ತುಟಿಗೆ ತುಟಿ ಬೆಸೆದ ಟೀಕೆ, ಯಕ್ಷ ರಂಗ ತ್ಯಜಿಸಲು ಕಲಾವಿದರ ನಿರ್ಧಾರ
ಮಂಗಳೂರು, ಸೆಪ್ಟೆಂಬರ್ 28: ಯಕ್ಷಗಾನದಲ್ಲಿ ತುಟಿಗೆ ತುಟಿ ಬೆಸೆವ ದೃಶ್ಯದಲ್ಲಿ ಕಾಣಿಸಿಕೊಂಡು, ಕಲೆಯ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾದ ಇಬ್ಬರು ಕಲಾವಿದರು ಬೇಸತ್ತು ಯಕ್ಷ ರಂಗದಿಂದಲೇ ದೂರ ಸರಿಯುವ ನಿರ್ಧಾರ ಮಾಡಿದ್ದಾರೆ.
ತಮ್ಮಿಂದ ಆಗದ ಅಪಚಾರಕ್ಕೆ ಹೊಣೆಗಾರರನ್ನಾಗಿ ಮಾಡಲಾಗಿದೆ ಎಂಬ ಬೇಸರ ಈ ಕಲಾವಿದರದು. ಆದ್ದರಿಂದ ಕಟೀಲು ಐದನೇ ಮೇಳದ ದೇವಿ ವೇಷಧಾರಿ ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಮತ್ತು ರಾಕೇಶ್ ರೈ ಅಡ್ಕ ಅವರು ಮುಂದೆ ವೇಷ ಧರಿಸದಿರಲು ನಿರ್ಧರಿಸಿದ್ದು, ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.
ಯಕ್ಷಗಾನದಲ್ಲಿ 'ತುಟಿಗೆ ತುಟಿ ಬೆಸೆದ' ಅಸಲಿಯತ್ತು ಬಿಚ್ಚಿಟ್ಟ ಕಲಾವಿದ
ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಇವರ ವಿರುದ್ಧ ಟೀಕೆ ಮುಂದುವರಿದಿದೆ. ಇದರಿಂದ ನೊಂದಿರುವ ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಮುಂದೆ ಬಣ್ಣ ಹಚ್ಚದಿರಲು ನಿರ್ಧರಿಸಿದ್ದಾರೆ. ಎಷ್ಟೇ ಸ್ಪಷ್ಟನೆ ಕೊಟ್ಟರೂ ತಪ್ಪು ಗ್ರಹಿಕೆಯಿಂದ ಕಲಾವಿದರ ಅವಮಾನ ಮುಂದುವರೆದಿದ್ದು, ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಯಕ್ಷ ಬದುಕನ್ನೇ ಕೊನೆಗೊಳಿಸಿದೆ.
ಶ್ರೀ ದೇವಿ ಪಾತ್ರಧಾರಿಯಾಗಿ ಪ್ರಶಾಂತ್ ಶೆಟ್ಟಿ ಅಪಾರ ಜನಮನ್ನಣೆ ಗಳಿಸಿದ್ದು, ಅಪಪ್ರಚಾರದಿಂದ ಮನನೊಂದು ಯಕ್ಷಗಾನ ತ್ಯಜಿಸುವ ನಿರ್ಧಾರ ಕೈಗೊಂಡಿದ್ದಾರೆ.
