ರಾತ್ರಿ ಕರ್ಫ್ಯೂ ಇದ್ಯಾ?, ನನಗೆ ಗೊತ್ತೇ ಇಲ್ಲ; ಯು. ಟಿ. ಖಾದರ್
ಮಂಗಳೂರು, ಸೆಪ್ಟೆಂಬರ್ 06; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಿ ಒಂದೂವರೆ ತಿಂಗಳುಗಳೇ ಕಳೆದಿದೆ. ರಾತ್ರಿ 9 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಲ್ಲಲ್ಲಿ ಚೆಕ್ ಪೋಸ್ಟ್ ಗಳನ್ನು ಹಾಕಿ ತಪಾಸಣೆಯನ್ನು ಮಾಡುತ್ತಿದ್ದಾರೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಇರೋದು ಉಳ್ಳಾಲ ಶಾಸಕ, ಮಾಜಿ ಸಚಿವ ಯು. ಟಿ. ಖಾದರ್ಗೆ ಗೊತ್ತೇ ಇಲ್ವಂತೇ!. ಸೋಮವಾರ ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಾರಾಂತ್ಯದ ಕರ್ಫ್ಯೂ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
"ಸರ್ಕಾರ ಬೇಕಿದ್ದರೆ ರಾತ್ರಿ ಕರ್ಫ್ಯೂ ಮಾಡಲಿ" ಅಂತಾ ಹೇಳಿದ್ದಾರೆ. ಈ ವೇಳೆ ಪತ್ರಕರ್ತರು, "ಈಗಾಗಲೇ ನೈಟ್ ಕರ್ಫ್ಯೂ ಇದ್ಯಾಲ್ವಾ ಅಂತಾ ಹೇಳಿದಾಗ, ಗಂಭೀರವಾಗಿಯೇ ಆಶ್ಚರ್ಯ ವ್ಯಕ್ತಪಡಿಸಿದ ಯು. ಟಿ. ಖಾದರ್, ರಾತ್ರಿ ಕರ್ಫ್ಯೂ ಇರೋದು ನನಗೆ ಗೊತ್ತೇ ಇಲ್ಲ. ನಾನೇ 9 ಗಂಟೆಯ ನಂತರ ಹಲವು ಕಡೆ ತಿರುಗಾಡಿದ್ದೇನೆ. ಹಲವು ಮನೆಗಳಿಗೆ ಕಾರ್ಯಕ್ರಮಕ್ಕೆ ಹೋಗಿದ್ದೇನೆ. ನೈಟ್ ಕರ್ಫ್ಯೂ ಇರುವ ಬಗ್ಗೆ ಮಾಹಿತಿಯೇ ಇಲ್ಲ" ಎಂದು ಹೇಳಿದ್ದಾರೆ.

ವಾರಾಂತ್ಯದ ಕರ್ಫ್ಯೂ ಬಗ್ಗೆ ಅಪಸ್ವರ ಎತ್ತಿದ ಸಚಿವ ಖಾದರ್, "ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದರು. ವಾರಾಂತ್ಯದಲ್ಲಿ ಮಾಂಸ, ತರಕಾರಿ, ದಿನಸಿ ಅಂಗಡಿಗಳು ತೆರೆದಿರುತ್ತದೆ. ಆದರೆ ಮೊಬೈಲ್, ಬಟ್ಟೆಯಂಗಡಿ ಇನ್ನಿತರ ಅಂಗಡಿಗಳು ತೆರೆಯೋಕೆ ಅವಕಾಶ ಇಲ್ಲ. ಇದರಿಂದ ಸಣ್ಣ ಮಟ್ಟದ ವ್ಯಾಪಾರಿ ಬದುಕೋದೇ ಸಾಧ್ಯವಿಲ್ಲದಂತಾಗಿದೆ. ಸರ್ಕಾರ ಮಾಡಿರುವ ವಾರಾಂತ್ಯದ ಕರ್ಫ್ಯೂ ಲಾಜಿಕ್ ಏನು ಅಂತಾ ಸ್ಪಷ್ಟಪಡಿಸಬೇಕು?" ಎಂದು ಆಗ್ರಹಿಸಿದರು.
