ವಿಶ್ವನಾಥ್ ವಿರುದ್ಧ ಯು ಟಿ ಖಾದರ್ ವಾಗ್ದಾಳಿ
ಮಂಗಳೂರು, ಜೂನ್ 04: ಸಿದ್ಧರಾಮಯ್ಯ ಅವರ ಬಗ್ಗೆ ವಿಶ್ವನಾಥ್ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ವಿಶ್ವನಾಥ್ ಈ ಹಿಂದೆ ಎಲ್ಲಿದ್ದರು ಎಂಬುದನ್ನು ಮೊದಲು ನೆನಪಿಸಿಕೊಳ್ಳಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ವಿದ್ಯಾರ್ಥಿಯಾಗಿದ್ದಾಗ ಅವರು ಶಿಕ್ಷಣ ಸಚಿವರಾಗಿದ್ರು. ಆಮೇಲೆ ಜೆಡಿಎಸ್ ಗೆ ಹೋಗಿ ರಾಜ್ಯಾಧ್ಯಕ್ಷರಾಗಿಲ್ವಾ? ಎಂದು ಪ್ರಶ್ನಿಸಿದರು.
ವಿಶ್ವನಾಥ್ ವಲಸೆ ಹೋಗಿಲ್ವಾ? ಸರಕಾರದಲ್ಲಿ ಸಮನ್ವಯ ಇಲ್ಲ ಅಂತ ಯಾರೂ ಹೇಳಿಲ್ಲ. ಜೆಡಿಎಸ್ ವರಿಷ್ಠ ದೇವೇಗೌಡ್ರೇ ಹೇಳಿಲ್ಲ. ನಮ್ಮ ಸಹಕಾರ ಇರೋದು ಮುಖ್ಯಮಂತ್ರಿಗೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸಹಕಾರ ಸಿಕ್ಕಿದೆ ಅಂತ ಹೇಳಿದ್ದಾರೆ. ಆದರೂ ವಿಶ್ವನಾಥ್ ಈ ರೀತಿ ಹೇಳಿರುವುದು ಸರಿಯಲ್ಲ. ನಿಮ್ಮ ಪಕ್ಷದ ಬಗ್ಗೆ ನೀವು ಚಿಂತಿಸಿ. ನಮ್ಮ ಪಕ್ಷದ ಬಗ್ಗೆ ಚಿಂತಿಸಬೇಡಿ ಎಂದು ಅವರು ಕಿಡಿಕಾರಿದರು.

ಜಿಂದಾಲ್ ಕಂಪೆನಿಯ ಜೊತೆ ಸರ್ಕಾರದ ಒಪ್ಪಂದ ವಿಚಾರದಲ್ಲಿ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಟೀಕೆಗೆ ಯುಟಿ ಖಾದರ್ ತಿರುಗೇಟು ನೀಡಿದ್ದಾರೆ. ಶ್ರೀನಿವಾಸ ಪೂಜಾರಿ ಘನತೆಗೆ ತಕ್ಕಂತೆ ಮಾತನಾಡಲಿ. ಮಾಹಿತಿ ತಿಳಿದು ಅವರು ಆರೋಪ ಮಾಡಲಿ. ಕೋಟ ಶ್ರೀನಿವಾಸ್ ಪೂಜಾರಿ ಟೀಕೆ ಸತ್ಯಕ್ಕೆ ದೂರವಾದ ವಿಚಾರ. ಸರ್ಕಾರ ನಿಯಮ ಬಿಟ್ಟು ಯಾರಿಗೂ ಉಪಕಾರ ಮಾಡಿಲ್ಲ. ಬರಡು ಭೂಮಿ ಎಂದಾಗ ಕಂಪೆನಿ ಮುಂದೆ ಬಂದಿದೆ. ನಿಯಮದ ಪ್ರಕಾರ ಒಪ್ಪಂದ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.












Click it and Unblock the Notifications