ರಾಜ್ಯದಲ್ಲೇ ಮೊದಲು; ಮಂಗಳೂರು ಪೊಲೀಸರ ಪ್ರಾಪರ್ಟಿ ರಿಟರ್ನ್ ಪರೇಡ್
ಮಂಗಳೂರು, ನವೆಂಬರ್ 26; ಕಳ್ಳತನ, ದರೋಡೆ, ಸುಲಿಗೆ ಇಂತಹ ಪ್ರಕರಣಗಳಲ್ಲಿ ಪೊಲೀಸರು ತಾವು ವಶಪಡಿಸಿಕೊಂಡ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ನೀಡುವ ಕಾರ್ಯಕ್ರಮ ಪೊಲೀಸ್ ಪ್ರಾಪರ್ಟಿ ರಿಟರ್ನ್ ಪರೇಡ್. ಇದೊಂದು ಪೊಲೀಸ್ ಇಲಾಖೆಯ ಸಾಮಾನ್ಯ ಪ್ರಕ್ರಿಯೆ. ಸಾಮಾನ್ಯವಾಗಿ ವರ್ಷದಲ್ಲಿ ಒಂದೆರಡು ಬಾರಿ ನಡೆಸಲಾಗುವ ಈ ಪರೇಡ್ನಲ್ಲಿ ವಶಪಡಿಸಿಕೊಂಡ ಮಾಲುಗಳನ್ನು ಪ್ರದರ್ಶಿಸಿ ನಂತರ ಕಳೆದುಕೊಂಡ ವಾರಸುದಾರರಿಗೆ ಹಿಂದಿರುಗಿಸುತ್ತಾರೆ. .
ಆದರೆ ಮಂಗಳೂರು ನಗರ ಪೊಲೀಸರು ವಿಭಿನ್ನ ಶೈಲಿಯಲ್ಲಿ ಈ ಪ್ರಾಪರ್ಟಿ ಪರೇಡ್ ಅನ್ನು ಈ ವರ್ಷ ಮಾಡಿದ್ದಾರೆ. ಮಂಗಳೂರಿನ ಪುರಭವನ ಬಳಿ ಸುಮಾರು 2 ಕೋಟಿಗೂ ಅಧಿಕ ಮೊತ್ತದ ಪ್ರಾಪರ್ಟಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ವಿಶಿಷ್ಟ ಪರೇಡ್ ಅನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇದ್ರ ಉದ್ಘಾಟನೆ ಮಾಡಿದರು. ಪೊಲೀಸರು ವಿನೂತನ ಪ್ರಯೋಗಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಇನ್ನು ಕೇವಲ ಪ್ರಾಪರ್ಟಿಗಳನ್ನು ಮಾತ್ರವಲ್ಲ ಪೊಲೀಸ್ ಆಯುಕ್ತರ ವಾಹನದಿಂದ ಹಿಡಿದು ಪೊಲೀಸರ ವಾಹನಗಳು ಮತ್ತು ಪೊಲೀಸರು ಬಳಸುವ ಶಸ್ತ್ರಾಸ್ತಗಳು, ಸೈಬರ್ ಪೊಲೀಸರು ಬಳಸುವ ವಸ್ತುಗಳು, ಬಾಂಬ್ ಸ್ಕ್ವಾಡ್ ಬಳಸುವ ಕೆಮಿಕಲ್ ಹೀಗೆ ವಿವಿಧ ಬಗೆಯ ಪೊಲೀಸ್ ಪರಿಕರಗಳನ್ನು ಪ್ರದರ್ಶಿಸಲಾಗಿತ್ತು.
ಇನ್ನು ಇಲ್ಲಿ ಕೇವಲ ಸ್ವತ್ತು ಕಳೆದುಕೊಂಡವರಿಗೆ ಮಾತ್ರ ಆಹ್ವಾನ ನೀಡಲಾಗಿರಲಿಲ್ಲ. ಬದಲಿಗೆ ಮಂಗಳೂರಿನ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಹ್ವಾನ ನೀಡಲಾಗಿತ್ತು. ಅವರು ಬಂದು ಪ್ರಾಪರ್ಟಿ ಪರೇಡ್ ಹೇಗಿರುತ್ತದೆ?. ಕಳ್ಳತನವಾಗಿ ಸಿಕ್ಕ ಮಾಲುಗಳನ್ನು ಹೇಗೆ ಹಿಂದಿರುಗಿಸುತ್ತಾರೆ?. ಕಳೆದುಕೊಂಡವರು ಏನು ಹೇಳುತ್ತಾರೆ? ಅನ್ನೊದನ್ನು ಬಹಳ ಕುತೂಹಲದಿಂದ ಗಮನಿದರು.

ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು
ಇನ್ನು ಪೊಲೀಸ್ ಠಾಣೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ?. ಪೊಲೀಸರು ಯಾವ ಯಾವ ಆಯುಧಗಳನ್ನು ಬಳಸುತ್ತಾರೆ?. ಸೈಬರ್ ಕ್ರೈಂ ಬ್ರಾಂಚ್, ಮಹಿಳಾ ಠಾಣೆಗಳು, ಶ್ವಾನದಳ ಮತ್ತು ಪೊಲೀಸ್ ವಿಶೇಷ ಘಟಕಗಳು ಹೇಗಿರುತ್ತೆ? ಅನ್ನುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ವಿಮೆ ಇಲ್ಲದ ವಾಹನಗಳ ಕಥೆ, ವ್ಯಥೆ
ಇನ್ನು ಇನ್ಶೂರೆನ್ಸ್ ಇಲ್ಲದ ವಾಹನಗಳನ್ನು ಬಳಿಸಿದರೆ ಯಾವ ಪರಿಸ್ಥಿತಿ ಬರುತ್ತೆ ಅನ್ನೊದನ್ನು ವಿಶಿಷ್ಟವಾಗಿ ಮನವರಿಕೆ ಮಾಡಿಸಲಾಯ್ತು. ಇನ್ಶುರೆನ್ಸ್ ಇಲ್ಲದ ವಾಹನಗಳನ್ನು ಸಾಲಿನಲ್ಲಿ ಇರಿಸಿ ಪೊಲೀಸರು ಯಾಕೆ ಸೀಝ್ ಮಾಡಿದರು. ವಾಹನಗಳು ಇನ್ನೂ ಯಾಕೆ ಪೊಲೀಸರ ಸುಪರ್ದಿಯಲ್ಲೇ ಇದೆ ಎಂಬುವುದರ ಬಗ್ಗೆ ವಾಹನಗಳ ಆರ್ತನಾದ ರೂಪದಲ್ಲಿ ಬ್ಯಾನರ್ ಹಾಕಲಾಗಿತ್ತು. ಇನ್ನು ಮಂಗಳೂರಿನ ಖತರ್ನಾಕ್ ಗ್ಯಾಂಗ್ಗಳ ಫೋಟೋವನ್ನು ಹೆಸರು, ಫೋಟೋ ಸಮೇತ ಹಾಕಲಾಗಿತ್ತು.

105 ಬೈಕ್, 1 ಲಾರಿ ಪ್ರದರ್ಶನದಲ್ಲಿತ್ತು
ಈ ಪರೇಡ್ನಲ್ಲಿ 2020 ಮತ್ತು 2021ನೇ ಸಾಲಿನಲ್ಲಿ ವಶ ಪಡಿಸಿಕೊಂಡ 2 ಕೋಟಿ 90 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಾರಸುಸುದಾರರಿಗೆ ಹಿಂದುರುಗಿಸಿದ್ದಾರೆ. 105 ದ್ವಿಚಕ್ರ ವಾಹನ, 20 ಚತುಶ್ಚಕ್ರ ವಾಹನ, 1 ಲಾರಿ, 135 ಮೊಬೈಲ್ ಫೋನ್, 20 ಕೆಜಿ 490 ಗ್ರಾಂ ಬೆಳ್ಳಿ, 3 ಕೆಜಿ 590 ಗ್ರಾಂ ಚಿನ್ನ ಹಾಗೂ 38,67,791 ರೂಪಾಯಿ ನಗದನ್ನು ವಾರಸುದಾರರಿಗೆ ಹಿಂದುರುಗಿಸಲಾಗಿದೆ.
Recommended Video

ಉಡುಪಿಯಲ್ಲಿಯೂ ಕಾರ್ಯಕ್ರಮ
ಇನ್ನು ಉಡುಪಿ ಜಿಲ್ಲೆಯಲ್ಲೂ ನಡೆದ ವಿವಿಧ ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮ ನಗರದ ಚಂದು ಮೈದಾನದಲ್ಲಿ ನಡೆದಿದೆ. 2020ನೇ ಸಾಲಿನಲ್ಲಿ 45 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಕಳುವಾದ ಸುಮಾರು 3.13 ಕೋಟಿ ಮೌಲ್ಯದ ಸ್ವತ್ತುಗಳು ಪೈಕಿ, 58.47 ಲಕ್ಷ ಮೌಲ್ಯದ ಸತ್ತು ಪತ್ತೆಹಚ್ಚಿ ಹಸ್ತಾಂತರಿಸಲಾಯ್ತು.
2021ರಲ್ಲಿ 161 ಪ್ರಕರಣಗಳು ದಾಖಲಾಗಿದ್ದು, ಈವರೆಗೆ 31 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಕಳುವಾದ 2.61 ಕೋಟಿ ಮೌಲ್ಯದ ಸ್ವತ್ತುಗಳು ಪೈಕಿ 32.31 ಮೌಲ್ಯದ ಸ್ವತ್ತು ಪತ್ತೆಹಚ್ಚಲಾಗಿದೆ. ಕೊರೋನಾದ ಬಳಿಕ ಜಿಲ್ಲೆಯಲ್ಲಿ ರಾತ್ರಿ ಕಳುವು ಪ್ರಕರಣಗಳು ಅತ್ಯಂತ ಹೆಚ್ಚಾಗಿದ್ದು, ಕಳೆದ ವರ್ಷ 42 ಮತ್ತು ಈ ವರ್ಷ ಈವರೆಗೆ 54 ಪ್ರಕರಣಗಳು ದಾಖಲಾಗಿವೆ.












Click it and Unblock the Notifications