ಮಂಗಳೂರು : ಸರಣಿ ಅಪಘಾತ, ಪಾದಚಾರಿ ಮಹಿಳೆ ಬಲಿ
ಪಡುಬಿದ್ರೆ, ಜೂ.4: ಎರ್ಮಾಳು ಬಡಾ ಗ್ರಾಮದ ಕಲ್ಯಾಣಿ ಬಾರ್ ಮುಂಭಾಗದಲ್ಲಿ ನಡೆದ ಸರಣಿ ಅಪಘಾತದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಗೆ ಡಸ್ಟರ್ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಎರ್ಮಾಳು ವಿದ್ಯಾ ಪ್ರಬೋದಿನಿ ಶಾಲಾ ಹಿಂಬದಿ ನಿವಾಸಿ ಅಶೋಕ್ ಪೂಜಾರಿ ಎಂಬವರ ಪತ್ನಿ ಲೀಲಾವತಿ ಎ. ಪೂಜಾರಿ(35) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಇವರು ಬೀಡಿ ಕೊಂಡೊಯ್ಯಲು ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಈ ಅಪಘಾತ ನಡೆದಿದೆ. ಕಾರು ಬಡಿದ ರಭಸಕ್ಕೆ ಲೀಲಾವತಿಯವರ ದೇಹ ಪಕ್ಕದ ಗೂಡಂಗಡಿಯ ಅಡ್ಡ ಹಲಗೆಗೆ ಸಿಲುಕಿಕೊಂಡಿತ್ತು.

ಮಂಗಳೂರು ಮಾರ್ಗವಾಗಿ ಉಡುಪಿ ಕಡೆಗೆ ತೆರಳುತ್ತಿದ್ದ ಡಸ್ಟರ್ ಕಾರು ರಿಕ್ಷಾವೊಂದಕ್ಕೆ ಢಿಕ್ಕಿ ಹೊಡೆಯಿತು. ಇದೇ ವೇಳೆ ಲೀಲಾವತಿಯರಿಗೂ ಢಿಕ್ಕಿ ಹೊಡೆದಿತ್ತು. ಅಲ್ಲಿಂದ ಮುಂದೆ ಕಲ್ಯಾಣಿ ಬಾರ್ನ ಕಟ್ಟಡಕ್ಕೆ ಢಿಕ್ಕಿ ಹೊಡೆದ ಬಳಿಕ, ತಿಂಗಳ ಹಿಂದೆ ಅಳವಡಿಸಿದ್ದ ಕರ್ಕೇರಾ ಮೂಲ ಸ್ಥಾನದ ಸ್ವಾಗತ ಗೋಪುರಕ್ಕೆ ಢಿಕ್ಕಿ ಹೊಡೆದಿದ್ದು, ಬಳಿಕ ಪಡು ರಸ್ತೆಯಿಂದ ಹೆದ್ದಾರಿಗೆ ಬರುತ್ತಿದ್ದ ಸಿಯಾಲೋ ಕಾರಿಗೆ ಢಿಕ್ಕಿ ಹೊಡೆದು ನಿಂತಿದೆ.
ಈ ಘಟನೆಯಲ್ಲಿ ಡಸ್ಟರ್ ಕಾರು ಹಾಗೂ ಸಿಯಾಲೋ ಕಾರು ಜಖಂಗೊಂಡಿದೆ. ಘಟನೆಯಲ್ಲಿ ಡಸ್ಟರ್ನಲ್ಲಿದ್ದ ಓರ್ವ ಮಹಿಳೆ, ಇಬ್ಬರು ಮಕ್ಕಳು ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತ ಲೀಲಾವತಿಯವರ ಪತಿ ಅಶೋಕ್ ಪೂಜಾರಿ ಕೂಲಿ ಕಾರ್ಮಿಕರಾಗಿದ್ದು, ಇವರಿಗೆ ಎರಡನೆ ತರಗತಿ ಮತ್ತು ಅಂಗನವಾಡಿ ಕಲಿಯುವ ಇಬ್ಬರು ಗಂಡು ಮಕ್ಕಳಿದ್ದಾರೆ. ಘಟನೆ ಸಂದರ್ಭ ಅದೇ ದಾರಿಯಲ್ಲಿ ಬಂದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ವಾಹನ ತೆರವಿಗೆ ಹಾಗೂ ಆಂಬ್ಯುಲೆನ್ಸ್ ತರಿಸಲು ಸಹಕರಿಸಿದರು. ಬಳಿಕ ಮೃತ ಲೀಲಾವತಿ ಪತಿ ಅಶೋಕ್ಗೆ ಸಾಂತ್ವನ ಹೇಳಿ, ಪರಿಹಾರದ ಭರವಸೆ ನೀಡಿದರು. ಪಡುಬಿದ್ರೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications