ಮಕ್ಕಳಿಗೆ ಆಕ್ಸಿಜನ್ ಪೂರೈಸಲಾಗದ ಆದಿತ್ಯನಾಥ್ : ಎಚ್ ಡಿಕೆ ವಾಗ್ದಾಳಿ
ಮಂಗಳೂರು, ಮಾರ್ಚ್ 7 : ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಅಲ್ಲಿನ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳಿಗೆ ಆಕ್ಸಿಜನ್ ಪೂರೈಸಲು ಆಗಲಿಲ್ಲ. ರಾಜ್ಯದಲ್ಲಿ ಸುರಕ್ಷತೆ ಸಂದೇಶ ಕೊಡಲು ಇಲ್ಲಿಯ ಬಿಜೆಪಿಯ ನಾಯಕರು ಅವರನ್ನು ಕರೆಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಆಯೋಜಿಸಿದ್ದ ಜೆಡಿಎಸ್ ವಿಕಾಸ ಪರ್ವ ಸಮಾವೇಶದಲ್ಲಿ ಅವರು ಮಾತನಾಡಿ, ರಾಜ್ಯದ ಬಿಜೆಪಿ ನಾಯಕರು ಭೋಗಿಗಳಾಗಿದ್ದಕ್ಕೆ, ಯೋಗಿ ಆದವರನ್ನು ರಾಜ್ಯಕ್ಕೆ ಕರೆಸಿದ್ದಾರೆ. ವಿಧಾನಸೌಧದಲ್ಲಿ ನೀಲಿ ಚಿತ್ರಗಳನ್ನು ನೋಡಿ ಬಿಜೆಪಿಯ ಕೆಲವರು ಭೋಗಿಗಳಾಗಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಮಂಗಳೂರು ಜನರೇ ಇನ್ನೆಷ್ಟು ಬಾರಿ ಈ ನಾಟಕ ನೋಡ್ತೀರಿ? ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಮನೆ ಮಂದಿ ನೋವಿನಲ್ಲಿದ್ದಾರೆ ಎಂದು ಹೇಳಿದ ಅವರು, ಬಿಜೆಪಿಯ ಕೋಮುವಾದ ಮಟ್ಟ ಹಾಕಲು ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ. ಬಿಜೆಪಿ, ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳ ನಡುವೆ ನನ್ನದು ಏಕಾಂಗಿ ಹೋರಾಟ. ಆ ಕಾರಣಕ್ಕಾಗಿ ಕನ್ನಡದ ಜನತೆ ನನ್ನನ್ನು ಬೆಂಬಲಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಏಕೆ ಕೋಮು ಸಂಘರ್ಷ?
ಸಿದ್ದರಾಮಯ್ಯ ಅವರ ಕೊನೆ ಬಜೆಟ್ ನಲ್ಲಿ ವಿದೇಶದಿಂದ ಕೆಲಸವಿಲ್ಲದೆ ಹಿಂತಿರುಗುವವರಿಗೆ ಯಾವುದೇ ಭರವಸೆಯಿಲ್ಲ ಎಂದು ದೂರಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಯಾಕೆ ಕೋಮುಗಲಭೆ ಆಗುತ್ತದೆ? ಯೋಗಿ, ಅಮಿತ್ ಶಾ ಕರೆಸಿ ಭಾಷಣ ಮಾಡಿಸ್ತೀರಿ. ಬಿಜೆಪಿ ಸರಕಾರವಿದ್ದ ಐದು ವರ್ಷದಲ್ಲಿ ಮಾಡಿದ ಕೆಲಸ ಏನೆಂದು ಜನರಿಗೆ ತಿಳಿಸಿ ಎಂದು ಸವಾಲು ಹಾಕಿದ ಅವರು, ಕಾಂಗ್ರೆಸ್-ಬಿಜೆಪಿ ಧರ್ಮದ ಹೆಸರಿನಲ್ಲಿ ಸಂಘರ್ಷ ಮಾಡಿಸುತ್ತಿದೆ ಎಂದು ಟೀಕಿಸಿದರು.

ಹೆಣ್ಣುಮಕ್ಕಳಿಗೆ ಹೊಡೆಯಲಾಗುತ್ತಿದೆ
ಮಂಗಳೂರು ಜನರು ನಮಗೆ ಅವಕಾಶ ಕೊಡದಿದ್ದರೂ ರಾಜ್ಯದ ಜನ ಜೆಡಿಎಸ್ ಗೆ ಅವಕಾಶ ನೀಡುತ್ತಾರೆ. ಮಂಗಳೂರಿನಲ್ಲಿ ಹೊಟೇಲ್ ಗಳಿಗೆ ಹೋದರೆ ಹೆಣ್ಣುಮಕ್ಕಳಿಗೆ ಹೊಡೆಯಲಾಗುತ್ತಿದೆ. ಹೆಣ್ಣುಮಕ್ಕಳನ್ನು ಒದೆಯುವುದು ಬಿಜೆಪಿಯ ಯಾವ ಹಿಂದೂ ಸಂಸ್ಕೃತಿ? ಅವರಿಗೆ ನಾಚಿಕೆಯಾಗಬೇಕು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೋಮುವಾದಿಗಳನ್ನು ಬಾಲ ಬಿಚ್ಚದ ಹಾಗೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಮುಷ್ಟಿ ಅಕ್ಕಿ ಎತ್ತಲು ಮುಂದಾದ ಬಿಜೆಪಿ
ರೈತರ ಮನೆಗೆ ಹೋಗಿ ಮುಷ್ಟಿ ಅಕ್ಕಿ ಎತ್ತಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಜೋಳಿಗೆ ತುಂಬಿಸಿ, ಯಡಿಯೂರಪ್ಪ ಸಾಧನೆ ಸ್ಟಿಕ್ಕರ್ ಅಂಟಿಸುತ್ತಾರಂತೆ ಎಂದು ವ್ಯಂಗ್ಯ ವಾಡಿದ ಅವರು, ಮುಷ್ಟಿ ಅಕ್ಕಿ ಕೇಳ್ತೀರಲ್ಲಾ ಬಿಜೆಪಿ ನಾಯಕರೇ ನೀವು ಮುಷ್ಟಿ ಅಕ್ಕಿ ಕೊಡುವಷ್ಟೇ ಶಕ್ತಿ ರೈತರಿಗೆ ಕೊಟ್ಟಿದ್ದೀರಿ ಎಂದು ಟೀಕಿಸಿದರು.

ಮೋದಿ ಅವರಿಗೆ ರೈತರು ಯಾರಂತಲೇ ಗೊತ್ತಿಲ್ಲ
ನರೇಂದ್ರ ಮೋದಿ ಅವರಿಗೆ ರೈತರೆಂದರೆ ಯಾರಂತಲೇ ಗೊತ್ತಿಲ್ಲ. ರೈತರ ಆತ್ಮಹತ್ಯೆ ಹೆಸರಲ್ಲಿ ಬಿಜೆಪಿ ಹಬ್ಬದೂಟ ಮಾಡುತ್ತದೆ. ಬಿಜೆಪಿ ನಾಯಕರೇ ನಿಮಗೆ ನಾಚಿಕೆಯಾಗಲ್ವೇ? 23 ರಾಜ್ಯದಲ್ಲಿ ಬಿಜೆಪಿ ಯಾವ ಪುರುಷಾರ್ಥಕ್ಕೆ ಆಡಳಿತದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನ ಹಲವು ಕಾರ್ಯಕರ್ತರು ಜೆಡಿಎಸ್ ಗೆ ಸೇರ್ಪಡೆಗೊಂಡರು.












Click it and Unblock the Notifications