ಅಕ್ಟೋಬರ್ 3 ರಿಂದ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಆರಂಭ
Recommended Video

ಮಂಗಳೂರು, ಅಕ್ಟೋಬರ್. 01: ಬೆಂಗಳೂರು - ಮಂಗಳೂರು ನಡುವೆ ಸಂಚರಿಸುವ ಎಲ್ಲಾ ಪ್ರಯಾಣಿಕರ ವಾಹನಗಳಿಗೆ ಶಿರಾಡಿ ಘಾಟ್ ಅಕ್ಟೋಬರ್ 3 ರಂದು ಬುಧವಾರ ತೆರೆದುಕೊಳ್ಳಲಿದೆ ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಸ್ ಗಳು ಸೇರಿದಂತೆ ಎಲ್ಲಾ ರೀತಿಯ ಪ್ರಯಾಣಿಕರ ವಾಹನಗಳಿಗೆ ಮಾತ್ರ ಅಕ್ಟೋಬರ್ 3 ರಂದು ಅನುಮತಿ ಮಾಡಿಕೊಡಲಾಗುವುದು.
ಆದರೆ ಯಾವುದೇ ರೀತಿಯ ಗೂಡ್ಸ್ ವಾಹನ ಪ್ರಯಾಣಕ್ಕೆ ಅನುಮತಿ ಇರುವುದಿಲ್ಲ. ಒಂದು ವಾರದ ಪರಿಶೀಲನೆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟ ಪಡಿಸಿದರು.

ಇನ್ನು ಒಂದೆರೆಡು ವಾರ ಕಾದು ಆ ಬಳಿಕ ಸರಕು ಮತ್ತು ಘನ ವಾಹನಗಳನ್ನು ಶಿರಾಡಿ ರಸ್ತೆಯಲ್ಲಿ ಸಂಚಾರಕ್ಕೆ ಅನುಮತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
ಶಿರಾಡಿ ಘಾಟಿಯ ಕಣಿವೆ ಭಾಗದಲ್ಲಿ ಕುಸಿತ ಉಂಟಾದ 3 ಸ್ಥಳದಲ್ಲಿ ಪೊಲೀಸ್ ಹಾಗು ಹೆದ್ದಾರಿ ಅಧಿಕಾರಿಗಳನ್ನು ದಿನದ 24 ಗಂಟೆ ನಿಯೋಜನೆ ಮಾಡಲಾಗುವುದು. ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ.
ಹೆದ್ದಾರಿಯ ಪರಿಸ್ಥಿತಿ ಅವಲೋಕಿಸಲು ಜಿಲ್ಲಾಡಳಿತದಿಂದ ಭಾರತೀಯ ವಿಜ್ಞಾನ ಸಂಸ್ಥೆ ತಜ್ಞ ತಂಗವೇಲು ಎಂಬುವವರಿಗೆ ಮನವಿ ಮಾಡಲಾಗಿದ್ದು, ಇನ್ನೊಂದು ವಾರದಲ್ಲಿ ಅವರು ಬರಲಿದ್ದಾರೆ ಎಂದು ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಶಿರಾಡಿ ಘಾಟ್ ರಸ್ತೆಯಲ್ಲಿ ಬಸ್ ಮತ್ತು ಪ್ರಯಾಣಿಕರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಹಾಸನ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸೆಪ್ಟೆಂಬರ್ 28 ರಂದು ಸಸಿಕಾಂತ್ ಸೆಂಥಿಲ್ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸೆಪ್ಟೆಂಬರ್ 27 ರ ಸಂಜೆ ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಂದೆರಡು ದಿನಗಳ ಒಳಗಾಗಿ ಶಿರಾಡಿ ಘಾಟ್ ಮಾರ್ಗವಾಗಿ ಪ್ರಯಾಣಕ್ಕೆ ಎಲ್ಲಾ ರೀತಿಯ ವಾಹನಗಳಿಗೆ ಅನುಮತಿ ನೀಡುವ ಕುರಿತು ಶೀಘ್ರ ಕ್ರಮ ಕೈಗೊಳ್ಳುವಂತೆ ಸಚಿವ ಯುಟಿ ಖಾದರ್ ಸೂಚನೆ ನೀಡಿದ್ದರು.












Click it and Unblock the Notifications