಿಷ್ಕಾರದತ್ತ ಚಿತ್ತ ಹರಿಸಿದರು.
ಅಡಿಕೆ ಬೆಳೆಗೆ ಕೊಳೆರೋಗ, ಆತಂಕದಲ್ಲಿ ಬೆಳೆಗಾರರು
ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ಅಡಿಕೆ ಬೆಳೆಗಾರರಿಗೆ ಕಾಡುತ್ತಿದೆ. ಇದುವರೆಗೂ ಅಡಿಕೆ ಮರ ಹತ್ತುವ ಕಾರ್ಯಕ್ಕೆ ವಿಭಿನ್ನ ಪ್ರಯತ್ನಗಳು ನಡೆಯುತ್ತಲೇ ಇದೆ. ಕೊಳೆರೋಗಕ್ಕೆ ಔಷಧ ಸಿಂಪಡಿಸುವಿಕೆಗೆ, ಅಡಕೆ ಕೊಯ್ಲಿಗೆ ಮರ ಏರಲೇಬೇಕು.
ಆದರೆ ಕಾರ್ಮಿಕರ ಕೊರತೆ ಹಾಗೂ ಅಡಕೆ ಮರ ಹತ್ತಿ ಔಷಧ ಸಿಂಪಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ ಷ್ಟೆಲ್ಲಾ ಸಮಸ್ಯೆಗಳಿಗೆ ಪರಿಹಾರೋಪಾಯವನ್ನು ಕಂಡುಹಿಡಿದಿದ್ದಾರೆ ಲಾಲ್ಕೃಷ್ಣ ಕೈಂತಾಜೆ...
ಈ ಪ್ರಯತ್ನ ನಡೆಸಿದ್ದು ಹೀಗೆ ...
ಲಾಲ್ಕೃಷ್ಣ ಕೈಂತಾಜೆ ಅವರು ಸುಲಭದಲ್ಲಿ ಸಿಗುವ ವಸ್ತುಗಳನ್ನು ಬಳಸಿ ಅಡಕೆ ಮರ ಏರುವ ಸಾಧನ ತಯಾರಿಸುವ ನಿಟ್ಟಿನಲ್ಲಿ ತಮ್ಮ ಪ್ರಯೋಗಗಳನ್ನು ಆರಂಭಿಸಿದರು. ಬ್ರೆಜಿಲ್ನಲ್ಲಿ ಕೃಷಿಕರು ಬಳ್ಳಿಯ ಸಹಾಯದಿಂದ ಮರ ಏರುವ ಉಪಾಯ ನೋಡಿದ ಲಾಲ್ಕೃಷ್ಣ, ಮರ ಏರುವ ಯಂತ್ರಗಳ ಬಗ್ಗೆ ಸುಲಭ ಉಪಾಯಗಳ ಬಗ್ಗೆ ಹುಡುಕಾಟ ನಡೆಸಿ ಈ ಪ್ರಯತ್ನ ಮಾಡಿದರು. ತೆಂಗಿನ ಮರಕ್ಕೆ ಹಗ್ಗದ ಸಹಾಯದಿಂದ ಏರುತ್ತಿರುವ ಮಾದರಿಯಲ್ಲೇ ಅಡಕೆ ಮರ ಏರಲು ಹಗ್ಗದಲ್ಲಿ ಬೇಕಾದ ವಿನ್ಯಾಸ ಮಾಡಿದ್ದಾರೆ.
ತ್ರಾಸದಾಯಕವಲ್ಲ, ಸುಲಭ
ಲಾಲ್ಕೃಷ್ಣ ಕೈಂತಾಜೆ ಕೇವಲ ಹಗ್ಗ ಮತ್ತು ಟೈರ್ ಬಳಸಿ ತಯಾರಿಸಿದ ಸಾಧನ ಮೂಲಕ ತ್ರಾಸದಾಯಕವಲ್ಲದ ರೀತಿಯಲ್ಲಿ ಅಡಕೆ ಮರದಲ್ಲಿ ನಿಂತು ಔಷಧ ಸಿಂಪಡಣೆಕೆ, ಅಡಕೆ ಕೊಯ್ಲು ಮಾಡುತ್ತಾರೆ.
ಸಂಶೋಧನೆ: ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂಬುದು ಶುದ್ಧ ಸುಳ್ಳು
ಹೀಗೆ ಮಾಡಿದರೆ ಮುಗಿತು
ಲಾಲ್ಕೃಷ್ಣ ಕೈಂತಾಜೆ ತಯಾರಿಸಿದ ಸಾಧನಕ್ಕೆ ಎರಡು ಹಗ್ಗ ಹಾಗೂ ಬೈಕ್ ಟೈರ್ ಇದ್ದರೆ ಸಾಕು. ಬಳ್ಳಿಯ ಒಂದು ತುದಿಗೆ ಟೈರ್ ಕಟ್ಟಿ ಇನ್ನೊಂದು ತುದಿಯನ್ನು ಅಡಕೆ ಮರಕ್ಕೆ ಸಿಕ್ಕಿಸಿಕೊಂಡು ಏರುವ ಉಪಾಯವಿದು.
ಲಾಲ್ಕೃಷ್ಣ ಅಭಿಪ್ರಾಯ
ಇದರಲ್ಲಿ ಇನ್ನಷ್ಟೂ ಸುಧಾರಣೆಗಳು ಇವೆ. ಈ ಮೂಲಕ ಸುಲಭವಾಗಿ ಹಾಗೂ ಅನಾಯಾಸವಾಗಿ ಮರವೇರಬಹುದು ಮತ್ತು ಯಾವುದೇ ಅಪಾಯವೂ ಇರುವುದಿಲ್ಲ ಎಂಬುದು ಲಾಲ್ಕೃಷ್ಣ ಅಭಿಪ್ರಾಯ.
ದಕ್ಷಿಣ ಕನ್ನಡದಲ್ಲಿ ಮಳೆಗೆ ನೆಲ ಕಚ್ಚಿದ ಅಡಿಕೆ ಬೆಳೆ, ಸಂಕಷ್ಟಕ್ಕೊಳಗಾದ ರೈತರು