ಮಳಲಿ ಮಸೀದಿ ವಿವಾದ: ವಿಎಚ್ಪಿ ಪರ ವಕೀಲ ಹೇಳಿದ್ದೇನು?
ಮಂಗಳೂರು, ನವೆಂಬರ್ 9: ಮಳಲಿ ಮಸೀದಿ ವಿವಾದ ಪ್ರಕರಣದಲ್ಲಿ ಮಂಗಳೂರಿನ 3ನೇ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ವಕ್ಫ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕೆಂಬ ಮಸೀದಿ ಆಡಳಿತ ಕಮಿಟಿಯ ಅರ್ಜಿಯನ್ನು ವಜಾ ಮಾಡಿ ವಿಶ್ವ ಹಿಂದೂ ಪರಿಷತ್(ವಿಎಚ್ಪಿ) ಪರ ಅಹವಾಲನ್ನು ಎತ್ತಿ ಹಿಡಿದಿದೆ. ಸಾಕಷ್ಟು ಅರ್ಜಿ ವಿಚಾರಣೆ ಬಾಕಿಯಿದ್ದು, ನ್ಯಾಯಾಲಯ ವಿಚಾರಣೆಯನ್ನು 2023ರ ಜನವರಿ 8ಕ್ಕೆ ಮುಂದೂಡಲಾಗಿದೆ ಎಂದು ಎಂದು ವಿಎಚ್ಪಿ ಪರ ನ್ಯಾಯವಾದಿ ಚಿದಾನಂದ ಕೆದಿಲಾಯ ಹೇಳಿದ್ದಾರೆ.
ಮಳಲಿ ಮಸೀದಿಯಲ್ಲಿ ಗೋಚರವಾಗಿರುವ ದೇವಾಲಯ ಶೈಲಿಯ ಕಟ್ಟಡವನ್ನು ರಕ್ಷಿಸಬೇಕು. ಮಸೀದಿಯವರು ಅದನ್ನು ಕೆಡವಬಾರದೆಂದು ನ್ಯಾಯಾಲಯಕ್ಕೆ ವಿಶ್ವ ಹಿಂದೂ ಪರಿಷತ್ ಅರ್ಜಿ ಹಾಕಲಾಗಿತ್ತು. ಜಿಲ್ಲಾ ನ್ಯಾಯಾಲಯ ಈಗಾಗಲೇ ಸೂಕ್ತ ಆದೇಶ ನೀಡಿದೆ. ಆ ಆದೇಶದ ಬಳಿಕ ಮಸೀದಿ ಆಡಳಿತ ಸಮಿತಿಯು ಮಸೀದಿ ವಿಚಾರದಲ್ಲಿ ವಕ್ಫ್ ಟ್ರಿಬ್ಯುನಲ್ಗೆ ಅಧಿಕಾರವಿದ್ದು, ಸಿವಿಲ್ ನ್ಯಾಯಾಲಯಕ್ಕೆ ಯಾವುದೇ ರೀತಿಯ ಅಧಿಕಾರವಿಲ್ಲ. ಅದೇ ರೀತಿ Places Of Worship Act 1991 ಪ್ರಕಾರ ಸಿವಿಲ್ ನ್ಯಾಯಾಲಯಕ್ಕೆ ಆದೇಶ ನೀಡುವ ಅಧಿಕಾರವಿಲ್ಲ. ಆದ್ದರಿಂದ ಈ ಅರ್ಜಿಯನ್ನು ವಜಾ ಮಾಡಬೇಕೆಂದು ಅರ್ಜಿ ಸಲ್ಲಿಸಿತ್ತು.
ಮಂಗಳೂರಿನ ಮಳಲಿ ಮಸೀದಿ ವಿವಾದ; ಎಲ್ಲರ ಚಿತ್ತ ಜನವರಿ 8ರ ಕಡೆಗೆ
ಸುದೀರ್ಘವಾದ ವಾದ - ವಿವಾದವನ್ನು ಆಲಿಸಿ ಮಸೀದಿಯ ಅರ್ಜಿಯನ್ನು ವಜಾ ಮಾಡಿ ವಿಎಚ್ಪಿ ಅಹವಾಲನ್ನು ಎತ್ತಿ ಹಿಡಿದಿದೆ. ಈ ಮೂಲಕ ಪ್ರಕರಣದ ವಿಚಾರಣೆ ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಇದೆ ಎಂಬುದನ್ನು ಸ್ಪಷ್ಟವಾಗಿ ಕೊರ್ಟ್ ತಿಳಿಸಿದೆ. ಹಲವಾರು ಅರ್ಜಿಗಳು ವಿಚಾರಣೆಗೆ ಇನ್ನೂ ಬಾಕಿ ಇದೆ. ಅದು 2023ರ ಜನವರಿ 8ರಂದು ವಿಚಾರಣೆ ಆಗಲಿದೆ ಎಂದು ಕೆದಿಲಾಯ ಹೇಳಿದ್ದಾರೆ.
