ವಿಡಿಯೋ; ಮತಾಂತರ ಐವಾನ್ ಮನೆಯಿಂದಲೇ ಆರಂಭವಾಗಿದೆ
ಮಂಗಳೂರು, ಅಕ್ಟೋಬರ್ 21; "ಐವಾನ್ ಡಿಸೋಜಾ ಯಾರನ್ನು ಮದುವೆಯಾಗಿದ್ದಾರೆ, ಯಾರ ಜೊತೆ ಸಂಸಾರ ಮಾಡುತ್ತಿದ್ದಾರೆ ಎಂಬುವುದನ್ನು ಮೊದಲು ನೋಡಲಿ. ಅವರು ಕೇಸರಿ ಧರ್ಮದ ಹೆಣ್ಣನ್ನು ಮದುವೆಯಾಗಿದ್ದಾರೆ. ಮತಾಂತರ ಅಲ್ಲಿಂದಲೇ ಆರಂಭವಾಗಿದೆ" ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ.
ಮಂಗಳೂರಿನ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಜ್ರದೇಹಿ ಶ್ರೀಗಳು, "ಸಮಾಜಘಾತುಕ ಕೃತ್ಯಗಳನ್ನು ಮಾಡುವವರು ಮಾತ್ರ ಕೇಸರಿ ಬಟ್ಟೆಯನ್ನು ಧರಿಸುತ್ತಾರೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ವಿರುದ್ಧ ವಾಗ್ದಾಳಿ ನಡೆಸಿದರು.
"ಐವಾನ್ ಡಿಸೋಜಾ ಹೆಸರಿನಲ್ಲಿ 'ಐ' ಹೋಗಿ 'ವಾನ್' ಮಾತ್ರ ಉಳಿದಿದೆ. ಇನ್ನೂ ಈ ರೀತಿಯ ಹೇಳಿಕೆ ನೀಡಿದರೆ ಅವರನ್ನು ಯಾರೂ ಮೂಸಿಯೂ ನೋಡೋದಿಲ್ಲ. ಐವಾನ್ ಪ್ರತಿನಿಧಿಸುವ ಪಕ್ಷ ಮುಳುಗಿಹೋಗುತ್ತಿದೆ. ಇದರ ಜೊತೆ ಇವರೂ ಮುಳುಗಿ ಹೋಗುತ್ತಾರೆ" ಎಂದು ಲೇವಡಿ ಮಾಡಿದರು.

"ಐವಾನ್ ಯಾರನ್ನು ಮದುವೆಯಾಗಿದ್ದಾರೆ. ಯಾರ ಜೊತೆ ಸಂಸಾರ ಮಾಡುತ್ತಿದ್ದಾರೆ ಎಂಬುವುದನ್ನು ಮೊದಲು ನೋಡಲಿ. ಅವರು ಕೇಸರಿ ಧರ್ಮದ ಹೆಣ್ಣನ್ನು ಮದುವೆಯಾಗಿದ್ದಾರೆ. ಮತಾಂತರ ಅಲ್ಲಿಂದಲೇ ಆರಂಭವಾಗಿದೆ. ಹೀಗಾಗಿ ಐವಾನ್ ಮುಂದೆ ಮಾತನಾಡುವಾಗ ಯೋಚಿಸಿ ಮಾತನಾಡೋದು ಒಳಿತು" ಎಂದರು.
ಇನ್ನು ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಕೂಡಾ ಐವಾನ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಖಾವಿ ಸಂಯೋಚಿತವಾಗಿ ಕೆಲಸ ಮಾಡುತ್ತದೆ. ಕೇಸರಿ ಕೇವಲ ತ್ಯಾಗದ ಸಂಕೇತ ಮಾತ್ರವಲ್ಲ. ಶಾಂತಿ, ಸೌಜನ್ಯ, ದಯೆ, ಧರ್ಮದ ಸಂಕೇತ. ಪ್ರತಿ ಬಣ್ಣವೂ ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಕೇಸರಿ ಬಗ್ಗೆ ಐವಾನ್ ಡಿಸೋಜಾ ಈ ರೀತಿ ಹೇಳಿಕೆಯನ್ನು ನೀಡಿರೋದು ತಪ್ಪು" ಎಂದು ಮಾಣಿಲ ಶ್ರೀ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಕಾರ್ಯಾಧ್ಯಕ್ಷರಾದ ಎಂ. ಬಿ. ಪುರಾಣಿಕ್ ಮಾತನಾಡಿ, "ಕೇಸರಿ ಬಣ್ಣದ ಬಗ್ಗೆ ಐವಾನ್ ಡಿಸೋಜಾ ಹೇಳಿಕೆ ಅಕ್ಷಮ್ಯ ತಪ್ಪು. ಕೇಸರಿಯ ವಿಚಾರಕ್ಕೆ ಬರುವ ಮುನ್ನ ಅದರ ಹಿನ್ನಲೆಯಲ್ಲಿ ಗಮನಿಸೋದು ಒಳ್ಳೆಯದು. ಕೇಸರಿಗೆ ಅದರದ್ದೇ ಆದ ಹಿನ್ನಲೆಯಿದೆ. ಅದೇ ಹಿನ್ನಲೆಯಲ್ಲಿ ತಿಳಿದುಕೊಂಡು ಮಾತನಾಡೋದು ಒಳಿತು ಎಂದು" ಎಚ್ಚರಿಕೆ ನೀಡಿದ್ದಾರೆ.
ಐವಾನ್ ಡಿಸೋಜಾ ಹೇಳಿಕೆಗೆ ಪ್ರತಿಭಟನೆ ನಡೆಸಿದ್ದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು, ವೆಲೆನ್ಸಿಯಾದಲ್ಲಿರುವ ಐವಾನ್ ಡಿಸೋಜಾ ಮನೆಗೆ ನುಗ್ಗಲು ಯತ್ನಿಸಿದ್ದರು. ಪೊಲೀಸರು ಮಧ್ಯಪ್ರವೇಶ ಮಾಡಿ ಸಂಭಾವ್ಯ ಘಟನೆಯನ್ನು ತಪ್ಪಿಸಿದ್ದರು.
ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಕೇಸರಿ ವಸ್ತ್ರ ಬಗ್ಗೆ ಐವಾನ್ ಡಿಸೋಜಾ ಹೇಳಿಕೆಯೊಂದನ್ನು ನೀಡಿದ್ದರು. "ಬಿಜೆಪಿ ಮತ್ತು ಭಜರಂಗದಳದ ಕಾರ್ಯಕರ್ತರು ಕೇಸರಿಯನ್ನು ಹಾಕಿ ಅನೈತಿಕ ಪೊಲೀಸ್ ಗಿರಿ, ಹಲ್ಲೆ, ಸೇರಿದಂತೆ ಸಮಾಜಘಾತುಕ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ಸಮಾಜದಲ್ಲಿ ಸಮಾಜಘಾತುಕ ಕೆಲಸಗಳನ್ನು ಮಾಡುವವರು ಧರಿಸುವ ವಸ್ತ್ರದ ಬಣ್ಣ ಕೇಸರಿ ಎಂಬಂತಾಗಿದೆ" ಎಂಬ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ವಿಶ್ವ ಹಿಂದೂ ಪರಿಷತ್, ಭಜರಂಗದಳಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಸಾಮಾಜಿಕ ಜಾಲತಾಣದಲ್ಲೂ ಭಾರೀ ಟೀಕೆ ವ್ಯಕ್ತವಾಗಿತ್ತು.












Click it and Unblock the Notifications