ಸತ್ಯಾಸತ್ಯತೆ ಪರಿಶೀಲಿಸದೆ ಟೀಕೆ
ಯಕ್ಷಗಾನದಲ್ಲಿ ಇಂತಹ ಘಟನೆಗಳು ಸಾಕಷ್ಟು ನಡೆದಿವೆ. ಆದರೆ ಕಲಾವಿದರನ್ನು ಈ ರೀತಿಯಾಗಿ ಟೀಕೆ ಮಾಡುವ ಪ್ರವೃತ್ತಿ ಹಿಂದೆ ಇರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತುಟಿಗೆ ತುಟಿ ಬೆಸೆದಂತೆ ಕಾಣುವ ವಿಡಿಯೋ ವೈರಲ್ ಆಗಿತ್ತು. ಆದರೆ ಸತ್ಯಾಸತ್ಯತೆ ಪರಿಶೀಲಿಸದೆ ಕಲಾವಿದರನ್ನು ಟೀಕಿಸುತ್ತಿರುವುದರಿಂದ ಕಲಾವಿದರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಟೀಕೆ ಗಣನೆಗೆ ತೆಗೆದುಕೊಳ್ಳಬಾರದು
ಸಾಮಾಜಿಕ ಜಾಲತಾಣಗಳೆಂದರೆ ಅಲ್ಲಿ ಪ್ರಚಾರವು ಇರುತ್ತದೆ, ಅಪಪ್ರಚಾರವೂ ಇರುತ್ತದೆ. ಪ್ರತಿಭಾವಂತರ ಪ್ರತಿಭೆಯನ್ನು ಗುರುತಿಸುತ್ತದೆ, ಅವರನ್ನು ಅವಹೇಳನ ಮಾಡಲು ಬಳಕೆಯಾಗುತ್ತದೆ. ಇಂಥದ್ದನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
ದೊಡ್ಡದು ಮಾಡುವ ಅಗತ್ಯವಿಲ್ಲ
ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಮತ್ತು ರಾಕೇಶ್ ರೈ ಅಡ್ಕ ಅವರು ಈ ಟೀಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಮುಂದುವರಿಸಬೇಕು. ಕಲಾವಿದರು ಹೀಗೆ ಮಾಡಿಲ್ಲ ಎಂದಾದರೆ ಇದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಪಟ್ಲ ಸತೀಶ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಇಂಥದ್ದು ನಡೆಯಲ್ಲ
ಪಟ್ಲ ಸತೀಶ್ ಶೆಟ್ಟಿ ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿ, ಯಕ್ಷಗಾನದಲ್ಲಿ ಇಂಥದ್ದು ನಡೆಯುವುದಿಲ್ಲ ಎಂದು ಕಲಾವಿದನಾಗಿ ನಾನು ಹೇಳ್ತೇನೆ. ಒಂದು ವೇಳೆ ಹಾಗೆ ಮಾಡಿದ್ದಲ್ಲಿ ಅದು ಯಕ್ಷಗಾನ ಕಲೆಗೆ ಮಾರಕ. ಆದರೆ ಈ ಬಗ್ಗೆ ನಾನು ಆ ಕಲಾವಿದರಲ್ಲಿ ಕೇಳಿದಾಗ. ನಾವು ಹಾಗೆ ಮಾಡೇ ಇಲ್ಲ ಎಂದಿದ್ದಾರೆ. ಕೇವಲ ಸೂಚನೆ ಕೊಡಲು ನಾವು ಅದನ್ನು ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಸ್ವತಃ ಕಲಾವಿದನೇ ಹಾಗೆ ಮಾಡಿಲ್ಲ ಎಂದ ಮೇಲೆ ಅದರ ಬಗ್ಗೆ ವಾದಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಕಲಾವಿದರ ಭವಿಷ್ಯ, ಮಾನದ ಪ್ರಶ್ನೆ
ಅಂದು ಪ್ರಸಂಗದಲ್ಲಿದ್ದ ಕಲಾವಿದರೇ ನಾವು ಹಾಗೆ ಮಾಡಿಲ್ಲ. ಒಂದು ವೇಳೆ ಹಾಗೆ ಕಂಡಿದ್ದರೆ ಕ್ಷಮೆ ಕೇಳಲು ತಯಾರಿದ್ದೇವೆ ಎಂದಿದ್ದಾರೆ. ಇದು ಕಲಾವಿದರ ಭವಿಷ್ಯ ಹಾಗೂ ಮಾನದ ಪ್ರಶ್ನೆ. ಎಲ್ಲ ಮಾಧ್ಯಮದವರೊಂದಿಗೆ ವಿನಂತಿಸಿಕೊಳ್ಳುತ್ತಿದ್ದೇನೆ. ಒಂದು ವೇಳೆ ಹಾಗೆ ಆಗಿದ್ದರೆ ನಾನು ಯಕ್ಷಗಾನದ ಕಲಾವಿದನಾಗಿ ಖಂಡಿಸುತ್ತಿದ್ದೆ. ಆದ್ದರಿಂದ ಇದನ್ನು ದೊಡ್ಡ ವಿಷಯ ಮಾಡಬೇಡಿ. ಯಕ್ಷಗಾನ ಕಲೆಯನ್ನು ಕಲಾವಿದರು, ಪ್ರೇಕ್ಷಕರು ಸೇರಿ ಈ ಕಲೆಯನ್ನು ಬೆಳೆಸೋಣ ಎಂದಿದ್ದಾರೆ.