ಕೋರ್ಟ್ ನೀಡಿರುವ ಆದೇಶದ ಪ್ರಕಾರ ವಿಶ್ವ ಹಿಂದೂ ಪರಿಷತ್ ಸಲ್ಲಿಸಿರುವ ಹಲವು ಅರ್ಜಿಗಳು ಮುಂದಿನ ದಿನಗಳಲ್ಲಿ ವಿಚಾರಣೆಗೆ ಬರಲಿವೆ. ವಿವಾದಿತ ಜಾಗದ ಸರ್ವೇ ಮಾಡಬೇಕು. ಅದನ್ನು ಪುರಾತತ್ವ ಇಲಾಖೆಯ ವಶಕ್ಕೆ ಒಪ್ಪಿಸಿ, ಸಂರಕ್ಷಣೆ ಮಾಡಬೇಕು ಎಂಬ ಅರ್ಜಿಯೂ ಸಲ್ಲಿಕೆಯಾಗಿದೆ. ನ್ಯಾಯಾಲಯವು ವಿಚಾರಣೆ ವೇಳೆ ಕೇಳುವ ಎಲ್ಲಾ ದಾಖಲೆಗಳನ್ನೂ ಒದಗಿಸುತ್ತೇವೆ. ಕಮಿಷನರ್ ಸಮೀಕ್ಷೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಅಲ್ಲಿ ಶಿವಲಿಂಗ ಪತ್ತೆಯಾಗಿ, ಸತ್ಯ ಹೊರಗೆ ಬಂತು. ಇಲ್ಲಿಯೂ ಸಹ ಕೋರ್ಟ್ ಕಮಿಷನರ್ ಮೂಲಕ ಸರ್ವೆ ನಡೆಸಿದರೆ ಮಳಲಿಯ ಸತ್ಯ ಹೊರಬರುತ್ತದೆ ವಿಎಚ್ಪಿ ಪರ ವಕೀಲ ಚಿದಾನಂದ ತಿಳಿಸಿದ್ದಾರೆ.
Breaking: ಮಳಲಿ ಮಸೀದಿ ವಿವಾದ- ವಿಎಚ್ಪಿ ಅರ್ಜಿ ವಿಚಾರಣೆಗೆ ಅಂಗೀಕಾರ
ಕೋರ್ಟ್ ಆದೇಶ ಪ್ರತಿಯಲ್ಲಿನ ಅಂಶಗಳು
1) ವಕ್ಫ್ ಕಾಯ್ದೆ 1991ರ ಸೆಕ್ಷನ್ 85ರ ಅಡಿ ಸಿವಿಲ್ ಕೋರ್ಟ್ಗೆ ಅರ್ಜಿ ವಿಚಾರಣೆ ಅಧಿಕಾರ ಇಲ್ಲ ಎಂದು ಮಳಲಿ ಮಸೀದಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಸಿವಿಲ್ ಕಾಯ್ದೆ 151 ಅಡಿಯಲ್ಲಿ ಮಂಗಳೂರು ಕೋರ್ಟ್ಗೆ ವಿಎಚ್ಪಿ ಅರ್ಜಿ ವಿಚಾರಣೆ ನಡೆಸುವ ಅಧಿಕಾರ ಇಲ್ಲ ಎಂದು ಮಸೀದಿ ಆಡಳಿತ ಮಂಡಳಿ ವಾದಿಸಿತ್ತು. ಆದರೆ ಸುದೀರ್ಘ ವಿಚಾರಣೆ ನಡೆಸಿ ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಈ ಅರ್ಜಿಗಳನ್ನು ವಜಾಗೊಳಿಸಿದೆ. ಈ ಮೂಲಕ ವಕ್ಫ್ ಕಾಯ್ದೆಯ ಅಡಿಗೆ ಈ ವಿಚಾರ ಬರಲ್ಲ. ಸರ್ಕಾರಿ ಜಾಗದಲ್ಲಿ ಮಸೀದಿ ಇರೋ ಕಾರಣದಿಂದ ಸಿವಿಲ್ ಕೋರ್ಟ್ಗೆ ವಿಚಾರಣೆಯ ಅಧಿಕಾರ ವ್ಯಾಪ್ತಿ ಇದೆ ಎಂದು ಹೇಳಿದೆ. ಅಲ್ಲದೇ ಸಿವಿಲ್ ಕೋರ್ಟ್ಗೆ ವಿಚಾರಣೆ ನಡೆಸುವ ಅಧಿಕಾರ ಇದೆ ಎಂದು ಹೇಳಿ ಮಸೀದಿ ಆಡಳಿತದ ಅರ್ಜಿ ವಜಾ ಮಾಡಿದೆ.
