ಮಳೆಯಾಗದಿದ್ದರೆ ಮಂಗಳೂರಿಗೆ ಎದುರಾಗಲಿದೆ ನೀರಿನ ಸಂಕಷ್ಟ
ಮಂಗಳೂರು, ಏಪ್ರಿಲ್ 25:ಕರಾವಳಿಯಲ್ಲಿ ದಿನದಿಂದ ದಿನಕ್ಕೆ ಬೇಸಗೆಯ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಈ ನಡುವೆ ಕುಡಿಯುವ ನೀರಿನ ಬರ ಎದುರಾಗಿದೆ.ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ ನೀರಿನ ರೇಷನಿಂಗ್ ವ್ಯವಸ್ಥೆ ಆರಂಭಿಸಲಾಗಿದೆ.
ಮಂಗಳೂರು ನಗರಕ್ಕೆ ನೀರುಣಿಸುವ ತುಂಬೆ ಕಿಂಡಿ ಆಣೆಕಟ್ಟಿನಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ರೇಷನಿಂಗ್ ಆರಂಭವಾಗಿದೆ.
ಮಂಗಳೂರಿನಲ್ಲಿ ನೀರಿಗೆ ಸಮಸ್ಯೆ, ಟ್ಯಾಂಕರ್ ಗಳಿಗೆ ಹೆಚ್ಚಿದ ಬೇಡಿಕೆ
ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯು ನೀರಿನ ರೇಷನಿಂಗ್ ನಡೆಸಲು ತೀರ್ಮಾನಿಸಿದೆ. ಬಿಸಿಲಿನ ಕಾರಣ ನೀರು ಆವಿಯಾಗುತ್ತಿದೆ. ಡ್ಯಾಂ ನಲ್ಲಿ 5.37 ಅಡಿ ನೀರಿದೆ. ದಕ್ಷಿಣ ಕನ್ನಡದ ಜೀವ ನದಿ ನೇತ್ರಾವತಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡಿದೆ .
ಈ ಹಿನ್ನೆಲೆಯಲ್ಲಿ ತುಂಬೆ ವೆಂಟೆಡ್ ಡ್ಯಾಂ ನಲ್ಲಿ ಸಂಗ್ರಹವಾಗಿರುವ ನೀರನ್ನು ಪ್ರತಿದಿನ ನೀರು ಪೂರೈಕೆ ಮಾಡಿದರೆ, ಮೇ ತಿಂಗಳಲ್ಲಿ ನೀರಿನ ಅಭಾವ ಕಾಡಲಿದೆ ಎಂದು ಹೇಳಲಾಗಿದ್ದು, ಈ ಪರಿಣಾಮ ನೀರಿನ ರೇಷನಿಂಗ್ ನಡೆಸಲು ಪಾಲಿಕೆ ಆರಂಭಿಸಿದೆ.
36 ಗಂಟೆ ನೀರು ಸ್ಥಗಿತಗೊಳಿಸಲು ನಿರ್ಧಾರ
ಮೊದಲ ಹಂತದಲ್ಲಿ ರೇಷನಿಂಗ್ ಪ್ರಕಾರ 36 ಗಂಟೆಯಷ್ಟೇ ನೀರು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಮುಂದೆ 48 ಗಂಟೆಗೆ ವಿಸ್ತರಿಸಲಾಗುತ್ತದೆ ಎಂದು ಪಾಲಿಕೆಯ ಎಂಜಿನಿಯರ್ ಲಿಂಗೇಗೌಡ ತಿಳಿಸಿದ್ದಾರೆ. ವಾರದಲ್ಲಿ 96 ಗಂಟೆ ನೀರು ಪೂರೈಕೆ ಮಾಡಿ 48 ಗಂಟೆ ಸ್ಥಗಿತ ಪ್ರಕ್ರಿಯೆ ಮೇ 14ರ ವರೆಗೆ ಮುಂದುವರಿಯಲಿದೆ. ಮಳೆ ಬಂದು ನೀರಿನ ಪ್ರಮಾಣ ಹೆಚ್ಚಾದರೆ ಹೆಚ್ಚಾದಲ್ಲಿ ನೀರು ಪೂರೈಕೆ ನಿರಂತರವಾಗಿ ಇರಲಿದೆ. ಇಲ್ಲವಾದಲ್ಲಿ ಈಗಿನ ರೇಷನಿಂಗ್ ಪ್ರಕ್ರಿಯೆ ಮುಂದುವರೆಯಲಿದೆ.
