ಉಳ್ಳಾಲದಲ್ಲಿ ತೀವ್ರ ಕಡಲ್ಕೊರೆತ; ಸಚಿವ ಯು.ಟಿ ಖಾದರ್ ಭೇಟಿ
ಮಂಗಳೂರು, ಜೂನ್ 14: ಮಂಗಳೂರು ಹೊರವಲಯದ ಉಳ್ಳಾಲ, ಸೋಮೇಶ್ವರ ಪ್ರದೇಶದಲ್ಲಿ ಕಡಲ ಕೊರೆತ ಮುಂದುವರೆದಿದೆ. ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿದ್ದು ಕಡಲ ತಡಿಯಲ್ಲಿ ನೆಲೆಸಿರುವ ಜನರಲ್ಲಿ ಅತಂಕ ಹುಟ್ಟಿಸಿದೆ. ತೀವ್ರ ಕಡಲ್ಕೊರೆತದಿಂದ ತತ್ತರಿಸಿರುವ ಉಳ್ಳಾಲ ಪ್ರದೇಶಕ್ಕೆ ಇಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿದರು.
ತೀವ್ರ ಕಡಲ್ಕೊರೆತ ಸಂಭವಿಸಿರುವ ಉಳ್ಳಾಲದ ಕೈಕೋ, ಕಿಲೇರೀಯ, ಸೋಮೇಶ್ವರ, ಉಚ್ಚಿಲ ಪ್ರದೇಶಗಳಿಗೆ ತೆರಳಿ ಸಚಿವ ಯು.ಟಿ ಖಾದರ್ ಪರಿಶೀಲನೆ ನಡೆಸಿದರು. ಕಡಲಕೊರೆತದಿಂದ ಸಂತ್ರಸ್ತರಾದವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಜಿಲ್ಲಾಡಳಿತದ ಆಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜೊತೆಗಿದ್ದರು.
ಕಳೆದ 4 ದಿನಗಳಿಂದ ಉಳ್ಳಾಲ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರ ಸ್ವರೂಪ ಪಡೆದಿದ್ದು, ಈಗಾಗಲೇ ಹಲವು ಮನೆಗಳು ಸಮುದ್ರಪಾಲಾಗಿವೆ. ಕೆಲವೆಡೆ ಮಸೀದಿ ಕೂಡ ಅಪಾಯದಂಚಿಗೆ ಸಿಲುಕಿದೆ. 50ಕ್ಕೂ ಹೆಚ್ಚು ತೆಂಗಿನ ಮರಗಳು ಸಮುದ್ರದ ಪಾಲಾಗಿವೆ.

ಕಡಲ ಕೊರೆತ ಸಂಭವಿಸುತ್ತಿರುವ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪ್ರದೇಶಗಳಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ನಿನ್ನೆ ಭೇಟಿ ನೀಡಿದ್ದರು. ಕಡಲು ಪಾಲಿನ ಅಂಚಿನಲ್ಲಿರುವ ಕೋಟೆಬೈಲ್ ವಿಶ್ವನಾಥ್, ಅಬ್ದುಲ್ಲಾ, ನಾಗೇಶ್ ಅವರ ಮನೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಸರಕಾರವು ಪ್ರತೀ ವರ್ಷವೂ ಅನುದಾನಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ ತಾಂತ್ರಿಕವಾದ ಸಮರ್ಪಕ ವ್ಯವಸ್ಥೆ ಇಲ್ಲದೆ ಶಾಶ್ವತ ಪರಿಹಾರ ಸಾಧ್ಯವಾಗುತ್ತಿಲ್ಲ. ಶಾಶ್ವತ ಯೋಜನೆಯಡಿ ಹೊಸ ವೈಜ್ಞಾನಿಕ ಯೋಜನೆಯ ಅನುಷ್ಠಾನ ಪೂರ್ಣವಾಗದ ಕಾರಣ ಕಡಲ್ಕೊರೆತಗಳು ಮರುಕಳಿಸುತ್ತಿವೆ ಎಂದು ಹೇಳಿದರು.
ಕಡಲ ಕೊರೆತದ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ಉಳ್ಳಾಲ, ಉಚ್ಚಿಲದ ಕಡಲ್ಕೊರೆತ ಸಮಸ್ಯೆ ಪರಿಹಾರ ಕಾಮಗಾರಿ, ಯೋಜನೆಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಉಳ್ಳಾಲದ ಜನಪ್ರತಿನಿಧಿಗಳು, ಮೊಗವೀರ ಮುಖಂಡರೊಂದಿಗೆ ಸಭೆ ನಡೆಸಿದರು.












Click it and Unblock the Notifications