ವಿ.ಜಿ.ಸಿದ್ಧಾರ್ಥಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆ ಸ್ಥಗಿತ
ಮಂಗಳೂರು, ಜುಲೈ 30 : ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಅವರ ಶೋಧ ಕಾರ್ಯಚರಣೆ ಸ್ಥಗಿತ ಗೊಳಿಸಲಾಗಿದೆ. ಸಮುದ್ರ ಮತ್ತು ನೇತ್ರಾವತಿ ನದಿ ಸೇರುವ ಅಳಿವೆ ಬಾಗಿಲಿನಲ್ಲಿ ರಾತ್ರಿಹೊತ್ತು ಶೋಧಕಾರ್ಯ ಅಪಾಯಕಾರಿಯಾಗಿರುವ ಹಿನ್ನೆಲ್ಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡಿದೆ.
"ನೇತ್ರಾವತಿ ಸೇತುವೆಯ ಕೆಳಭಾಗದ ಪ್ರದೇಶ ತೀರಾ ಅಪಾಯಕಾರಿ ಸ್ಥಳವಾಗಿದ್ದು, ರಾತ್ರಿ ವೇಳೆ ಕಾರ್ಯಾಚರಣೆ ಸ್ಥಗಿತಗೊಳಿಸಲು ಮುಳುಗಯ ತಜ್ಞರು , ಎನ್ ಡಿ ಆರ್ ಅಫ್ ತಂಡದ ಅಧಿಕಾರಿಗಳು ನಿರ್ಧರಿಸಿದ್ದಾರೆ" ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ಸೋಮವಾರ ತಡ ರಾತ್ರಿಯಿಂದ ಆರಂಭಗೊಂಡಿದ್ದ ಶೋಧ ಕಾರ್ಯ ಈಗ ಸ್ಥಗಿತಗೊಂಡಿದೆ. ಬುಧವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುತ್ತದೆ. ಕತ್ತಲಾಗುತ್ತಿದ್ದಂತೆ ಜನರೇಟರ್ ಸಹಾಯದಿಂದ ಲೈಟ್ ಬಳಸಿ ಕಾರ್ಯಾಚರಣೆ ನಡೆಸಲಾಗಿತ್ತು.

ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು, ಕೆಳಮುಖವಾಗಿ ನೀರು ಬಿರುಸಿನಿಂದ ಹರಿಯುತ್ತಿದೆ. ಇನ್ನೊಂದೆಡೆ ಅಳಿವೆ ಬಾಗಿಲು ತೀರಾ ಅಪಾಯಕಾರಿ ಜಾಗವಾದ ಕಾರಣ ಎಲ್ಲ ಶೋಧ ಕಾರ್ಯಾಚರಣೆ ನಿಲ್ಲಿಸಲು ನಿರ್ಧರಿಸಲಾಗಿದೆ.
ಈ ನಡುವೆ ರಾತ್ರಿ ವೇಳೆ ಸ್ಥಳದಲ್ಲಿ ಪೂರ್ತಿ ನಿಗಾ ಇಡಲು ತೀರ್ಮಾನಿಸಲಾಗಿದೆ. ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಪೊಲೀಸರನನ್ನು ನಿಯೋಜನೆ ಗೊಳಿಸಲಾಗಿದೆ. ವಿಶೇಷ ಸರ್ಚ್ ಲೈಟ್ ಅಳವಡಿಸಿ ನಿಗಾ ಇಡಲು ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಸೂಚನೆ ನೀಡಿದ್ದಾರೆ.












Click it and Unblock the Notifications