ಜೂನ್ ಆರಂಭದಲ್ಲಿ ಮಳೆಯಾಗಬೇಕಿದೆ
ಮಂಗಳೂರು ನಗರದ ಕುಡಿಯುವ ನೀರಿನ ಏಕೈಕ ಮೂಲ ಎಂದರೆ ಜೀವ ನದಿ ನೇತ್ರಾವತಿ. ನೇತ್ರಾವತಿ ಬತ್ತಿದರೆ ನಗರದ ಬಾಯಾರುತ್ತದೆ. ಈ ವರ್ಷವೂ ನೀರಿನ ಸಮಸ್ಯೆ ಎದುರಾಗಿದೆ. ಪ್ರಸ್ತುತ ತುಂಬೆ ವೆಂಟೆಡ್ಡ್ಯಾಂನಲ್ಲಿ ನೀರಿನ ಮಟ್ಟ ಸುಮಾರು 5 ಮೀಟರ್ಗಳಷ್ಟಿದೆ.ಜಿಲ್ಲಾಡಳಿತದ ಪ್ರಕಾರ, ಪ್ರಸ್ತುತ ಇರುವ ನೀರು ಸಂಗ್ರಹದಲ್ಲಿ ರೇಷನ್ ಮೂಲಕ ಗರಿಷ್ಠ ಅಂದರೆ ಜೂನ್ 4ರ ವರೆಗೆ ತುಂಬೆ ವೆಂಟೆಡ್ ಡ್ಯಾಂನಿಂದ ಮಂಗಳೂರಿಗೆ ಕುಡಿಯುವ ನೀರಿನ ಸರಬರಾಜು ಮಾಡಬಹುದಾಗಿದೆ. ಜೂನ್ ಆರಂಭದೊಳಗೆ ಮಳೆ ಬರದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಭೀತಿ ಎದುರಾಗಿದೆ.
ಬರಿದಾದ ತುಂಬೆ ಡ್ಯಾಮ್ ಒಡಲು:ಕ್ರಮ ಕೈಗೊಳ್ಳಲು ಡಿಸಿಗೆ ಆಗ್ರಹ
ಒಳ ಹರಿವಿನಲ್ಲಿ ಇಳಿಮುಖ
ಸಾಮಾನ್ಯವಾಗಿ ಮಾರ್ಚ್ 10ರ ವೇಳೆಗೆ ನೇತ್ರಾವತಿ ನದಿಯಲ್ಲಿ ಒಳಹರಿವು ಸ್ಥಗಿತಗೊಳ್ಳುತ್ತದೆ. ಇದರೊಂದಿಗೆ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟದ ಏರಿಕೆ ನಿಲ್ಲುತ್ತದೆ. ತುಂಬೆಯಲ್ಲಿ ಗರಿಷ್ಠ 7 ಮೀಟರ್ ನೀರು ಸಂಗ್ರಹ ಮಾಡಲು ಸಾಧ್ಯವಿದ್ದರೂ ಪ್ರಸ್ತುತ 6 ಮೀಟರ್ ನೀರು ಸಂಗ್ರಹ ಮಾಡಲಾಗುತ್ತದೆ. ಕಳೆದ ಸಾಲಿನಲ್ಲಿ ಪಾಲಿಕೆಗೆ ಕುಡಿಯುವ ನೀರು ಪೂರೈಕೆಯಲ್ಲಿ ಹೆಚ್ಚಿನ ಸಮಸ್ಯೆ ತಲೆದೋರಲಿಲ್ಲ. ಆದರೆ ಈ ಬಾರಿ ನೇತ್ರಾವತಿ ನದಿಯಲ್ಲಿ ನವೆಂಬರ್ ತಿಂಗಳಿನಿಂದಲೇ ಒಳ ಹರಿವಿನಲ್ಲಿ ತೀವ್ರಗತಿಯಲ್ಲಿ ಇಳಿಮುಖ ಗೋಚರವಾಗಿದೆ.
ಇದೇ ಪರಿಸ್ಥಿತಿ ಮತ್ತೆ ಬರುತ್ತಾ?
ಈ ಹಿಂದೆ 2016 ರಲ್ಲಿ ಎದುರಾಗಿದ್ದ ನೀರಿನ ಸಮಸ್ಯೆಗೆ ನಗರದಲ್ಲಿ ಹೆಚ್ಚಿನ ಹೊಟೇಲ್ಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿತ್ತು. ಹಾಸ್ಟೆಲ್ ವಿದ್ಯಾರ್ಥಿಗಳು ಊರುಗಳಿಗೆ ತೆರಳಿದ್ದರು. ಕೈಗಾರಿಕೆಗಳನ್ನೂ ಮುಚ್ಚಲಾಗಿತ್ತು. ಖಾಸಗಿ ಬೋರ್ವೆಲ್ನಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತು . ಇದೇ ಪರಿಸ್ಥಿತಿ ನಗರದಲ್ಲಿ ಎದುರಾಗುವ ಆತಂಕ ವ್ಯಕ್ತವಾಗಿದೆ.