ಸೌದಿಯಲ್ಲಿ ರಸ್ತೆ ಅಪಘಾತ, ಮಂಗಳೂರಿನ ಇಬ್ಬರ ಸಾವು
ಮಂಗಳೂರು, ಸೆ.16 : ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮಂಗಳೂರಿನ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಸಂಬಂಧಿಕರಾದ ಇಬ್ಬರು ಎರಡು ವರ್ಷದಿಂದ ಸೌದಿಯಲ್ಲಿದ್ದರು ಎಂದು ತಿಳಿದುಬಂದಿದೆ.
ಮೃತಪಟ್ಟವರನ್ನು ಗುರುಪುರ ಅಡೂರಿನ ಮಹಮದ್ ಶಾರೂಕ್ (24) ಮತ್ತು ಜೋಕಟ್ಟೆಯ ಮಹಮದ್ ಶಕೀರ್ (23) ಎಂದು ಗುರುತಿಸಲಾಗಿದೆ. ಪರಸ್ಪರ ಸಂಬಂಧಿಕರಕಾದ ಇಬ್ಬರು ಸೌದಿ ಅರೇಬಿಯಾದ ಜುಬೈಲ್ನಲ್ಲಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶಾರೂಕ್ ಮ್ಯಾನೇಜರ್ ಆಗಿ ಹಾಗೂ ಶಕೀರ್ ಕಂಪ್ಯೂಟರ್ ಆಪರೇಟರ್ ಕೆಲಸ ನಿರ್ವಹಿಸುತ್ತಿದ್ದರು.

ಸೌದಿಯಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದ ಇಬ್ಬರು, ಎರಡು ವರ್ಷಗಳ ಹಿಂದೆ ಸೌದಿಗೆ ತೆರಳಿದ್ದರು. ಶಾರೂಕ್ ಮಂಗಳೂರಿನ ವಾಮಂಜೂರು ಸೈಂಟ್ ರೇಮಂಡ್ಸ್ ಕಾಲೇಜಿನಲ್ಲಿ ಪಿಯುಸಿ ತನಕ ಓದಿದ್ದು, ಬಳಿಕ ಫೈರ್ ಆ್ಯಂಡ್ ಸೇಫ್ಟಿ ಎಂಜಿನಿಯರಿಂಗ್ ಪದವಿ ಕೋರ್ಸು ಮಾಡಿದ್ದರು. ಶಕೀರ್ ಹಿಂದೆ ಮೊಬೈಲ್ ಫೋನ್ ಅಂಗಡಿಯನ್ನು ನಡೆಸುತ್ತಿದ್ದರು ನಂತರ ಅದನ್ನು ಮುಚ್ಚಿ ಸೌದಿಗೆ ಹೋಗಿದ್ದರು.
ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಜುಬೈಲ್ನಿಂದ ದಮಾಮ್ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಪಲ್ಟಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. [ಚಿತ್ರ : ಐಸಾಕ್ ರಿಚರ್ಡ್ ಮಂಗಳೂರು]












Click it and Unblock the Notifications