2) ಪೂಜಾ ಸ್ಥಳ ಕಾಯಿದೆ 1991ರ ಅಡಿಯಲ್ಲೂ ಸಿವಿಲ್ ಕೋರ್ಟ್ಗೆ ಮಳಲಿ ಮಸೀದಿ ವಿಚಾರ ವಿಚಾರಣೆ ಮಾಡಲು ಆಗಲ್ಲ ಅಂತ ಮಸೀದಿ ಪರ ವಕೀಲರು ವಾದ ಮಂಡಿಸಿದ್ದರು. 1991 ಪೂಜಾಸ್ಥಳ ಕಾಯ್ದೆಯ ಪ್ರಕಾರ 1947ರ ಆಗಸ್ಟ್ 15ರ ಬಳಿಕ ದೇಶದಲ್ಲಿ ಇರುವ ಪೂಜಾ ಸ್ಥಳಗಳಲ್ಲಿ ಯಥಾ ಸ್ಥಿತಿಯನ್ನು ಕಾಪಾಡಿಕೊಂಡು ಬರಬೇಕು ಎಂದು ಆಯೋಧ್ಯೆ ಪ್ರಕರಣದ ಅನಂತರದ ಪರಿಸ್ಥಿತಿಯಲ್ಲಿ ಪಿ.ವಿ.ನರಸಿಂಹ ರಾವ್ ನೇತೃತ್ವದ ಸರಕಾರ ಈ ಕಾಯ್ದೆ ಜಾರಿಗೊಳಿಸಿತ್ತು.
3) ಕಾಯ್ದೆಯ ಸೆಕ್ಷನ್ ಮೂರರ ಅನ್ವಯ ಧಾರ್ಮಿಕ ಸ್ಥಳದ ಸ್ಥಿತಿಯನ್ನು ಬದಲಾಯಿಸುವುದನ್ನು ನಿಷೇಧಿಸಲಾಗಿದೆ. ಸೆಕ್ಷನ್ 4(2)ರಲ್ಲಿ ಉಲ್ಲೇಖವಾಗಿರುವಂತೆ ಯಾವುದೇ ಧಾರ್ಮಿಕ ಕ್ಷೇತ್ರದ ವಿರುದ್ಧ ಕೋರ್ಟ್ಗಳಲ್ಲಿ 1947ರ ಆಗಸ್ಟ್ 15ರ ಒಳಗೆ ಸಲ್ಲಿಕೆ ಮಾಡಲಾಗಿರುವ ಅರ್ಜಿಗಳ ವಿಚಾರಣೆ ಮಾತ್ರ ನಡೆಯಬೇಕು. ಈ ದಿನಾಂಕದ ಅನಂತರ ಸಲ್ಲಿಕೆಯಾಗುವ ಹೊಸ ಅರ್ಜಿಗಳ ವಿಚಾರಣೆಯನ್ನು ಪರಿಗಣಿಸಬಾರದು ಎಂದು ಕಾಯ್ದೆ ಹೇಳುತ್ತದೆ. ಅದರಂತೆ ಮಸೀದಿ ಆಡಳಿತ ಅರ್ಜಿ ಸಲ್ಲಿಸಿತ್ತು.
4) ಆದರೆ ಅದೇ ಕಾಯ್ದೆಯಲ್ಲಿ ರಾಷ್ಟ್ರೀಯ ಸ್ಮಾರಕ ಅಥವಾ ಐತಿಹಾಸಿಕ ಎಂದು ಪರಿಗಣಿತವಾಗಿರುವ, ಐತಿಹಾಸಿಕ ಸ್ಥಳಗಳು ಮತ್ತು ಪಳೆಯುಳಿಕೆಗಳ ಕಾಯ್ದೆ 1958ರ ಅನ್ವಯ ನಿಗದಿತ ಸ್ಥಳ ಘೋಷಣೆಯಾಗಿದ್ದರೆ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಸೆಕ್ಷನ್ 4ರಲ್ಲಿಯೇ ಉಲ್ಲೇಖಗೊಂಡಿದೆ. ಇದೇ ಅಂಶವನ್ನು ಮಳಲಿ ಮಸೀದಿ ಕೇಸ್ನಲ್ಲಿ ವಿಎಚ್ಪಿ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಹೀಗಾಗಿ ಈ ಆಧಾರದ ಮೇಲೆ ಮಸೀದಿಯ ಮತ್ತೊಂದು ಅರ್ಜಿಯೂ ವಜಾಗೊಂಡಿದೆ.
5) ಹೀಗಾಗಿ ಡಿಸೆಂಬರ್ 8ರಿಂದ ಅರ್ಜಿ ವಿಚಾರಣೆ ನಡೆಯಲಿದ್ದು, ಈ ವೇಳೆ ವಿಎಚ್ಪಿ (VHP) ಸಲ್ಲಿಸಿದ ಕೋರ್ಟ್ ಕಮಿಷನರ್ ನೇಮಕ, ಪ್ರಾಚೀನ ಸ್ಮಾರಕ ಕುರಿತ ಅರ್ಜಿಗಳು ವಿಚಾರಣೆ ನಡೆಯಲಿದೆ. ಒಟ್ಟಾರೆ ಈ ತೀರ್ಪು ಅಂತಿಮವಲ್ಲ. ಮುಂದೆ ಇದೇ ಸಿವಿಲ್ ಕೋರ್ಟ್ ಇದರ ಸುದೀರ್ಘ ವಿಚಾರಣೆ ನಡೆಸಲಿದೆ.