"ಜಿಲ್ಲೆಯಲ್ಲಿ ಬೇರೆ ದಿನ ಎಲ್ಲಾ ಚಟುವಟಿಕೆಗಳಿಗೆ ಅವಕಾಶವಿದೆ. ಆದರೆ ವಾರಾಂತ್ಯದಲ್ಲಿ ಅವಕಾಶ ಇಲ್ಲ. ಇದರಿಂದ ಯಾವುದೇ ವ್ಯತ್ಯಾಸ ಇಲ್ಲ. ವಾರಾಂತ್ಯದಲ್ಲಿ ಕಾರ್ಯಕ್ರಮ ಮಾಡುತ್ತಿದ್ದವರು ಈಗ ವಾರದ ದಿನದಲ್ಲಿ ಮಾಡುತ್ತಿದ್ದಾರೆ ಅಷ್ಟೇ. ಸರ್ಕಾರದ ಈ ಆದೇಶ ಹಾಸ್ಯಾಸ್ಪದವಾಗಿದೆ" ಎಂದು ಯು. ಟಿ. ಖಾದರ್ ಲೇವಡಿ ಮಾಡಿದರು.
"ಮಂಗಳೂರಿನ ಕೆಲ ಶಾಸಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ವಾರಾಂತ್ಯದ ಕರ್ಫ್ಯೂ ತೆಗೆಯುವಂತೆ ಬೆಂಗಳೂರಿನಲ್ಲಿ ಮನವಿ ಕೊಡುತ್ತಾರೆ. ಶಾಸಕರ ನಾಟಕ ನೋಡುವಾಗ ನಗು ಬರುತ್ತದೆ. ಜಿಲ್ಲೆಯಲ್ಲಿ ಆಡಳಿತ ಮಾಡುವವರು ,ಸಚಿವರೂ ಆಡಳಿತ ಪಕ್ಷದವರೇ. ಆದರೂ ಬೆಂಗಳೂರಿನಲ್ಲಿ ಹೋಗಿ ಮುಖ್ಯಮಂತ್ರಿಗೆ ಮನವಿ ಕೊಟ್ಟು ಪೋಟೋಗೆ ಫೋಸ್ ಕೊಡೋದು ಯಾಕೆ?" ಎಂದು ಖಾದರ್ ಪ್ರಶ್ನೆ ಮಾಡಿದ್ದಾರೆ.
"ಕೊರೊನಾದ ಸ್ವಭಾವ ಆದರೂ ಅರ್ಥ ಆಗುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರ ಸ್ವಭಾವ ಅರ್ಥ ಆಗಲ್ಲ. ಬಿಜೆಪಿ ಶಾಸಕರಿಗೆ ಜನರ ಮೇಲೆ ಕಾಳಜಿ ಇದ್ದರೆ ಕೊಟ್ಟ ಅಧಿಕಾರವನ್ನು ಸದುಪಯೋಗ ಮಾಡಿಕೊಳ್ಳಿ. ಮುಖ್ಯಮಂತ್ರಿಗೆ ಮನವಿ ಕೊಡೋದನ್ನು ನಿಲ್ಲಿಸಿ, ಆಡಳಿತ ಸದುಪಯೋಗ ಮಾಡಿಕೊಳ್ಳಿ" ಎಂದು ಸಲಹೆ ನೀಡಿದರು.
ಕಲಬುರಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಉಸ್ತುವಾರಿ ವಹಿಸಿದ್ದ ಯು. ಟಿ. ಖಾದರ್ ಚುನಾವಣಾ ಫಲಿತಾಂಶದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. "ಕಲಬುರಗಿಯಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಮತ ಬಂದಿದೆ. ಆದರೆ ಕಾಂಗ್ರೆಸ್ನ ಮತವನ್ನು ಬಿಜೆಪಿ ಮತ್ತು ಎಂಐಎಂ ವಿಭಜನೆ ಮಾಡಿದೆ. ಬಿಜೆಪಿ ಮತ್ತು ಎಂಐಎಂ ಮತ್ತು ಎಸ್ಡಿಪಿಐ ಒಂದೇ. ಕೋಮು ಆಧಾರದಲ್ಲಿ ಮತವನ್ನು ವಿಭಜನೆ ಮಾಡುತ್ತದೆ. ಈ ದೇಶದಲ್ಲಿ ಜ್ಯಾತ್ಯಾತೀತತೆ ಮತ್ತು ಸಂವಿಧಾನದ ಉಳಿಯಬೇಕಾದರೆ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಉಳಿದರೆ ಸಂವಿಧಾನ ಮತ್ತು ಜ್ಯಾತ್ಯಾತೀತತೆ ಉಳಿಯಲಿದೆ" ಎಂದು ಹೇಳಿದರು.












Click it and Unblock the Notifications