ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹಲ್ಲೆ:ಮಂಜೇಶ್ವರದಲ್ಲಿ 144 ಸೆಕ್ಷನ್ ಜಾರಿ
ಮಂಗಳೂರು, ಜನವರಿ 04: ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಿದ್ದನ್ನು ಖಂಡಿಸಿ ಕೇರಳದಲ್ಲಿ ನಡೆಯುತ್ತಿರುವ ಘರ್ಷಣೆ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಶಬರಿಮಲೆ ಕರ್ಮ ಸಮಿತಿ ಮತ್ತು ಬಿಜೆಪಿ ಕರೆನೀಡಿದ್ದ ಹರತಾಳ ಸಂದರ್ಭದಲ್ಲಿ ಕೇರಳದ ಎಲ್ಲೆಡೆ ಘರ್ಷಣೆಗಳು ಸೇರಿದಂತೆ ಹಿಂಸಾಕೃತ್ಯಗಳು ನಡೆದಿದೆ.
ಡಿಜಿಲ್ಲೆ ಕಾಸರಗೋಡಿನಲ್ಲಿ ಹಿಂಸಾಕೃತ್ಯಗಳು ಮುಂದುವರೆದ ಹಿನ್ನೆಲೆಯಲ್ಲಿ ಮಂಗಜೇಶ್ವರ ತಾಲೂಕಿನಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ತಾಲೂಕು ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಜಿಲ್ಲಾಡಳಿತ ಇಂದು ರಜೆ ಸಾರಿದೆ.
ಗಡಿಭಾಗ ಮಂಜೇಶ್ವರ ಬಳಿಯ ಕುಂಜತ್ತೂರು ಎಂಬಲ್ಲಿ ನಿನ್ನೆ ಗುರುವಾರ ತಡರಾತ್ರಿ ಐವರು ಅಯ್ಯಪ್ಪ ಮಾಲಾಧಾರಿಗಳ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಈ ಅಯ್ಯಪ್ಪ ವ್ರತಧಾರಿಗಳು ಕರ್ನಾಟಕದಿಂದ ತೆರಳಿದವರು ಎಂದು ಹೇಳಲಾಗಿದೆ. ಘಟನೆಯಲ್ಲಿ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂತೋಷ್, ಶರತ್, ರಾಜೇಶ್, ನಿತೇಶ್, ಗುಣಪಾಲ್ ಎಂಬವರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.ಅದಲ್ಲದೇ ಮಂಜೇಶ್ವರದ ಕಡಂಬಾರು ದೇವಸ್ಥಾನದ ಬಳಿಯಿದ್ದ ಇಬ್ಬರು ಯುವಕರ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿದ್ದಾರೆ.
ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ. ಪರಿಸರದಲ್ಲಿ ಹಿಂಸೆ ಕೋಮುದ್ವೇಷಕ್ಕೆ ತಿರುಗದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆಗೊಳಿಸಲಾಗಿದ್ದು ಆಯಕಟ್ಟಿನ ಜಾಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ.












Click it and Unblock the Notifications